ಗಂಗಾ ಕಲ್ಯಾಣ ಯೋಜನೆಯಡಿ 130 ಕೋಟಿ ರೂ.ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಮಾ.27: ಸಮಾಜ ಕಲ್ಯಾಣ ಇಲಾಖೆಯಡಿ ಬಡ ರೈತರ ಏಳಿಗೆಗಾಗಿ ‘ಗಂಗಾ ಕಲ್ಯಾಣ’ ಯೋಜನೆ ಜಾರಿಗೆ ತರಲಾಗಿದೆ. 2018-19ನೆ ಸಾಲಿನಲ್ಲಿ ರೈತರ ಅನುಕೂಲಕ್ಕೆ ಸಣ್ಣ ಸಣ್ಣ ಕಂಪನಿಯ ಗುತ್ತಿಗೆದಾರರಿಗೆ ಎರಡೆರಡು ಪ್ಯಾಕೇಜ್ಗಳಂತೆ ಗುತ್ತಿಗೆ ನೀಡಲಾಗುತ್ತಿತ್ತು ಮತ್ತು ಮೋಟರ್ ಪಂಪ್ ಸರಬರಾಜು ಮಾಡಲು ಪ್ರತ್ಯೇಕ ಟೆಂಡರ್ ಕರೆದು ಪ್ರತಿ ಏಜೆನ್ಸಿಗೆ ಎರಡು ಪ್ಯಾಕೇಜ್ ಮಾಡಿದ್ದರಿಂದ ಕಾಲದ ಮಿತಿಯಲ್ಲಿ ಪ್ರಗತಿಯನ್ನು ಸಾಧಿಸಲು ಅನುಕೂಲವಾಗಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, 2019-20 ಹಾಗೂ 2020-21ನೆ ಸಾಲಿನಲ್ಲಿ ನಿಗಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ ಜನಾಂಗದವರ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಕೊಳವೆ ಬಾವಿ ಕೊರೆಯಲು ಟೆಂಡರ್ ಕರೆಯಲಾಗಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾನದ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರಾಜ್ಯದಾದ್ಯಂತ 30 ಜಿಲ್ಲೆಗಳಲ್ಲಿ 30 ಪ್ಯಾಕೇಜ್ ಮಾಡಲಾಗಿದೆ. ಅದರಲ್ಲಿ ಎರಡು ಪ್ಯಾಕೇಜ್ ಮಿತಿಯನ್ನು ತೆಗೆದು ಹಾಕಿ ದೊಡ್ಡ ವಹಿವಾಟುಗಳ ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗಿದೆ ಮತ್ತು ಕೊಳವೆ ಬಾವಿ ಕೊರೆಯುವುದು, ಪಂಪ್ ಮೋಟರ್ ಅಳವಡಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು ಒಟ್ಟಿಗೆ ಒಬ್ಬನೆ ಗುತ್ತಿಗೆದಾರ ನಿರ್ವಹಿಸುವ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೆ, ಟೆಂಡರ್ ನಲ್ಲಿ ನಕಲಿ ದಾಖಲಾತಿಯನ್ನು ಸಲ್ಲಿಸಿರುವ ಗುತ್ತಿಗೆದಾರರಿಗೆ ಅರ್ಹತೆ ನೀಡುವುದು, ದರಗಳನ್ನು ನಿಗದಿಪಡಿಸುವುದರಲ್ಲಿ ಬಿಡ್ ಸಾಮಥ್ರ್ಯವನ್ನು ವಹಿವಾಟಿಗಿಂತ ನಾಲ್ಕು ಪಟ್ಟು ಹೆಚ್ಚು ನೀಡುವುದಕ್ಕೆ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸುಮಾರು 130 ಕೋಟಿಗೂ ಅಧಿಕ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿರುವುದು ಕಂಡು ಬರುತ್ತಿದ್ದು, ಸರಕಾರವು ತಕ್ಷಣವೆ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.