ಯಮ್ಮಿಗನೂರಿಗೆ ಭೇಟಿ ನೀಡಿ ಬೆಳೆ ನಷ್ಟ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಹಿರೇಕೆರೂರು, ಮಾ.19: ಕಳೆದ ಶುಕ್ರವಾರ ಸುರಿದ ಭಾರಿ ಗಾಳಿ ಮಳೆಗೆ ಹಿರೇಕೆರೂರು ತಾಲೂಕಿನ ಯಮ್ಮಿಗನೂರು ಗ್ರಾಮಕ್ಕೆ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಭೇಟಿ ನೀಡಿ ಗ್ರಾಮದಲ್ಲಾದ ಬೆಳೆನಷ್ಟವನ್ನು ವೀಕ್ಷಿಸಿ ಪರಿಶೀಲಿಸಿದರು.
ಯಮ್ಮಿಗನೂರಿನಿಗೆ ತಹಶೀಲ್ದಾರ್ ಜೊತೆ ಭೇಟಿ ನೀಡಿದ ಬಿ.ಸಿ.ಪಾಟೀಲ್, ನಷ್ವವಾದ ಬೆಳೆಯನ್ನು ಪರಿಶೀಲಿಸಿ ನಷ್ಟ ಸಂಬಂಧ ಸಂಪೂರ್ಣ ಮಾಹಿತಿ ಪಡೆದು ವರದಿ ನೀಡುವಂತೆ ಸೂಚಿಸಿದರು.
ಅಲ್ಲದೇ ಇಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ತಕ್ಷಣ ಹಾಗೂ ರೈತರು ಜನರಿಂದ ದೂರು ಮನವಿ ಬಂದಲ್ಲಿ ಅಧಿಕಾರಿಗಳು ತಕ್ಷಣ ತಡಮಾಡುವುದಾಗಲಿ, ನಿರ್ಲಕ್ಷ್ಯ ಮಾಡುವುದಾಗಲಿ ಮಾಡದೇ ಮೊದಲು ಸ್ಥಳ ಪರಿಶೀಲಿಸಬೇಕು. ಅದಕ್ಕಿಂತ ಮೊದಲು ಏನಾಗಿದೆ ಎಂಬುದರ ಮಾಹಿತಿ ಪಡೆಯಬೇಕು ಎಂದು ಅವರು ಹೇಳಿದರು.
ರೈತರ ವಿಚಾರದಲ್ಲಾಗಲಿ ಅಥವಾ ಸಾರ್ವಜನಿಕರ ವಿಚಾರದಲ್ಲಾಗಲಿ ಸ್ಪಂದಿಸದ ಯಾವುದೇ ಅಧಿಕಾರಿಗಳ ಧೋರಣೆಯನ್ನು ತಾವು ಒಪ್ಪುವುದಿಲ್ಲ. ಇಂತಹ ಘಟನೆಗಳು ಗಮನಕ್ಕೆ ಬಂದ ತಕ್ಷಣ ಸ್ಥಳೀಯವಾಗಿರುವ ಅಧಿಕಾರಿಗಳು ಜನಪ್ರತಿನಿಧಿಗಳು ಮೊದಲು ಭೇಟಿ ನೀಡಿ ಸಾರ್ವಜನಿಕರ ಅಳಲನ್ನು ಕೇಳಬೇಕು. ಸ್ಥಳೀಯವಾಗಿ ಸಮಸ್ಯೆಗಳು ಪರಿಹಾರವಾಗುವುದಾದರೆ ಸ್ಥಳೀಯವಾಗಿಯೇ ಮೊದಲು ಪರಿಹರಿಸಿ ಜನರಿಗೆ ಸ್ಪಂದಿಸಬೇಕು. ಬೆಳೆ ನಷ್ಟವನ್ನು ಸರಕಾರದ ಗಮನಕ್ಕೆ ತರುವುದಾಗಿ ಬಿ.ಸಿ.ಪಾಟೀಲ್ ಹೇಳಿದರು.