×
Ad

ಹೊಟೇಲ್‍ಗಳಲ್ಲಿನ ತಿಂಡಿಗಳ ದರದಂತೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ: ಸಿದ್ದರಾಮಯ್ಯ

Update: 2022-03-24 20:55 IST

ಬೆಂಗಳೂರು, ಮಾ. 24: ‘ಹೊಟೇಲ್‍ಗಳಲ್ಲಿನ ತಿಂಡಿಗಳ ದರದಂತೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ. ಡಿಸಿಪಿಯೊಬ್ಬರು 65ಲಕ್ಷ ರೂ.ಬಡ್ಡಿಗೆ ಹಣ ತಂದು 90 ಲಕ್ಷ ರೂ.ಗಳನ್ನು ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವೇ?' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ರಾಜ್ಯದಲ್ಲಿನ ‘ಕಾನೂನು ಸುವ್ಯವಸ್ಥೆ' ವಿಚಾರ ಪ್ರಸ್ತಾಪಿಸಿದ ಮಾತನಾಡಿದ ಅವರು, ‘ಪಿಎಸ್ಸೈಗೆ 10ರಿಂದ 30ಲಕ್ಷ ರೂ., ಇನ್‍ಸ್ಪೆಕ್ಟರ್‍ಗೆ 20ರಿಂದ 1ಕೋಟಿ ರೂ., ಎಸಿಪಿ, ಡಿವೈಎಸ್ಪಿ ಹುದ್ದೆಗೆ-25ರಿಂದ 1ಕೋಟಿ ರೂ ಹಾಗೂ ಡಿಸಿಪಿ ಹುದ್ದೆಗೆ 1 ಕೋಟಿ ರೂ.ಗಳಿಂದ 5 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ ಎಂದು ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ, ಹೊಟೇಲ್‍ನಲ್ಲಿನ ತಿಂಡಿ ದರದ ರೀತಿಯಲ್ಲಿ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ' ಎಂದು ಟೀಕಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಈ ಹಿಂದೆ ವರ್ಗಾವಣೆ ಮಾಡಲು ಏಜೆಂಟ್‍ಗಳನ್ನು ಇಟ್ಟುಕೊಂಡಿದ್ದರು. ಅವರನ್ನು ನಾನು ಹತ್ತಿರ ಸೇರಿಸಲಿಲ್ಲ. ಪೆÇಲೀಸ್ ಇಲಾಖೆಯಲ್ಲಿ ಬಹಳ ಹಿಂದಿನಿಂದಲೂ ಭ್ರಷ್ಟಾಚಾರ ಇದೆ. ಯಾರ್ಯಾರ ಕಾಲದಲ್ಲಿ ಏನೇನು ಆಗಿದೆ' ಎಂದು ಹೇಳಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

‘ಹಿಂದೆ ತಪ್ಪು ಆಗಿದೆ ಎಂದು ಈಗಲೂ ಅದು ಮುಂದುವರೆಯಬೇಕೇ? ನೀವು ಅಧಿಕಾರಕ್ಕೆ ಬಂದ ಮೇಲೇ ಏನು ಬದಲಾವಣೆ ತಂದಿದ್ದೀರಿ ಮೊದಲು ಹೇಳಿ. ‘ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ವೀರನೂ ಅಲ್ಲ' ಎಂದು ವಚನವನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ‘ನಿಮ್ಮಲ್ಲಿ ದೂರದೃಷ್ಟಿ ಹೋಗಿದೆ ಎಂದು ಟೀಕಿಸಿದರು.

ಈ ಹಂತದಲ್ಲಿ ಎದ್ದುನಿಂತ ಆರಗ ಜ್ಞಾನೇಂದ್ರ, ‘ಹಳೆ ಕುದುರೆ ಹೊಸ ಸವಾರ, ಕುದುರೆ ಎಳೆದುಕೊಂಡು ಹೋಗುತ್ತದೆ. ಕೆಲ ಸಮಯದಲ್ಲಿ ಹೆಂಡದಂಗಡಿಗೂ ಹೋಗುತ್ತದೆ, ವೇಶ್ಯಾಗೃಹ ಸೇರಿ ಮತ್ತೆಲ್ಲಿಗೋ ಹೋಗುತ್ತದೆ. ನಾವು ನಿಭಾಯಿಸುತ್ತೇವೆ. ಭ್ರಷ್ಟಾಚಾರಕ್ಕೆ ಅವಕಾಶವನ್ನು ನೀಡಿಲ್ಲ' ಎಂದು ವಿವರಣೆ ನೀಡಿದರು. ‘ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾಗಿದ್ದು, ನೀವು ಅದನ್ನು ಅಲ್ಲಗಳೆದಿಲ್ಲ. ಅಲ್ಲದೆ, ಪತ್ರಿಕೆಯವರು ಸುಳ್ಳು ಬರೆದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕಿತ್ತಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಜಾತಿ, ಧರ್ಮರಹಿತವಾಗಿ ಇರಬೇಕಾದ ಫೋಲೀಸ್ ಇಲಾಖೆ ಇತ್ತೀಚೆಗೆ ದಿಕ್ಕು ತಪ್ಪುತ್ತಿದೆ' ಎಂದು ನಿವೃತ್ತ  ಫೋಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನೀವೇ, ‘ಪೊಲೀಸರು ಲಂಚ ತಿಂದು ನಾಯಿಗಳ ತರ ಬಿದ್ದಿರುತ್ತಾರೆ' ಎಂದು ಹೇಳಿಕೆ ನೀಡಿದ್ದು, ನಿಮ್ಮ ವೈಫಲ್ಯ ಅಲ್ಲವೇ? ಎಂದು ಸಿದ್ದರಾಮಯ್ಯ ಕೇಳಿದರು. ‘ನಿಮ್ಮ ಅಧಿಕಾರಾವಧಿಯಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಚಿವರ ಕೊಠಡಿಯಲ್ಲಿ ಏನೇನು ನಡೆಸಿದೆ ಗೊತ್ತೇ' ಎಂದು ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು. ‘ಅದು ನನಗೆ ಜ್ಞಾಪಕವಿಲ್ಲ. ಒಂದು ವೇಳೆ ಹಾಗೇನಾದರೂ ನಡೆದಿದ್ದರೆ, ಅದು ವೈಫಲ್ಯ, ನಿಮ್ಮದು ಕೂಡ ವೈಫಲ್ಯವೇ, ನಾನು ಒಪ್ಪಿಕೊಂಡಂತೆ ನೀವೂ ನಿಮ್ಮ ವೈಫಲ್ಯ ಎಂದು ಒಪ್ಪಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಶಾಂತಿ ಇದ್ದರೆ ಮಾತ್ರವೇ ಅಭಿವೃದ್ಧಿ: ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರವೇ ಅಭಿವೃದ್ಧಿ ಸಾಧ್ಯ. ಶಾಂತಿ ಇದ್ದರೆ ಮಾತ್ರವೇ ಬಂಡವಾಳ ಹೂಡಿಕೆ, ಕೈಗಾರಿಕೆಗಳು ಬರುತ್ತವೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲು ಸಾಧ್ಯ. ಉದ್ಯೋಗ ಸಿಕ್ಕರೆ ಮಾತ್ರವೇ ಜನರಿಗೆ ಕೊಳ್ಳುವ ಶಕ್ತಿ ಬರುತ್ತದೆ. ಕೊಳ್ಳುವ ಶಕ್ತಿ ಬಂದರೆ ಮಾತ್ರವೇ ಜಿಡಿಪಿ ವೃದ್ದಿಯಾಗಲಿದೆ' ಎಂದು ಸಿದ್ದರಾಮಯ್ಯ ವಿವರಿಸಿದರು.

‘ಒಲಾ ಮತ್ತು ಟಾಟಾ ಎಲೆಕ್ಟ್ರಾನಿಕ್ ಬೈಕ್ ಉತ್ಪಾದನಾ ಕಂಪೆನಿಗಳು ಶಾಂತಿ ಸುವ್ಯವಸ್ಥೆ ಇಲ್ಲದ ಕಾರಣಕ್ಕೆ ನೆರೆಯ ತಮಿಳುನಾಡಿಗೆ ವಲಸೆ ಹೋಗಿವೆ. ಇದರಿಂದ ರಾಜ್ಯದ ಜನರಿಗೆ ಸಿಗಬೇಕಿದ್ದ 20 ಸಾವಿರದಷ್ಟು ಉದ್ಯೋಗ ಕೈತಪ್ಪಿವೆ. ಕೋವಿಡ್ ಪರಿಣಾಮದಿಂದ ಶೇ.60ರಷ್ಟು ಸಣ್ಣ ಕೈಗಾರಿಕೆಗಳ ಬಾಗಿಲು ಮುಚ್ಚಿದ್ದು, ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ' ಎಂದು ಸಿದ್ದರಾಮಯ್ಯ ಟೀಕಿಸಿದರು.

ಶಾಂತಿ, ಸುವ್ಯವಸ್ಥೆ, ನೆಮ್ಮದಿಯ ಬದುಕಿಗೂ ರಾಜ್ಯ ಮತ್ತು ದೇಶದ ಅಭಿವೃದ್ಧಿಗೂ ನೇರ ಸಂಬಂಧವಿದೆ. ಶಾಂತಿ, ಸುವ್ಯವಸ್ಥೆ ಇಲ್ಲದ ರಾಜ್ಯ, ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಇದನ್ನು ಜಗತ್ತಿನಾದ್ಯಂತ ಕಾಣಬಹುದು. ಬಹುತ್ವದ ರಾಷ್ಟ್ರಗಳಲ್ಲಿ ಶಾಂತಿ, ಸುವ್ಯವಸ್ಥೆ ಇದ್ದು ಅಂತಹಹವು ಮುಂದುವರೆದಿವೆ, ಒಂದೇ ಧರ್ಮವನ್ನು ಹೊಂದಿರುವ ದೇಶಗಳು ಧರ್ಮವನ್ನು ರಾಜಕಾರಣದಲ್ಲಿ ಬೆರೆಸಿರುವ ಕಾರಣದಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಉದಾಹರಣೆಗೆ ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜಪಾನ್ ದೇಶಗಳಲ್ಲಿ ಬಹುತ್ವ ಇದೆ, ಪ್ರಜಾಪ್ರಭುತ್ವ ವ್ಯವಸ್ಥೆ ಇದೆ, ಕಾನೂನು ಸುವ್ಯವಸ್ಥೆ ಗಟ್ಟಿಯಾಗಿದೆ. ಹೀಗಾಗಿ ಇವು ಅಭಿವೃದ್ಧಿ ಸಾಧಿಸಿವೆ. 

ಆಫ್ರಿಕಾದ ಹಲವು ದೇಶಗಳು, ಆಫ್ಘಾನಿಸ್ತಾನ, ಪಾಕಿಸ್ತಾನ ದೇಶಗಳಲ್ಲಿ ಒಂದೇ ಧರ್ಮವನ್ನು ಹೊಂದಿದ್ದರೂ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಈ ಕಾರಣದಿಂದ ಅಭಿವೃದ್ಧಿಯ ಹಾದಿಯಲ್ಲಿ ಹಿಂದುಳಿದಿವೆ

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News