ಬೆಂಗಳೂರು, ಮಂಗಳೂರು, ಗದಗ, ರಾಯಚೂರು ಸೇರಿದಂತೆ 78 ಕಡೆ ಎಸಿಬಿ ದಾಳಿ
ಬೆಂಗಳೂರು, ಮಾ.16: ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ನೀಡಿದ್ದು, ಬೆಂಗಳೂರಿನ ಮೂರು ಕಡೆ, ಮಂಗಳೂರು, ಗದಗ ಹಾಗೂ ರಾಯಚೂರು ಸೇರಿದಂತೆ 78 ಕಡೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ಮಾಡಿದ್ದು, ಸುಮಾರು 3 ಕೆಜಿ ಶ್ರೀಗಂಧ ಸಹಿತ ಅಪಾರ ಪ್ರಮಾಣದ ಸೊತ್ತುಗಳನ್ನು ಪತ್ತೆ ಹಚ್ಚಿರುವುದಾಗಿ ತಿಳಿದುಬಂದಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಖನಿಜ ಭವನದ ಹೆಚ್ಚುವರಿ ನಿರ್ದೇಶಕ ಬಿ.ಕೆ. ಶಿವಕುಮಾರ್, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ.ಜೆ ಜ್ಞಾನೇಂದ್ರ ಕುಮಾರ್ ಮತ್ತು ಬಿಡಿಎ ನಗರ ಯೋಜನೆ ಉಪ ನಿರ್ದೇಶಕ ವಿ ರಾಕೇಶ್ ಕುಮಾರ್ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿರುವುದು ವರದಿಯಾಗಿದೆ.
ಜ್ಞಾನೇಂದ್ರ ಕುಮಾರ್ ಅವರ ಬಸವೇಶ್ವರ ನಗರ ಮನೆ ಹಾಗೂ ಶಾಂತಿನಗರ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ರಾಕೇಶ್ ಕುಮಾರ್ ಅವರು ನಾಗರಬಾವಿ ನಿವಾಸದ ಮೇಲೆ ದಾಳಿಯಾಗಿದ್ದು, ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವಿಜಯಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಪಿನಾಥ ಮಳಜಿ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ವಿಜಯಪುರದಲ್ಲಿನ ಮೂರು ಹಾಗೂ ಬಾಗಲಕೋಟೆಯಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
18 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ದಾಳಿ ಇದಾಗಿದೆ. ಏಕಕಾಲಕ್ಕೆ ಇನ್ನೂರಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇನ್ನಿತರ ಜಾಗಗಳ ಮೇಲೆ ದಾಳಿ ಮಾಡಿ ಕಡತಗಳ ಪರಿಶೀಲನೆಗೆ ಮುಂದಾಗಿದೆ.
ಎಲ್ಲಿ ಎಲ್ಲಿ ದಾಳಿ?
*ಜ್ಞಾನೇಂದ್ರಕುಮಾರ್, ಹೆಚ್ಚುವರಿ ಆಯುಕ್ತ, ಸಾರಿಗೆ ಮತ್ತು ಸುರಕ್ಷತೆ ಬೆಂಗಳೂರು
* ರಾಕೇಶ್ ಕುಮಾರ್ ಬಿಡಿಎ. ಪಟ್ಟಣ ಯೋಜನೆ.
* ರಮೇಶ್ ಕುಮಾರ್, ಕಣಕಟ್ಟೆ, ಆರ್.ಎಫ್.ಓ.ಸಾಮಾಜಿಕ ಅರಣ್ಯ ಯಾದಗಿರಿ
* ಬಸವರಾಜ್ ಶೇಖರ್ ರೆಡ್ಡಿ ಪಾಟೀಲ್, ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ್
* ಬಸವ ಕುಮಾರ್ ಎಸ್ ಅಣ್ಣಿಗೇರಿ .ಶಿರಸ್ತೇದಾರ್ ಡಿಸಿ ಕಚೇರಿ ಗದಗ
* ಗಪಿನಾಥ್ ಸಾ ಎನ್ ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ
* ಶ್ರೀನಿವಾಸ್ ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ.
*ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ ದಾವಣಗೆರೆ
* ಕೃಷ್ಣನ್.ಎಇ.ಎಪಿಎಂಸಿ ಹಾವೇರಿ.
*ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು
* ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿ-ವಿಭಾಗ
*ಬಾಲಕೃಷ್ಣ ಹೆಚ್ ಎನ್.ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ. ಮೈಸೂರು
* ಗವಿರಂಗಪ್ಪ.ಎಇಇ.ಪಿಡಬ್ಲ್ಯೂಡಿ. ಚಿಕ್ಕಮಂಗಳೂರು.
*ಅಶೋಕ್ ರೆಡ್ಡಿ ಪಾಟೀಲ್. ಎಇಇ ಕೃಷ್ಣ ಭಾಗ್ಯ ಜಲ ನಿಗಮ ಲಿ. ದೇವದುರ್ಗ ರಾಯಚೂರು.
*ದಯಾ ಸುಂದರ್ ರಾಜು ಎಇಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ.
* ಬಿ ಕೆ ಶಿವಕುಮಾರ್, ಹೆಚ್ಚುವರಿ ಡಿಟೆಕ್ಟರ್,ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್ ಬೆಂಗಳೂರು
* ಶಿವಾನಂದ್ ಪಿ ಶರಣಪ್ಪ ಖೇಡಗಿ, ಆರ್ ಎಫ್ ಒ, ಬಾದಾಮಿ
*ಮಂಜುನಾಥ್, ಸಹಾಯಕ ಆಯುಕ್ತ ರಾಮನಗರ