ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್: ಸಚಿವ ಶ್ರೀರಾಮುಲು ಭರವಸೆ

Update: 2022-03-13 12:22 GMT

ಗದಗ, ಮಾ. 13:  ‘ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.  

ರವಿವಾರ ಜಿಲ್ಲೆಯ ಶಿರಹಟ್ಟಿಯಲ್ಲಿ ನೂತನ ಸಾರಿಗೆ ಘಟಕ ಉದ್ಘಾಟನೆ ಹಾಗೂ ವಾಯುವ್ಯ ಸಾರಿಗೆ ನಿಗಮದ ಒಂಬತ್ತು ವಿಭಾಗಗಳ ಅಪಘಾತ ರಹಿತ ಚಾಲಕರಿಗೆ ಬಂಗಾರ ಮತ್ತು ಬೆಳ್ಳಿ ಪದಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆ ಜೊತೆಗೆ ಮುಷ್ಕರದ ವೇಳೆ ಅಮಾನತುಗೊಂಡವರನ್ನು ಮೂಲ ಸ್ಥಾನಕ್ಕೆ ನಿಯೋಜಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಭರವಸೆ ನೀಡಿದ್ದಾರೆ.

ಜೀವನವೆಂಬ ಯುದ್ಧದಲ್ಲಿ ಸಾರಿಗೆ ಬಸ್ ಚಾಲಕರು ಶ್ರೀಕೃಷ್ಣನಂತೆ ಸಾರಥಿಯಾಗಿದ್ದಾರೆ. ದಿನ ನಿತ್ಯ ಸಂಚಾರದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು. ಹೀಗಾಗಿ ಅಪಘಾತ ರಹಿತವಾಗಿ 15 ವರ್ಷ ಸೇವೆ ಸಲ್ಲಿಸಿದದವರಿಗೆ ಚಿನ್ನ ಹಾಗೂ ಐದು ವರ್ಷ ಸೇವೆ ಸಲ್ಲಿಸಿದವರಿಗೆ ಬೆಳ್ಳಿ ಪದಕ ನೀಡಲಾಗಿದೆ ಎಂದು ಪದಕ ಪುರಸ್ಕೃತರಿಗೆ ಅಭಿನಂದಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ ವೇಳೆ ಸಾರಿಗೆ ಸಿಬ್ಬಂದಿಗಳ ವೇತನ ಪರಿಷ್ಕರಣೆ ಕುರಿತು ಪ್ರಸ್ತಾಪಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಬಾರಿ ಸಾಧ್ಯವಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ವೇತನ ಪರಿಷ್ಕರಣೆ ಮಾಡಿಕೊಡುವುದಾಗಿ ಹೇಳಿದರು.

ಅಲ್ಲದೇ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸಿದ ಮುಷ್ಕರದ ವೇಳೆ ಅಮಾನತುಗೊಂಡ ಸಿಬ್ಬಂದಿಯನ್ನು ಮಾನವೀಯತೆ ದೃಷ್ಟಿಯಿಂದ ಮತ್ತೆ ಸೇವೆಗೆ ನೇಮಿಸಿಕೊಳ್ಳಲಾಗಿದೆ. ಅವರನ್ನು ಮೂಲ ಘಟಕಗಳಿಗೆ ನಿಯೋಜಿಸಬೇಕು ಎಂಬ ಬೇಡಿಕೆಯಿದೆ. ಆದರೆ, ಮುಷ್ಕರ ನಿರತರ ಆ ಪೈಕಿ 800 ಜನರ ಪ್ರಕರಣಗಳು ಕೋರ್ಟ್ ನಲ್ಲಿವೆ. ಅವು ಕಾರ್ಮಿಕ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಬಳಿಕ ಸೂಕ್ತ ಕ್ರಮ ವಹಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಸಂಬಳಕ್ಕಾಗಿ ನಿಲ್ದಾಣಗಳ ಅಡಮಾನ: ಸಾರಿಗೆ ನಿಲ್ದಾಣಗಳ ಅಡಮಾನ ವಿಚಾರವನ್ನು ಸಮರ್ಥಿಸಿಕೊಂಡ ಸಚಿವರು, ಸಾರಿಗೆ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ಒಂದೂವರೆ ತಿಂಗಳ ಬಾಕಿ ವೇತನ ಪಾವತಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News