ನಾಗರಹೊಳೆ : ಆನೆ ಕಂದಕಕ್ಕೆ ಬಿದ್ದು ಹುಲಿ ಸಾವು

Update: 2022-03-11 13:09 GMT

ಮಡಿಕೇರಿ ಮಾ.11 : ಆನೆ ಕಂದಕದಲ್ಲಿ ಬಿದ್ದು ಹುಲಿ ಸಾವನ್ನಪ್ಪಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಆನಚೌಕೂರು ವನ್ಯಜೀವಿ ವಲಯದ ಚೀಣಿಹಡ್ಲುವಿನಲ್ಲಿ ನಡೆದಿದೆ.

 ಮತ್ತಿಗೋಡು ಶಾಖೆಯ ಮರಪಾಲ ಗಸ್ತಿನಲ್ಲಿ ಅರಣ್ಯ ರಕ್ಷಕರು ಮತ್ತು ಸಿಬ್ಬಂದಿಗಳು ಗಸ್ತು ಮಾಡುವಾಗ ಚೀಣಿಹಡ್ಲು ಹಾಡಿಯ ಹಿಂಭಾಗದ ಆನೆ ತಡೆ ಕಂದಕದ ಒಳಗೆ ಹುಲಿಯು ಸಾವನ್ನಪ್ಪಿರುವುದು ಗೋಚರಿಸಿದೆ. 

ಸ್ಥಳಕ್ಕೆ ಹುಣಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹುಣಸೂರು ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಆನೆಚೌಕೂರು ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣೆಗೆ ನಿದೇರ್ಶನಗೊಂಡ ಮುಖ್ಯ ವನ್ಯಜೀವಿ ಪರಿಪಾಲಕ ಬೋಸ್ ಮಾದಪ್ಪ, ಸದಸ್ಯರಾದ ಶರೀನ್ ಸುಬ್ಬಯ್ಯ ಅವರ ಸಮ್ಮುಖದಲ್ಲಿ ಇಲಾಖಾ ಪಶುವೈದ್ಯಾಧಿಕಾರಿ ರಮೇಶ್ ಹಾಗೂ ಬಾಳೆಲೆ ಪಶುವೈದ್ಯಾಧಿಕಾರಿಗಳಾದ ಡಾ.ಭವಿಷ್ಯ ಕುಮಾರ್ ಅವರುಗಳು ಹುಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. 

ಹೆಚ್ಚಿನ ಪರೀಕ್ಷೆಗಾಗಿ ಹುಲಿಯ ಮೃತ ದೇಹದ ಮಾದರಿಗಳನ್ನು ಸಂಗ್ರಹಿಸಿ ಸ್ಥಳದಲ್ಲಿಯೇ ಹುಲಿಯ ಮೃತದೇಹವನ್ನು ಪಂಚಾಯಿತಿದಾರರ ಸಮಕ್ಷಮದಲ್ಲಿ ಸುಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News