ನಕಲಿ ಜಾತಿ ಪ್ರಮಾಣ ಪತ್ರ ಆರೋಪ: 'ಮಾನನಷ್ಟ ಮೊಕದ್ದಮೆ ಹೂಡುವೆ' ಎಂದ ಶಾಸಕ ರೇಣುಕಾಚಾರ್ಯ
ಬೆಂಗಳೂರು, ಮಾ. 25: ‘ನಕಲಿ ಜಾತಿ ಪ್ರಮಾಣ ಪತ್ರ ಪಡೆದು ನಾನು ಸರಕಾರದ ಸವಲತ್ತು ಪಡೆದಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಕಲಿ ಜಾತಿ ಪ್ರಮಾಣ ಪಡೆದು ನಾನು ಯಾವುದೇ ಸವಲತ್ತು ಪಡೆದಿಲ್ಲ. ನನ್ನ ಬಗ್ಗೆ ಏನೇ ರಾಜಕೀಯವಾಗಿ ಟೀಕೆ ಮಾಡಿದರೂ ಎದುರಿಸಲು ಸಿದ್ಧ. ಅನಗತ್ಯವಾಗಿ ನನ್ನ ಮಕ್ಕಳ ಬಗ್ಗೆ ಟೀಕೆ ಮಾಡಿದರೆ ಕಾನೂನು ಮೂಲಕ ಉತ್ತರ ಕೊಡಬೇಕಾಗುತ್ತದೆ' ಎಂದು ಗುಡುಗಿದರು.
‘ನನ್ನ ವಿರುದ್ಧ ಆರೋಪ ಮಾಡುವವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ? ಬುಟ್ಟಿಯಲ್ಲಿ ಹಾವು ಇದೆ ಎಂದು ಬುರುಡೆ ಬಿಡಬೇಡಿ. ರಾಜಕೀಯವಾಗಿ ನನ್ನ ವಿರುದ್ಧ ನೀವು ಏನೇ ಟೀಕೆ ಮಾಡಿದರೂ ಅದನ್ನು ರಾಜಕೀಯವಾಗಿ ಎದುರಿಸುತ್ತೇನೆ. ವಿನಾಕಾರಣ ನನ್ನ ಮಗಳು, ಇಲ್ಲವೆ ಪುತ್ರನ ಬಗ್ಗೆ ಸುಳ್ಳು ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸವಲತ್ತು ಪಡೆದಿದ್ದರೆ ದಾಖಲೆ ಬಿಡುಗಡೆ ಮಾಡಿ' ಎಂದು ಅವರು ಸವಾಲು ಹಾಕಿದರು.
‘ನನ್ನ ಮಗಳು ನಕಲಿ ಜಾತಿ ಪ್ರಮಾಣ ಕೊಟ್ಟು 40 ಲಕ್ಷ ರೂ.ಶೈಕ್ಷಣಿಕ ಸಾಲ ಪಡೆದಿದ್ದಾರೆಂದು ಕೆಲವರು ಆರೋಪಿಸಿದ್ದಾರೆ. ಅಂತಹ ದಾಖಲೆಗಳಿದ್ದರೆ ನೀವು ಬಿಡುಗಡೆ ಮಾಡಲು ಮೀನಾಮೇಷ ಏಕೆ? ನನ್ನ ಮಕ್ಕಳು ಹೈಸ್ಕೂಲ್ಗೆ ಹೋಗುವಾಗ ಜಾತಿ ಪ್ರಮಾಣ ಪತ್ರ ಪಡೆದಿದ್ದರು.ನಾನು ಅಂದೇ ಅದನ್ನು ವಾಪಸ್ ಕೊಟ್ಟಿದ್ದೇನೆ. ನಾನು ಹೊನ್ನಾಳಿ, ನ್ಯಾಮತಿ ಕ್ಷೇತ್ರದಲ್ಲಿ ಜಾತ್ಯತೀತ ವ್ಯಕ್ತಿ. ಪಕ್ಷಭೇದ ಮರೆತು ಜನ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಆರೋಪ ಮಾಡುವವರು ಇದುವರೆಗೂ ಏಕೆ ದಾಖಲೆ ಬಿಡುಗಡೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
‘ನನ್ನ ಮಗ ಮೆರಿಟ್ ಮೇಲೆ ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದ. ಅದೇ ರೀತಿ ಮೆರಿಟ್ ಮೇಲೆ ಅಮೆರಿಕದಲ್ಲಿ ಎಂ.ಎಸ್. ವ್ಯಾಸಂಗ ಮಾಡಿದ್ದಾನೆ. ಇದೇ ರೀತಿ ಸುಳ್ಳು ಆರೋಪಗಳನ್ನು ಮಾಡಿದರೆ ಅಂತಹವರಿಗೆ ನ್ಯಾಯಾಲಯದ ಮೂಲಕ ಉತ್ತರ ಕೊಡುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.
ಮಾಹಿತಿ ಇಲ್ಲ: ಸಚಿವ ಸಂಪುಟ ವಿಸ್ತರಣೆ ಕುರಿತಂತೆ ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಸೂಕ್ತ ಸಂದರ್ಭದಲ್ಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾರಿಗೆ ಟಿಕೆಟ್ ಕೊಡಬೇಕು, ಬಿಡಬೇಕು ಎಂಬುದನ್ನು ಹೇಳಲು ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷನೂ ಅಲ್ಲ, ರಾಜ್ಯಾಧ್ಯಕ್ಷನೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ. ಪಕ್ಷವು ಆಯಾ ಕಾಲಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.