ವಿಧಾನಸಭೆಯಲ್ಲಿ ಎರಡು ವಿಧೇಯಕಗಳ ಮಂಡನೆ
ಬೆಂಗಳೂರು, ಮಾ. 17: ‘ಬಂಧಿಗಳೊಂದಿಗೆ ಸಂವಹನ ಹಾಗೂ ಭೂ ಸ್ವಾಧೀನ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿನ ಪರಿಹಾರಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಬಂಧಿಖಾನೆಗಳ(ತಿದ್ದುಪಡಿ) ವಿಧೇಯಕ 2022 ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ(ತಿದ್ದುಪಡಿ) ವಿಧೇಯಕ 2022ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಗುರುವಾರ ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪರವಾಗಿ ಸಚಿವ ಗೋವಿಂದ ಕಾರಜೋಳ ಎರಡೂ ವಿಧೇಯಕಗಳನ್ನು ಮಂಡಿಸಿದರು. ‘ಬಂಧಿಖಾನೆಗಳ ತಿದ್ದುಪಡಿ ವಿಧೇಯಕವು ಬಂಧಿಗಳೊಂದಿಗಿನ ಸಂಹನಕ್ಕಾಗಿ ಬಂಧಿಖಾನೆಯ ಪರಿಮತಿಯ ಒಳಗೆ ಮತ್ತು ಹೊರಗೆ ಉತ್ತಮ ವಾತಾವರಣವನ್ನು ನಿರ್ಮಿಸುವುದು, ಪೆರೋಲ್ ಉಲ್ಲಂಘನೆ ಮತ್ತು ಇನ್ಯಾವುದೇ ನಿಷೇಧಿತ ವಸ್ತುಗಳನ್ನು ಬಂಧಿಖಾನೆಯೊಳಗೆ ತರುವುದು ಅಥವಾ ಹೊರಗೆ ತೆಗೆದುಕೊಂಡು ಹೋಗುವ ಅಪಾಯವನ್ನು ನಿವಾರಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ 1963ರ ಕರ್ನಾಟಕ ಬಂಧಿಖಾನೆಗಳ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುತ್ತಿದೆ' ಎಂದು ಉಲ್ಲೇಖಿಸಲಾಗಿದೆ.
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಅಧಿನಿಯಮಕ್ಕೆ ಉಪಬಂಧ ಕಲ್ಪಿಸಲು ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಅಧಿನಿಯಮ 1966ಕ್ಕೆ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿದೆ' ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.