ಬೆಂಗಳೂರು: ಆಟೊ ಚಾಲಕನ ಕೊಲೆಗೆ ಸಂಚು; ಆರೋಪಿಯ ಬಂಧನ

Update: 2022-03-19 15:35 GMT

ಬೆಂಗಳೂರು, ಮಾ.19: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಸಂಶಯದಿಂದ ತನ್ನ ಸಹಚರರ ಮೂಲಕ ಆಟೊ ಚಾಲಕನೊಬ್ಬನನ್ನು ಅಪಹರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕೊಲೆಯಾಗಬೇಕಿದ್ದ ಆಟೊ ಚಾಲಕನನ್ನು ರಕ್ಷಿಸಿ ಸಂಚಿನಲ್ಲಿ ಭಾಗಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತ ಅವರು ತಿಳಿಸಿದ್ದಾರೆ. 

ಜೈಲಿನಲ್ಲಿರುವ ರೌಡಿ ಮಣಿಯು ತನ್ನ ಪತ್ನಿಯೊಂದಿಗೆ ಆಟೊ ಚಾಲಕನೊಬ್ಬ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಿಂದ ಜೈಲಿನಲ್ಲಿಯೇ ಸಂಚು ರೂಪಿಸಿ ತನ್ನ ತಮ್ಮಂದಿರು ಹಾಗೂ ಸಹಚರರ ಮೂಲಕ ಯಶವಂತಪುರದ ರೈಲ್ವೆ ನಿಲ್ದಾಣದ ಬಳಿ  2 ದಿನಗಳ ಹಿಂದೆ ಮಾ. 17 ರಂದು ರಾತ್ರಿ 10 ಗಂಟೆಗೆ ಆಟೋ ಚಾಲಕನನ್ನು ಅಪಹರಿಸಿ ಗ್ಯಾರೇಜ್‍ಗೆ ಕರೆದೊಯ್ದು, ಕೈ-ಕಾಲು ಕಟ್ಟಿ, ಬಳಿಕ ಲಗ್ಗೆರೆಯ ಮನೆಯಲ್ಲಿ ಕೂಡಿ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈಯಲು ಪ್ರಯತ್ನ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದಿದ್ದಾರೆ.

ಬಂಧಿತರಿಂದ ಮಾರಕಾಸ್ತ್ರ, 8 ಮೊಬೈಲ್‍ಗಳು, ಆಟೊ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡು ಆರ್‍ಎಂಸಿಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News