ಅಸ್ಪೃಶ್ಯತೆ ನಿವಾರಣೆಗೆ ‘ವಿನಯ ಸಾಮರಸ್ಯ' ಯೋಜನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-03-28 17:55 GMT

ಬೆಂಗಳೂರು, ಮಾ. 28: ‘ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿರುವ ಅಸ್ಪøಶ್ಯತೆ ನಿವಾರಣೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ‘ವಿನಯ ಸಾಮರಸ್ಯ' ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಲಾಗುವುದು' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಇಲಾಖಾ ಅನುದಾನದ ಬೇಡಿಕೆ ಮೇಲೆ ನಡೆದ ಚರ್ಚೆಯಲ್ಲಿ ಉತ್ತರಿಸಿದ ಅವರು, ‘ಇತ್ತೀಚೆಗೆ ಕೊಪ್ಪಳದಲ್ಲಿ ಎರಡು ವರ್ಷದ ಚಾಲಕನೊಬ್ಬ ದೇವಸ್ಥಾನ ಪ್ರವೇಶ ಮಾಡಿದ ಎಂಬ ಕಾರಣಕ್ಕೆ ಆತನ ಪೋಷಕರಿಗೆ ದಂಡ ವಿಧಿಸಿದ ಅಮಾನವೀಯ ಘಟನೆ ನಡೆದಿತ್ತು. ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಅಸ್ಪೃಶ್ಯತೆ ವಿರುದ್ಧ ಸಾಮರಸ್ಯ ಕಾಪಾಡಲು ವಿನಯ ಸಾಮರಸ್ಯ ಎಂಬ ಯೋಜನೆಯನ್ನು ಆತನ ಹೆಸರಿನಲ್ಲೇ ಪ್ರಾರಂಭಿಸುತ್ತಿದ್ದೇವೆ' ಎಂದು ಹೇಳಿದರು.

‘ಅಸ್ಪøಶ್ಯತೆ ನಿವಾರಿಸಲು ಇಲಾಖೆ ರೂಪಿಸಿರುವ ವಿನೂತನ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಸಮಾಲೋಚನೆ ನಡೆಸಲಿದ್ದು, ಶೀಘ್ರದಲ್ಲೆ ಯೋಜನೆಗೆ ಚಾಲನೆ ನೀಡಲಾಗುವುದು. ಅಲ್ಲದೆ, ರಾಜ್ಯದಲ್ಲಿನ 6,020 ಗ್ರಾ.ಪಂ.ಗಳು ಅಸ್ಪøಶ್ಯತೆ ವಿರುದ್ದ ಸಾಮಾಜಿಕ ಸಾಮರಸ್ಯ ಕಾಪಾಡಲು ಸದಸ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ‘ಅಸ್ಪøಶ್ಯತೆ ಮುಕ್ತ' ಗ್ರಾಪಂಗೆ ಹೆಚ್ಚಿನ ಅನುದಾನವನ್ನು ಸರಕಾರ ನೀಡಲಿದೆ' ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದರು.

ಜಿಲ್ಲಾಧಿಕಾರಿಗಳ ಮೂಲಕ ಅನುದಾನ: ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಎಸ್ಸಿ-ಎಸ್ಟಿ ವರ್ಗದವರಿಗೆ ಹೆಚ್ಚಿನ ಅನುದಾನ ಒದಗಿಸಿ ಆ ಸಮುದಾಯದವರಿಗೆ ರಸ್ತೆ, ಚರಂಡಿ, ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಅಲ್ಲದೆ, ಇನ್ನು ಮುಂದೆ ಈ ಯೋಜನೆಯಡಿ ಜಿಲ್ಲಾಧಿಕಾರಿಗಳ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುದಾನವನ್ನು ಪಡೆಯಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

‘ಸಮಾಜ ಕಲ್ಯಾಣ ಇಲಾಖೆಯ ವಸತಿ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿದ 14 ಮಂದಿ ವಿದ್ಯಾರ್ಥಿಗಳ ಪೈಕಿ 11 ಮಂದಿಗೆ ಐಐಟಿ 3 ವಿದ್ಯಾರ್ಥಿಗಳು ಎನ್‍ಐಟಿಗೆ ಆಯ್ಕೆಯಾಗಿದ್ದಾರೆ. 764 ವಸತಿ ಶಾಲೆಗಳ ಪೈಕಿ 1.20 ಲಕ್ಷ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುತ್ತಿದ್ದೇವೆ. ಇಲಾಖೆ ಶೋಷಿತರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿದರು.

ಸಿಎಂ ಜೊತೆ ಚರ್ಚೆ: ‘ಗುತ್ತಿಗೆಯಲ್ಲಿ ಎಸ್ಸಿ-ಎಸ್ಟಿ ವರ್ಗದವರಿಗೆ 50ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಮೀಸಲಾತಿ ಕಲ್ಪಿಸಿದ್ದು, ಅದನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸುವ ಘೋಷಣೆ ಮಾಡಲಾಗಿದೆ. ಅದನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಿಎಂ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಎಸ್ಸಿಪಿ-ಟಿಎಸ್ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಸಂಬಂಧದ ಕಲಂ 7‘ಡಿ' ರದ್ದುಪಡಿಸಬೇಕೆಂದು ಸಲಹೆ ನೀಡಿದ್ದಾರೆ.ಆದರೆ, ರದ್ದುಪಡಿಸಬೇಕಿದ್ದರೆ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಈ ಸಂಬಂಧವೂ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದರು.

‘ಎಸ್ಸಿ-ಎಸ್ಟಿ ನಿಗಮಗಳಿಗೆ ಹೆಚ್ಚುವರಿ ಅನುದಾನವನ್ನು ಸರಕಾರ ಒದಗಿಸಿದೆ. ನಿಗಮಗಳ ಮೂಲಕ ಅನೇಕ ರೀತಿಯ ಜನಪಯೋಗಿ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ಅನುಕೂಲ ಆಗುವಂತೆ ಉತ್ತಮ ಕೆಲಸ ಮಾಡಬೇಕು ಎಂಬುದು ಸರಕಾರದ ಗುರಿ. ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಕೆಲವರಿಂದ ಪೌರಕಾರ್ಮಿಕರನ್ನು ಖಾಯಂ ಮಾಡಬೇಕೆಂಬ ಸಲಹೆ ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು' ಎಂದು ಹೇಳಿದರು.

‘ರಾಜ್ಯದಲ್ಲಿ ಮ್ಯಾನ್‍ಹೋಲ್ ಸ್ವಚ್ಛತೆಗೆ ಪೌರ ಕಾರ್ಮಿಕರ ಬಳಕೆ ಸಂಪೂರ್ಣ ನಿಷೇಧ ಮಾಡಲು ಸರಕಾರ ಬದ್ದವಾಗಿದೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ಪಕ್ಷಬೇಧ ಮರೆತು ಕೊನೆಗೊಳಿಸಬೇಕು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ತರಬೇತಿಯಲ್ಲಿ ದಿಲ್ಲಿ, ಬೆಂಗಳೂರು, ಚೈನ್ನೈ, ಹೈದರಾಬಾದ್ ಸೇರಿದಂತೆ ಅತ್ಯುತ್ತಮ ಸಂಸ್ಥೆಗಳಲ್ಲಿ ತರಬೇತಿ ಕೊಡಿಸುತ್ತಿದ್ದೇವೆ. ಅಲ್ಲದೆ, ಶಿಷ್ಯ ವೇತನವನ್ನು ಹೆಚ್ಚಳ ಮಾಡಲಾಗಿದೆ. 

ಪುನರ್ ಆರಂಭ: ‘ಎಸ್ಸಿ-ಎಸ್ಟಿ ವರ್ಗದ ಮಕ್ಕಳಿಗೆ ನರ್ಸಿಂಗ್, ಏರೋಸ್ಪೇಸ್, ವಿಮಾನ ಹಾರಾಟ ತರಬೇತಿ ನೀಡುವ ಯೋಜನೆಗಳನ್ನು ಪುನರ್ ಆರಂಭಿಸಲಾಗುವುದು. ಎಸ್ಸಿ-ಎಸ್ಟಿ ವರ್ಗದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಲು ಆದ್ಯತೆ ನೀಡಲಾಗುವುದು ಎಂದ ಕೋಟ ಶ್ರೀನಿವಾಸ ಪೂಜಾರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಕಲ್ಯಾಣಕ್ಕೆ ಸರಕಾರ ವಿಶೇಷ ಆಸ್ಥೆ ವಹಿಸಲಿದೆ ಎಂದು ಅಭಯ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News