×
Ad

ರಾಜ್ಯದಲ್ಲಿ ನೆನೆಗುದಿಗೆ ಬಿದ್ದ ಶಾದಿ ಮಹಲ್ ಕಟ್ಟಡ ಕಾಮಗಾರಿ ಪೂರ್ಣಕ್ಕೆ ಕ್ರಮ: ಸಚಿವ ಮಾಧುಸ್ವಾಮಿ

Update: 2022-03-15 21:56 IST

ಬೆಂಗಳೂರು, ಮಾ. 15: ‘ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ 153 ಶಾದಿ ಮಹಲ್‍ಗಳ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿ ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಲಾಗುವುದು' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಗೆ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಅಜಯ್ ಧರ್ಮಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಒಟ್ಟು 153 ಶಾದಿ ಮಹಲ್‍ಗಳ ಕಟ್ಟಡಗಳು ವಿವಿಧ ಕಾರಣಗಳಿಂದ ಪೂರ್ಣಗೊಂಡಿಲ್ಲ. ಇವುಗಳನ್ನು ಪೂರ್ಣಗೊಳಿಸಲು ಸುಮಾರು ಕನಿಷ್ಟ 58 ಕೋಟಿ ರೂ.ಗಳಿಂದ 60 ಕೋಟಿ ರೂ.ಗಳಷ್ಟು ಹಣಬೇಕು. ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದರು.

‘ಯಾವ ಕಟ್ಟಡಗಳನ್ನು ನಾವು ಪೂರ್ಣಗೊಳಿಸದೆ ಹಾಳಾಗಲು ಬಿಡುವುದಿಲ್ಲ. 2020-21ರಲ್ಲಿ ಶಾದಿ ಮಹಲ್ ಕಟ್ಟಡಗಳನ್ನು ಆರಂಭಿಸಿರಲಿಲ್ಲ. ಸುಮಾರು 123 ಶಾಸಕರು ಶಾದಿಮಹಲ್ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಹಣಕಾಸಿನ ಲಭ್ಯತೆ ನೋಡಿಕೊಂಡು ಹಂತ-ಹಂತವಾಗಿ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು' ಎಂದು ಅವರು ತಿಳಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಹಿರಿಯ ಸದಸ್ಯ ಅಮರೇಗೌಡ ಬಯ್ಯಾಪುರ್, `ರಾಜ್ಯದ ಒಟ್ಟು 15 ಕಡೆ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 10 ಕಡೆ ಶಾಲೆಗಳು, 5 ಕಡೆ ಹಾಸ್ಟೆಲ್‍ಗಳನ್ನು ನಿರ್ಮಿಸಿದ್ದಾರೆ. ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇಲ್ಲ' ಎಂದು ದೂರಿದರು. ಇದಕ್ಕೆ ಆಕ್ಷೇಪಿಸಿದ ಮಾಧುಸ್ವಾಮಿ, ಶಾದಿಮಹಲ್‍ಗೂ ಸದಸ್ಯರ ಈ ಪ್ರಶ್ನೆಗೂ ಸಂಬಂಧವಿಲ್ಲ. ಬಸವೇಶ್ವರನಗರದಲ್ಲಿ ಬಸವನಗುಡಿ ಬಗ್ಗೆ ಪ್ರಶ್ನಿಸಿದರೆ ಉತ್ತರ ಕೊಡುವುದು ಹೇಗೆ? ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News