ಶಿವಮೊಗ್ಗ: ಭೂಮಿ ಹಕ್ಕಿಗಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಪ್ರತಿಭಟನೆ; ಮಾ.29 ರಂದು ಡಿಸಿ ಕಚೇರಿಗೆ ಪಾದಯಾತ್ರೆ
ಶಿವಮೊಗ್ಗ, ಮಾ.26: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕುನೀಡುವಂತೆ ಆಗ್ರಹಿಸಿ ಮಾರ್ಚ್ 29 ರಂದು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ( ರಿ) ಅಧ್ಯಕ್ಷ ಹೂವಪ್ಪ ಕೂಡಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ನಾಡಿಗೆ ಬೆಳಕು ನೀಡಲು ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ಶರಾವತಿ ಆಣೆಕಟ್ಟಿಗಾಗಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.1959-62 ರಲ್ಲಿ ಭೂಮಿ ಬಿಡುಗಡೆಯಾದರೂ ಹಂಚಿಕೆ ಮಾಡದೆ ಭೂ ವಂಚಿತರನ್ನಾಗಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮಾರ್ಚ್ 29 ರಂದು ನಗರದ ಆಲ್ಕೋಳ ವೃತ್ತದಿಂದ ಪ್ರಾರಂಭಗೊಂಡ ಬೃಹತ್ ಪ್ರತಿಭಟನೆ ಆಶೋಕ ವೃತ್ತ, ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ ಎಂದರು.
ಸರ್ಕಾರದ ಆದೇಶ ಸಂಖ್ಯೆ G.on AF,464,FGL 59 ದಿನಾಂಕ 15/02/1962 ಪ್ರಕಾರ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳ ಜೊತೆಗೆ ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಗ್ರಾಮದ ಸರ್ವೆ ನಂ.167 ರಲ್ಲಿ ಹಾಗೂ ಶೆಟ್ಟಿಹಳ್ಳಿ ಒಟ್ಟು 1200 ಎಕರೆ ಜಾಗವನ್ನು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗಾಗಿ ಮೀಸಲಿಡಲಾಗಿದೆ.ಆದರೆ ಆರು ದಶಕಗಳು ಕಳೆದರೂ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡದೆ ಶರಾವತಿ ಮುಳುಗಡೆ ಗಳು ನಮಗೆ ವಂಚನೆ ಮಾಡಿವೆ ಎಂದು ದೂರಿದರು.
2009 ರಲ್ಲಿ ಸಂಘದ ಪರವಾಗಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಆಲಿಸಿದ ನ್ಯಾಯಾಲಯ 2014 ರಲ್ಲಿ 6 ತಿಂಗಳೊಳಗೆ ಅರ್ಜಿದಾರರ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.ಆರು ತಿಂಗಳೊಳಗೆ ಇತ್ಯರ್ಥವಾಗದ ಕಾರಣ 2021 ರಲ್ಲಿ ಪುನಃ ವಿಚಾರಣೆ ನಡೆಸಿದ ಮಾನ್ಯ ಉಚ್ಚ ನ್ಯಾಯಾಲಯ 4 ತಿಂಗಳೊಗೆ ಇತ್ಯರ್ಥ ಪಡಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು.ನ್ಯಾಯಾಲಯದ ಆದೇಶ ಪಾಲನೆ ಮಾಡದ ಕಾರಣ 17/11/ 2021 ಹೈಕೋರ್ಟ್ ನ್ಯಾಯಾಂಗ ನಿಂಧನೆ ಅರ್ಜಿ ವಿಚಾರಣೆ ನಡೆಸಿ 2 ವಾರದೊಳಗೆ ವರದಿ ನೀಡಲು ಜಿಲ್ಲಾಡಳಿತಕ್ಕೆ ಅದೇಶಿಸಿತ್ತು.
ಈ ವಿಚಾರವು ಜಿಲ್ಲಾಡಳಿತದ ಹಂತದಲ್ಲಿದ್ದು,ಇತ್ಯರ್ಥವಾಗಬೇಕಿದೆ.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರಗಳಿಗೆ ಇಚ್ಚಾಶಕ್ತಿಯ ಕೊರತೆ ಇದೆ.ಅಧಿಕಾರಿಗಳು ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮಹೇಶ್,ನಾಗರಾಜ್ ಎಂ.ಡಿ,ಕೆ.ಎಂ ಆಶೋಕ್,ಶಿವಾನಂದ್, ಕೇಶವ್, ಮಹೇಶ್ ಮತ್ತಿತರರು ಇದ್ದರು.
ಬೇಡಿಕೆಗಳು:
1.1962 ರಿಂದ ನಮಗೆ ಭೂಮಿ ಹಕ್ಕು ಸಿಕ್ಕಿಲ್ಲ.ಕೂಡಲೇ ಸರ್ಕಾರ ಭೂಮಿ ಕೊಡಬೇಕು ಇಲ್ಲ,ನಾವು ಮುಳುಗಡೆ ಆಗಿರುವ ಜಾಗವನ್ನು ನಮಗೆ ಬಿಟ್ಟು ಕೊಡಿ.
2. ಶರಾವತಿ ಸಂತ್ರಸ್ಥ ಕುಟಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು.
3. 1962 ರಿಂದ ಇಲ್ಲಿಯವರೆಗೆ ಪರಿಹಾರ ನಷ್ಟ ಬಡ್ಡಿ ಸಮೇತ ತುಂಬಿಕೊಡಬೇಕು.
4. ಮುಳುಗಡೆ ಸಂತ್ರಸ್ಥರ ಬೇಡಿಕೆಗಳು ಈಡೇರದಿದ್ದರೆ ಶಿವಮೊಗ್ಗದಿಂದ - ಜೋಗ ಕೆಪಿಟಿಎಲ್ ವರೆಗೆ ಬೃಹತ್ ಪಾದಯಾತ್ರೆ ಮತ್ತು ವಿದ್ಯುತ್ ಸಂಪರ್ಕ ಕಡಿತ
5. 2018-19 ರಲ್ಲಿ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಮಾಡಿದ್ದು,ಮುಳುಗಡೆ ಸಂತ್ರಸ್ಥರ ಬದುಕು ಅತಂತ್ರಗೊಳಿಸಲು ಕೆಲವು ರಾಜಕಾರಣಿಗಳ ಪಿತೂರಿಯಿಂದ ಗಿರೀಶ್ ಆಚಾರಿ ಎನ್ನುವ ಸಾಮಾಜಿಕ ಕಾರ್ಯಕರ್ತ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಸಂತ್ರಸ್ಥರನ್ನು ಭೂ ವಂಚಿತರನ್ನಾಗಿ ಮಾಡಿದ್ದಾರೆ.ಇವರೇ 60 ವರ್ಷಗಳ ನಷ್ಟದ ಬಾಬ್ತನ್ನು ಬಡ್ಡಿ ಸಮೇತ ತುಂಬಿಕೊಡಬೇಕು.
6. ಅರಣ್ಯ ಇಲಾಖೆಯವರು ಮುಳುಗಡೆ ಸಂತ್ರಸ್ತರಿಗೆ ಕಾಯ್ದಿರಿಸಿದ ಜಮೀನನ್ನು ಅರಣ್ಯ ಎಂದು ಮಾಡಿ ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ.ಇದನ್ನು ಕೈಬಿಡಬೇಕು.ಇಲ್ಲದಿದ್ದರೆ ಅರಣ್ಯ ಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
7. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವಂತೆ ಮಾನ್ಯ ಉಚ್ಚ ನ್ಯಾಯಾಲಯ 4 ಬಾರಿ ಆದೇಶ ಮಾಡಿದ್ದರೂ,ಆ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಮಾಡಿರುವ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು.
8.1959 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು.
9. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಾಗೂ ಗೇಣಿದಾರ ಕುಟುಂಬಗಳಿಗೆ ಮೀಸಲಿಟ್ಟ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು,ಅದನ್ನು ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಬೇಕು.
10. ಶರಾವತಿ ಮುಳುಗಡೆ ಸಂತ್ರಸ್ಥರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಆಗ್ರಹಬೇಕೆಂದು ಏಕೆಂದರೆ ಸಾಗರ,ಹೊಸನಗರ, ಸೊರಬ,ಸಿದ್ದಾಪುರ ಇಲ್ಲಿ ನೀರಾವರಿ ಸಮಸ್ಯೆ ಇರುವುದರಿಂದ ಏತ ನೀರಾವರಿ ಸೌಲಭ್ಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.