ಕೃಷಿಕರ ಅಭಿವೃದ್ಧಿಗೆ ಹಲವು ಯೋಜನೆಗಳು, ರೈತ ಈಗ ಶಕ್ತಿವಂತನಾಗುತ್ತಿದ್ದಾನೆ: ಬಿ.ಸಿ.ಪಾಟೀಲ್

Update: 2022-03-29 18:19 GMT

ಬೆಂಗಳೂರು, ಮಾ. 29: ‘ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೃಷಿಕರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಇದರ ಪರಿಣಾಮ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಹೊಸ ಹೊಸ ಕಾರ್ಯಕ್ರಮಗಳ ಪರಿಣಾಮ ರೈತ ಶಕ್ತಿವಂತನಾಗುತ್ತಿದ್ದಾನೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ವಿದ್ಯಾವಂತರೂ ಕೃಷಿಯತ್ತ ಆಕರ್ಷಿತರಾಗುತ್ತಿದ್ದು, ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸರಕಾರ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ದೇವೆ. ಪರಿಣಾಮ 183 ಸೀಟುಗಳು ಲಭ್ಯವಾಗಿವೆ. 7 ವಿವಿಗಳಲ್ಲಿ 700 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ' ಎಂದು ಹೇಳಿದರು.

‘ರೈತರ ಮಕ್ಕಳಿಗೆ ಮೂರು ವರ್ಷಗಳ ಕಾಲ ತರಬೇತಿ ನೀಡುತ್ತಿದ್ದು, ಖಾಸಗಿ ಕಂಪೆನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಖಾಸಗಿ ಕಂಪೆನಿಯವರು ಶೇ.85ರಷ್ಟು ಅಂದರೆ 555 ಕೋಟಿ ರೂ.ಹಾಗೂ ಶೇ.15ರಷ್ಟು ಸರಕಾರ ಬಂಡವಾಳ ಹೂಡಿಕೆ ಮಾಡಲಿದೆ. ವಿಶ್ವವಿದ್ಯಾಲಯಗಳಲ್ಲಿ ಅಗತ್ಯವಿರುವ ತರಬೇತಿಯನ್ನು ರೈತರ ಮಕ್ಕಳಿಗೆ ನೀಡಲಾಗುವುದು ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ಆಹಾರ ಸಂಸ್ಕರಣೆಗೆ ಒತ್ತು: ‘ರಾಜ್ಯದ 11 ಕಡೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತಿದ್ದು, ರೈತರು ತಾವು ಬೆಳೆದ ಬೆಳೆಗೆ ಸಕಾಲದಲ್ಲಿ ಬೆಲೆ ಸಿಗದಿದ್ದಾಗ ತಮ್ಮ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಇದರಿಂದ ಆಹಾರ ಪದಾರ್ಥಗಳು ಕೆಡುವುದಿಲ್ಲ. ಅವರು ತಮಗೆ ಬೇಕಾದ ಸಂದರ್ಭದಲ್ಲಿ ಮಾರಾಟ ಮಾಡಿಕೊಳ್ಳಬಹುದು. ‘ಸಿರಿಧಾನ್ಯ' ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ರಾಜ್ಯದ ನಾಲ್ಕು ಭಾಗಗಳಲ್ಲಿ ಸಿರಿಧಾನ್ಯಗಳ ಮೇಳ ನಡೆಸುವ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲಾಗುವುದು. ಇನ್ನು ಮುಂದೆ ತಿಂಗಳಿಗೆ ವಾರಕ್ಕೆ ಒಂದು ದಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯದ ಆಹಾರ ನೀಡಲು 10 ಕೋಟಿ ರೂ.ಅನುದಾನ ಮೀಸಲಿರಿಸಿದ್ದೇವೆ ಎಂದರು.

ರಸಗೊಬ್ಬರ ಕೊರತೆ ಇಲ್ಲ

‘ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಆದರೆ, ಕೆಲ ಕಾಳಸಂತೆಕೋರರು ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣದಲ್ಲಿನ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕಾನೂನು ರೀತಿಯಲ್ಲಿ ಕೈಗೊಳ್ಳಲಾಗುವುದು. ಕಳಪೆ ಬಿತ್ತನೆ ಬೀಜ ಮಾರಾಟ, ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಸಂಬಂಧಿಸಿದಂತೆ ಒಟ್ಟು 153 ಅಂಗಡಿಗಳ ಪರವಾನಿಗೆ ರದ್ದು ಮಾಡಿದ್ದು, 203 ಕೇಸು ದಾಖಲಿಸಿ, 24 ಕೋಟಿ ರೂ.ಗಳಷ್ಟು ಮೊತ್ತದ ಆಸ್ತಿ ಜಪ್ತ್ತಿ ಮಾಡಲಾಗಿದೆ'

-ಬಿ.ಸಿ.ಪಾಟೀಲ್ ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News