×
Ad

'ಜೇಮ್ಸ್' ಚಿತ್ರದ ವಿಚಾರದಲ್ಲಿ ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು: ಡಿಕೆಶಿ

Update: 2022-03-23 13:39 IST

ಕಲಬುರಗಿ, ಮಾ.23: ಪುನೀತ್ ರಾಜಕುಮಾರ್ ಅವರ ಕೊನೆ ಚಿತ್ರ ಜೇಮ್ಸ್ ಅನ್ನು ಚಿತ್ರಮಂದಿರದಿಂದ ತೆಗೆಯಬಾರದು. ಅದನ್ನು ತೆಗೆಯುವಂತೆ ಒತ್ತಡ ಹಾಕುತ್ತಿರುವ ಬಿಜೆಪಿ ಶಾಸಕರ ನಡೆ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, 'ನನಗೆ ಹಲವು ಚಿತ್ರ ಮಂದಿರಗಳ ಮಾಲಕರು ಕರೆ ಮಾಡಿದ್ದರು. ಅಪ್ಪು ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನನ್ನ ಆತ್ಮೀಯ. ದೇಶದ ಇತಿಹಾಸದಲ್ಲಿ ಅಪಾರ ಜನರಿಂದ ಗೌರವ ಸಂಪಾದಿಸಿದವರು. ಅವರ ಕೊನೆಯ ಚಿತ್ರಕ್ಕೆ ತೊಂದರೆ ನೀಡಲಾಗುತ್ತಿದೆ. ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು. ಆದರೆ ಅದು ಕಾಣುತ್ತಿಲ್ಲ ಎಂದರು.

ಬೆಂಗಳೂರಿನ ಬಿಜೆಪಿ ಶಾಸಕರು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತೆಗೆಯುವಂತೆ ಕರೆ ಮಾಡುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಯಾವುದೇ ರೀತಿಯ ಪ್ರಚಾರ ಮಾದಿಕೊಳ್ಳಲಿ. ಅವರು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಚಿತ್ರಕಥೆ ಮಾಡಿ ಸಿನಿಮಾ ಮಾಡಿದ್ದಾರೆ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ ಹತ್ಯೆಗಿಂತಲೂ ಚಿತ್ರಕಥೆ ಬೇಕಾ? ಅವರು ವಾಸ್ತವಾಂಶ ಬಿಟ್ಟು ಏನು ಮಾಡುತ್ತಾರೋ ಮಾಡಲಿ, ಅದು ಅವರ ಪಕ್ಷದ ಅಜೆಂಡಾ ಎಂದು ಡಿಕೆಶಿ ಕಿಡಿಕಾರಿದರು.

ಕಾಶ್ಮೀರ್ ಫೈಲ್ಸ್ ಚಿತ್ರ ತಯಾರಕರನ್ನು ಕರೆದು ಸನ್ಮಾನ ಮಾಡಿ ತೆರಿಗೆ ವಿನಾಯಿತಿ ನೀಡಿದ್ದಾರೆ. ಅದರ ಅಗತ್ಯ ಏನಿತ್ತು? ಅವರು ನಮ್ಮನ್ನು ವಿರೋಧಿಗಳು ಎಂದು ತೋರಿಸಲು ಈ ರೀತಿ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ನಮಗೆ ನೀಡಲಾಗಿರುವ ಹಕ್ಕನ್ನು ಉಳಿಸಿಕೊಳ್ಳಲು  ಹೋರಾಡುತ್ತಿದ್ದೇವೆ ಎಂದರು.

ಪುನೀತ್ ರಾಜಕುಮಾರ್ ಅವರ  ಜೇಮ್ಸ್ ಚಿತ್ರವನ್ನು ಯಾವುದೇ ಚಿತ್ರಮಂದಿರದಿಂದ ತೆಗೆದುಹಾಕಬಾರದು. ಅವರು ಎಷ್ಟು ದಿನ ನಡೆಸುತ್ತಾರೋ ನಡೆಸಲಿ. ಬಿಜೆಪಿ ಶಾಸಕರ ಈ ನಡೆ ಖಂಡನೀಯ.

ನಟ ಶಿವರಾಜಕುಮಾರ್ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಮುಖ್ಯಮಂತ್ರಿ ಕರೆ ಮಾಡಿಸಿದ್ದರು. ಆದರೂ ಪರ್ವಾಗಿಲ್ಲ. ನಾವು ನಮ್ಮ ನಾಡಿನ ನೀರಿಗಾಗಿ ಹೋರಾಟ ಮಾಡಿದ್ದೇವೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News