ಕುಣಿಗಲ್ : 25 ವರ್ಷದ ಯುವತಿಯನ್ನು ವಿವಾಹವಾಗಿ ಸುದ್ದಿಯಾಗಿದ್ದ 45 ವರ್ಷದ ಶಂಕರಪ್ಪ ಆತ್ಮಹತ್ಯೆ
ತುಮಕೂರು, ಮಾ.29: ಸುಮಾರು ಐದು ತಿಂಗಳ ಹಿಂದೆ 25 ವರ್ಷದ ಯುವತಿಯನ್ನು ವಿವಾಹವಾಗಿ ಸುದ್ದಿಯಾಗಿದ್ದ 45 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿಪಾಳ್ಯ ನಿವಾಸಿ ಶಂಕರಪ್ಪ(45) ಮೃತಪಟ್ಟವರು. ಇವರ ಮೃತದೇಹ ಇಂದು ಬೆಳಗ್ಗೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡೆತ್ ನೋಟ್ ಕೂಡಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕರಪ್ಪ 45 ವರ್ಷವಾದರೂ ಮದುವೆಯಾಗಿರಲಿಲ್ಲ. ಈ ನಡುವೆ ತನ್ನನ್ನು ಮದುವೆ ಆಗುವಂತೆ ಸಂತೆ ಮಾವತ್ತೂರು ಗ್ರಾಮದ ನಿವಾಸಿ ಮೇಘನಾ(25) ಆತನಲ್ಲಿ ವಿನಂತಿಸಿದ್ದರು. ಅದರಂತೆ ಅವರಿಬ್ಬರು ಸುಮಾರು ಐದು ತಿಂಗಳ ಹಿಂದೆ ಸಮೀಪದ ದೇವಾಲಯದಲ್ಲಿ ಮದುವೆಯಾಗಿದ್ದರು. ವಯಸ್ಸಿನ ಅಂತರದ ಹಿನ್ನೆಲೆಯಲ್ಲಿ ಇವರ ವಿವಾಹವು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಇದೀಗ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು, ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.