ಡಿನೋಟಿಫಿಕೇಶನ್ ಪ್ರಕರಣ: ಎ.19ರಂದು ಬಿಎಸ್‍ವೈ ಹಾಜರಿಗೆ ಕೋರ್ಟ್ ಆದೇಶ

Update: 2022-03-27 12:36 GMT

ಬೆಂಗಳೂರು, ಮಾ. 27: ‘ಮಾಹಿತಿ ತಂತ್ರಜ್ಞಾನ(ಐಟಿ) ಕಾರಿಡಾರ್ ನಿರ್ಮಾಣಕ್ಕಾಗಿ ಮಾಡಿಕೊಂಡಿದ್ದ ಭೂಮಿಯ ಅಕ್ರಮ ಡಿನೋಟಿಫಿಕೇಶನ್ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎ.19ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.

ನ್ಯಾಯಾಧೀಶ ಬಿ.ಜಯಂತ್ ಕುಮಾರ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13 (1) (ಡಿ) ಮತ್ತು 13 (2) ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಮನ್ಸ್ ಜಾರಿ ಮಾಡಲು ಆದೇಶಿಸಿದ್ದಾರೆ. ಬಿಎಸ್‍ವೈ ಅವರು ಅಕ್ರಮ ಭೂ ನೋಟಿಫಿಕೇಶನ್ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ.

ವಾಸುದೇವ ರೆಡ್ಡಿ ಎಂಬುವವರು 2013 ರಲ್ಲಿ ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿರುವ ವಿಶೇಷ ಕೋರ್ಟ್, ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಪೂರ್ಣಗೊಳಿಸಿದೆ. 15 ಎಕರೆ 30 ಗುಂಟೆ ಭೂ ಸ್ವಾಧೀನ ಸಂಬಂಧ ನಗರದ ಬೆಳ್ಳಂದೂರು ಮತ್ತು ದೇವರ ಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನು ಅಕ್ರಮ ಡಿನೋಟಿಫೈ ಮಾಡಿದ ಆರೋಪವನ್ನು ಯಡಿಯೂರಪ್ಪ ಅವರ ಮೇಲೆ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ದೂರುದಾರ ವಾಸುದೇವ ರೆಡ್ಡಿ, ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ, ಯಡಿಯೂರಪ್ಪ ಸೇರಿ ಹತ್ತು ಜನರ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.

ಆರ್.ವಿ.ದೇಶಪಾಂಡೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ 2015 ರಲ್ಲಿ ರದ್ದುಗೊಳಿಸಿತ್ತು. ಉಳಿದ ಎಂಟು ಜನರ ವಿರುದ್ಧದ ಪ್ರಕರಣವೂ ರದ್ದಾಗಿದೆ. ಆದರೆ ಬಿಎಸ್‍ವೈ ವಿರುದ್ಧದ ಪ್ರಕರಣ ಮಾತ್ರ ಉಳಿದುಕೊಂಡಿದೆ. ವಿಶೇಷ ಕೋರ್ಟ್, ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಲೋಕಾಯುಕ್ತ ಪೊಲೀಸರು ಎರಡು ಬಾರಿ ‘ಬಿ' ವರದಿ ಸಲ್ಲಿಸಿ ಯಡಿಯೂರಪ್ಪ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದರು. ಎರಡೂ ವರದಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. 2ನೆ ಬಿ ವರದಿಯನ್ನು 2021ರ ನ.27 ರಂದು ತಿರಸ್ಕರಿಸಿದ್ದ ಕೋರ್ಟ್ ವಿಚಾರಣೆ ಪ್ರಾರಂಭ ಮಾಡುವುದಾಗಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News