×
Ad

ಹಿಜಾಬ್ ಪರ ವಾದಿಗಳ ಬೆದರಿಕೆಗೆ ಸರಕಾರ ಮಣಿಯುವುದಿಲ್ಲ ಎಂದ ಸಚಿವ ಅಶ್ವತ್ಥನಾರಾಯಣ

Update: 2022-03-16 13:33 IST

ಮಾಗಡಿ: `ಮೊದಲಿಗೆ ನಾವು ಭಾರತೀಯರು ಮತ್ತು ಕನ್ನಡಿಗರು. ಆದ್ದರಿಂದ ಪ್ರತಿಯೊಬ್ಬರೂ ಇಲ್ಲಿ ಇದನ್ನು ಅರಿತು ನಡೆಯಬೇಕು. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯವು ತಮಗೆ ಬೇಕಾದಂತೆ ತೀರ್ಪು ಕೊಡಬೇಕಿತ್ತು ಎನ್ನುವ ಮೊಂಡು ವಾದ ಸರಿಯಲ್ಲ. ಇಂತಹ ಬೆದರಿಕೆಗಳಿಗೆಲ್ಲ ಸರಕಾರ ಮಣಿಯುವುದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅತ್ಯಂತ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಲಾಗಿದೆ. ಇಷ್ಟಕ್ಕೂ ಶಾಲೆಗಳಲ್ಲಿ ಸಮವಸ್ತ್ರ ನಿಯಮವನ್ನು ತಂದಿದ್ದು ಬಿಜೆಪಿಯಲ್ಲ; ಹಿಜಾಬ್ ಪರ ಮಾತನಾಡುತ್ತಿರುವವರು ನಂಬಿಕೊಂಡಿರುವ ಪಕ್ಷಗಳೇ ಇದನ್ನೆಲ್ಲ ತಂದಿದ್ದು’ ಎಂದರು.

`ನಮ್ಮಲ್ಲಿ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲರೂ ಅವರವರ ಅಭಿಪ್ರಾಯ ಹೇಳಬಹುದು. ಬೇಕಿದ್ದವರು ಸುಪ್ರೀಂಕೋರ್ಟಿಗೆ ಹೋಗಲಿ. ಆದರೆ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

`ಸಮವಸ್ತ್ರದ ವಿಚಾರದಲ್ಲಿ ಸರಕಾರವು ಹಿಜಾಬ್ ಮತ್ತು ಕೇಸರಿ ಶಾಲು ಎರಡನ್ನೂ ದೂರವಿಟ್ಟಿದೆ. ನ್ಯಾಯಾಲಯ ಕೂಡ ವಿಚಾರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ವಿವೇಚನೆಯ ತೀರ್ಪು ಕೊಟ್ಟಿದೆ. ಹಿಜಾಬ್ ಕಡ್ಡಾಯವೆಂದು ಕುರಾನಿನಲ್ಲಿ ಕೂಡ ಎಲ್ಲೂ ಹೇಳಿಲ್ಲ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದತ್ತ ಗಮನ ಕೊಡಬೇಕು. ಜತೆಗೆ ಎಲ್ಲರೂ ಸೌಹಾರ್ದದಲ್ಲಿ ನಂಬಿಕೆ ಇಡಬೇಕು’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News