×
Ad

ವೀರಪ್ಪ ಮೊಯಿಲಿ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ ಕೃತಿ ಮಾ.12ಕ್ಕೆ ಬಿಡುಗಡೆ

Update: 2022-03-10 00:54 IST

ಬೆಂಗಳೂರು, ಮಾ.9: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ ಕೃತಿ ಮಾ.12ರಂದು ಸಂಜೆ 4ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗಲಿದೆ. 

ಈ ಕುರಿತು ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೀರಪ್ಪ ಮೊಯಿಲಿ ಅವರು, ‘ನನ್ನ ಬೊಗಸೆಯ ಆಕಾಶ’ ಪುಸ್ತಕವನ್ನು 12ರಂದು ಜಾಗತಿಕ ಲೋಕಕ್ಕೆ ನೀಡುತ್ತೇನೆ. ಹಾಗೆಂದು, ಇದನ್ನು ರಸವತ್ತಾಗಿ ಬರೆದಿಲ್ಲ. ವಾಸ್ತವಾಂಶದಿಂದ ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಮುನ್ನುಡಿ ಬರೆದಿದ್ದಾರೆ’ ಎಂದರು. ಶಾಸಕ ಜಿ. ಪರಮೇಶ್ವರ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

ಸಿಎಂ ಆದ ಕ್ಷಣ, ತೆರಿಗೆ ಸುಧಾರಣಾ ಆಯೋಗ, ಲೋಕಸಭಾ ಚುನಾವಣೆ, ನಾನೇಕೆ ಕಾಂಗ್ರೆಸ್ ಪಕ್ಷ ಆರಿಸಿಕೊಂಡೆ, ದೇವರಾಜ ಅರಸು ಅವರ ಎಚ್ಚರಿಕೆ- ಸೋಲಿಲ್ಲದ ಸರದಾರ, ಭೂ ಸುಧಾರಣೆ-ಕ್ರಾಂತಿಪಥ, ಮಾತು ಬಿಟ್ಟ ಇಂದಿರಾಗಾಂಧಿ, ಕೇರಳ ರಾಜ್ಯದ ರಾಜಕೀಯ ಸ್ಥಿತ್ಯಂತರ, ರಾಜಕೀಯ ಕಂಪನ, ರಾಜಕೀಯ ಹಗ್ಗ ಜಗ್ಗಾಟ, ಆಡಳಿತದಲ್ಲಿ ಹೊಸ ಶಕೆ, ಶಿಕ್ಷಣ ಕ್ರಾಂತಿ, ಕನಸಿನ ಯೋಜನೆಗಳಿಗೆ ಮುಕ್ತಿ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದೇನೆ’ ಎಂದು ಅವರು ವಿವರಿಸಿದರು.

‘ಒಂದು ಆತ್ಮಕಥನ ಬರೆಯಬೇಕು ಅಂದಾಗ ನಿಜ ಇರಬೇಕು. ಆದರೆ, ಅದನ್ನು ಬರೆಯುವುದು ಬಹಳ ಕಷ್ಟ. ರಾಜಕಾರಣದಲ್ಲಿದ್ದಾಗ ಪೂರ್ಣ ಸತ್ಯಾಂಶ ಬರೆಯಲು ಸಾಧ್ಯವಾಗುವುದಿಲ್ಲ. ನಾನು ಅನುಮಾನದಿಂದಲೇ ಬರೆಯಲು ಆರಂಭಿಸಿದ್ದೆ. ತುಂಬಾ ಜನ ಬರೆಯಲು ಹೇಳಿದರು. ಕೆಲವರು ರಸವತ್ತಾಗಿ ಬರೆಯಿರಿ ಎಂದರು. ಆದರೆ, ಅದು ಸಾಧ್ಯವಿಲ್ಲ ಎಂದೆ. ನನಗೆ ದಿನಚರಿ ಬರೆಯುವ ಅಭ್ಯಾಸವಿಲ್ಲ. ನಕಾರಾತ್ಮಕ ಭಾವನೆಗಳನ್ನು ತುಂಬಿಸುವ ಪ್ರಯತ್ನ ಮಾಡಿಲ್ಲ. ನನಗೆ ನಾನೇ ಮಾತನಾಡಿಕೊಳ್ಳುವುದೆಂದರೆ ಇಷ್ಟ. ನಮ್ಮಲ್ಲಿ ಅದ್ಭುತ ವ್ಯಕ್ತಿಯೊಬ್ಬ ಒಳಗಿರುತ್ತಾನೆ. ಅದನ್ನು ಹೊರ ತರಬೇಕಾಗುತ್ತದೆ. ನಿಮ್ಮನ್ನು ದ್ವೇಷ ಮಾಡುವವರನ್ನು ದ್ವೇಷ ಮಾಡಬೇಡಿ. ಯಾಕೆಂದರೆ ಅವರೇ ನಿಮ್ಮ ನಿಜವಾದ ವಿಮರ್ಶಕರು’ ಎಂದು ವಿಶ್ಲೇಷಿಸಿದರು.

‘ಭ್ರಷ್ಟಾಚಾರದ ಮೂಲಕ ರಾಜಕೀಯ ನಡೆಸಬಾರದು. ಈ ಪುಸ್ತಕದಲ್ಲಿ ವಸ್ತುನಿಷ್ಠತೆಯನ್ನು ನೀವು ಕಾಣಬಹುದು. ಲಕೋಟೆ ಮುಖ್ಯಮಂತ್ರಿ ಅಂತ ಯಾಕೆ ಬಂತು. ಆ ವಿಚಾರವನ್ನು ಕೂಡಾ ಈ ಪುಸ್ತಕದಲ್ಲಿ ಬರೆದಿದ್ದೇನೆ. ಇದರಲ್ಲಿ ನನಗೆ ನಾಚಿಕೆಯೇನೂ ಇಲ್ಲ. ಲಕೋಟೆ ಹಿಂದೆ ಒಂದು ಸತ್ಯಾಂಶ ಇದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿದೆ’ ಎಂದರು.

‘ಪವಾಡಗಳಿಗಾಗಿ ಕಾಯಬೇಡಿ. ನಿಮ್ಮ ಜೀವನವೇ ಒಂದು ಪವಾಡ. ಸಮಯವೇ ನನ್ನ ಪ್ರತಿಸ್ಪರ್ಧಿ. ಸಮಯವೇ ನನ್ನ ವೇಗ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರ ನಡೆಸಿದ್ದೇನೆ. ನಾಲ್ಕು ಕವನ ಸಂಕಲನಗಳನ್ನು ಬರೆದಿದ್ದೇನೆ. ಮೂರು ಕಾದಂಬರಿ, ಮೂರು ಮಹಾಕಾವ್ಯಗಳನ್ನು ಬರೆದಿದ್ದೇನೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News