ಚಿಕ್ಕಮಗಳೂರು | ಕಾಫಿ ತೋಟದಲ್ಲಿ ಕಾಡಾನೆ ದಾಳಿ: ಮಹಿಳೆ ಮೃತ್ಯು

Update: 2022-03-26 08:12 GMT

ಚಿಕ್ಕಮಗಳೂರು, ಮಾ.26: ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿಗೆ ಸಿಲುಕಿ ಹಾವೇರಿ ಮೂಲದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ತಾಲೂಕಿನ ಕೆಳಗೂರು ಗ್ರಾಮದಲ್ಲಿ ವರದಿಯಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲದೇವರ ತಾಂಡ್ಯದ ಸರೋಜಾ(45) ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯಾಗಿದ್ದಾರೆ.

 ತಾಲೂಕಿನ ಕೆಳಗೂರ ಸಮೀಪದ ಗ್ರಾಮದವರಾದ ಈರೇಗೌಡ ಎಂಬವರಿಗೆ ಸೇರಿದ ಮನೋಜ್ ಎಸ್ಟೇಟ್ ನಲ್ಲಿ ಇಂದು ಬೆಳಗ್ಗೆ ಸರೋಜಾ ತನ್ನ ಮಗಳೊಂದಿಗೆ ಕಾಪಿ ಬೀಜ ಆರಿಸುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ‌ ಮಾಡಿದೆ. ದಾಳಿಯಿಂದ ಸರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಮಗಳು ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.

ಆಲ್ದೂರು ಅರಣ್ಯ ವಿಭಾಗದ ಅಧಿಕಾರಿ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News