ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದಲ್ಲೂ ಪುನರಾವರ್ತನೆ: ಸಿ.ಟಿ.ರವಿ ವಿಶ್ವಾಸ
ಬೆಂಗಳೂರು, ಮಾ.11: ಪಂಚರಾಜ್ಯ ಚುನಾವಣೆಯ ಮಾದರಿಯಲ್ಲಿ ಫಲಿತಾಂಶವು ಕರ್ನಾಟಕದಲ್ಲೂ ಬರಲಿದೆ 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಸೌಧದಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಮತ್ತಿತರ ರಾಜ್ಯಗಳಲ್ಲಿ ಬಂದ ಫಲಿತಾಂಶ ರಾಜ್ಯದಲ್ಲೂ ಪುನರಾವರ್ತನೆ ಆಗಲಿದೆ ಎಂಬುದನ್ನು ಕಾಂಗ್ರೆಸ್ನವರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಒಡೆದಾಳುವ, ಮತೀಯವಾದದ, ಅಭಿವೃದ್ಧಿಹೀನ ರಾಜಕೀಯ ನಡೆಯುವುದಿಲ್ಲ.
ಕರ್ನಾಟಕದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕರ್ನಾಟಕದ ಜನ ಯಾವಾಗಲೂ ರಾಷ್ಟ್ರ ಹಿತದ ಪರವಾಗಿ ಮತ ಹಾಕಿದ್ದಾರೆ ಎಂದು ತಿಳಿಸಿದರು.
4 ರಾಜ್ಯಗಳಲ್ಲಿ ಸಿಕ್ಕಿದ ಗೆಲುವು ಆಡಳಿತಪರ ಅಲೆಗೆ ಸಿಕ್ಕಿದ ಜನಮತ. ಅಭಿವೃದ್ಧಿ ಆಧರಿತ, ಜನಸ್ನೇಹಿ, ರಾಷ್ಟ್ರಹಿತದ ರಾಜಕಾರಣಕ್ಕೆ ಮತ ಲಭಿಸಿದೆ. ಜಾತಿ ಆಧರಿತ ರಾಜಕೀಯ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಗೆಲುವು ಖಚಿತ ಎಂಬ ಕಾಲ ಈಗ ಇಲ್ಲ. ಗೋವಾ ಚುನಾವಣೆ ಫಲಿತಾಂಶ ಬರುವ ಮೊದಲೇ ಕೆಲವರು ಕರ್ನಾಟಕದಿಂದ ವಿಶೇಷ ವಿಮಾನದಲ್ಲಿ ತೆರಳಿದರು. ಫಲಿತಾಂಶಕ್ಕೂ ಮೊದಲು ಕಾಂಗ್ರೆಸ್ನವರು ಸರಕಾರ ರಚನೆ ಸಂಬಂಧ ರಾಜ್ಯಪಾಲರ ಸಮಯ ನಿಗದಿಪಡಿಸಿದ್ದರು. ಬಂದ ದಾರಿಗೆ ಸುಂಕ ಇಲ್ಲದೇ ಹಿಂತಿರುಗಬೇಕಾಯಿತು ಎಂದು ಅವರು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಭಿವೃದ್ಧಿಯೂ ಇಲ್ಲದ ನೀತಿರಹಿತ ರಾಜಕಾರಣ ಮಾಡುತ್ತಿದೆ. ಕುಟುಂಬದ ನೆಲೆಯಿಂದ ಹೊರಗೆ ನಾಯಕತ್ವಕ್ಕೆ ನೆಲೆ ಒದಗಿಸಲಾಗದ ಸ್ಥಿತಿಯನ್ನು ಅದು ತಲುಪಿದೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಆಡಳಿತ ಇತ್ತು. ಅಲ್ಲಿ ಆಡಳಿತ ವಿರೋಧಿ ಫಲಿತಾಂಶ ಬಂದರೆ, 4 ರಾಜ್ಯಗಳಲ್ಲಿ ಆಡಳಿತ ಪರ ಫಲಿತಾಂಶ ಬಂದಿದೆ. ಇದು ಗಮನಿಸಬೇಕಾದ ಅಂಶ ಎಂದು ಅವರು ವಿಶ್ಲೇಷಿಸಿದರು.
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜನಮನ ಗೆದ್ದಿರುವುದಕ್ಕೆ ಮಣಿಪುರದ ಗೆಲುವು ನಿದರ್ಶನವಾಗಿದೆ. ಗೋವಾದಲ್ಲಿ ಮೂರನೇ ಬಾರಿಗೆ ಗೆದ್ದಿರುವುದು ಒಂದು ಐತಿಹಾಸಿಕ ದಾಖಲೆಯಾಗಿದೆ. ಇದು ರಾಷ್ಟ್ರವಾದ, ಸ್ಥಿರ ಸರಕಾರಕ್ಕೆ ಜನರ ಬಳುವಳಿ. ಒಂದು ದೇಶ ಒಂದು ಚುನಾವಣೆಯು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅನುಷ್ಠಾನಕ್ಕೆ ಬರಬೇಕು. 5 ವರ್ಷಗಳ ಕಾಲ ಅಲ್ಲಲ್ಲಿ ಚುನಾವಣೆ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತವಲ್ಲ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಭೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಆನಂದ್ ಸಿಂಗ್, ಶಾಸಕರಾದ ಅರವಿಂದ ಬೆಲ್ಲದ್ ಮತ್ತು ರಾಜು ಗೌಡ ಉಪಸ್ಥಿತರಿದ್ದರು.