ಕೋಲಾರ: ಪ್ರಯಾಣಿಕರ ಮೇಲೆ ಹರಿದ ರೈಲು; ಓರ್ವ ಮೃತ್ಯು, ಇಬ್ಬರು ಗಂಭೀರ
ಕೋಲಾರ: ರೈಲಿಗೆ ಹರಿದು ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಕೋಲಾರದ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಯಾಣಿಕರ ಮೇಲೆ ಎಕ್ಸ್ಪ್ರೆಸ್ ರೈಲು ಹರಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡೂ ಬದಿ ಪ್ಯಾಸೆಂಜರ್ ರೈಲು ನಿಂತಿದ್ದು, ಮಾರಿಕುಪ್ಪಂ-ಎಸ್ ಬಿಎಸ್ ಮತ್ತು ಕುಪ್ಪಂ ಮತ್ತು ಎಸ್ ಬಿಸಿ ರೈಲುಗಳು ಆಗಮಿಸಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಕಡಿತದಿಂದಾಗಿ ರೈಲುಗಳು ಮಾರ್ಗ ಮಧ್ಯೆ ನಿಂತಿದ್ದವು.
ಅದೇ ವೇಳೆಗೆ ಬೆಂಗಳೂರು- ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ರೈಲ್ವೆ ಅಧಿಕಾರಿಗಳು ಸಿಗ್ನಲ್ ನೀಡಿದ್ದು, ರೈಲು ಇಳಿದು ಹಳಿ ಮೇಲೆ ಪ್ರಯಾಣಿಕರು ನಿಂತಿದ್ದರು. ಅಷ್ಟರಲ್ಲಿ ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ ರೈಲು ವೇಗವಾಗಿ ನುಗ್ಗಿ ಬಂದಿದ್ದು, ಪ್ರಯಾಣಿಕರು ಬಚಾವ್ ಆಗಲು ಯತ್ನಿಸುವ ವೇಳೆಗೆ ಢಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ಸತತವಾಗಿ ಹಾರ್ನ್ ಮಾಡುತ್ತಿದ್ದರೂ ಕೂಡ ಜನ ಹಳಿ ಮೇಲೆ ನಿಂತಿದ್ದರು. ಹೀಗಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಟೇಕಲ್ ಹೊರಠಾಣೆ, ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.