ಸಾಗರ: ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯರ ಸರ ಕಿತ್ತು ಪರಾರಿಯಾದ ದುಷ್ಕರ್ಮಿ
Update: 2022-03-23 13:03 IST
ಸಾಗರ, ಮಾ.23: ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯ ಮಾಂಗಲ್ಯ ಸರವನ್ನು ಅಪರಿಚಿತನೋರ್ವ ಕಿತ್ತುಕೊಂಡು ಪರಾರಿಯಾದ ಘಟನೆ ತಾಲೂಕಿನ ಬ್ರಾಹ್ಮಣ ಮಂಚಾಲೆ ಬಳಿ ಬುಧವಾರ ನಡೆದಿದೆ.
ಬ್ರಾಹ್ಮಣ ಮಂಚಾಲೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಭಾವತಿ ಅವರು ಬಸ್ಸಿನಿಂದ ಇಳಿದು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಕುತ್ತಿಗೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 35 ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಒಂದು ಸರ ಕಿತ್ತುಕೊಂಡು ಶಿಕ್ಷಕಿಯನ್ನು ತಳ್ಳಿ ಪರಾರಿಯಾಗಿದ್ದಾನೆ. ಇದರಿಂದ ರಸ್ತೆಗೆ ಬಿದ್ದ ಪ್ರಭಾವತಿಯವರ ತಲೆ ಭಾಗಕ್ಕೆ ಗಾಯವಾಗಿದೆ. ಅವರು ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಪ್ರಭಾವತಿಯವರು ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.