'ಇದನ್ನು ನೋಡಿ ನನಗೆ ಭಯ ಆಯ್ತು': ಸದನದಲ್ಲಿ ವಾಟ್ಸಪ್ ಸಂದೇಶ ಓದಿ ಹಲಾಲ್ ನಿಷೇಧ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರು ಹಿಂದೂಯೇತರರ ಮಾಂಸ ಮಾರಾಟ ವಿಚಾರದಲ್ಲಿ ವಿವಾದ ಸೃಷ್ಟಿಸಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಿಜಾಬ್, ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಇದೆಲ್ಲದರ ಬಳಿಕ ಇದೀಗ ಮಾಂಸ ಮಾರಾಟ ವಿಷಯದಲ್ಲಿ ವಿವಾದ ಸೃಷ್ಟಿಯಾಗಿದೆ. ಇದನ್ನು ನೋಡಿ ನನಗೆ ಭಯ ಆಯ್ತು, ಯಾವ ಸಮಾಜದವರೇ ಆಗಿರಲಿ ವಾಟ್ಸಪ್ ಮೂಲಕ ಪ್ರಚೋದನಕಾರಿ ಸಂದೇಶ ಕಳುಹಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದು ಸರಿಯಲ್ಲ' ಎಂದು ವಾಟ್ಸಪ್ ಸಂದೇಶವೊಂದನ್ನು ಓದಿ ಹೇಳಿದರು.
'ನಾವೂ ಮಾಂಸಾಹಾರಿಗಳು. ಆದರೆ ಹಲಾಲ್, ಹರಾಮ್ ಮಾಂಸ ಎಂದೆಲ್ಲಾ ನೋಡುವುದಿಲ್ಲ. ನಾವು ಮಾಂಸವನ್ನು ತಂದು ಪೂಜೆಗೆ ಇಡುವುದಿಲ್ಲ. ವರ್ಷದ ತೊಡಕಿಗೆ ಗುಡ್ಡೆ ಮಾಂಸ ಮಾರುತ್ತಾರೆ. ಇದು ವಿವಾದ ಎಂದೇಕೆ ಬಿಂಬಿತವಾಗಬೇಕು' ಎಂದು ಪ್ರಶ್ನಿಸಿದರು.
'ಮಾಧ್ಯಮಗಳು ಇಂಥ ಸುದ್ದಿ ತೋರಿಸಬಾರದು ಎಂದು ತಾಕೀತು ಮಾಡಿದ ಅವರು, ರಾಜ್ಯದ ಸ್ವಾಸ್ಥ್ಯ ಕಾಪಾಡುವ ವಿಷಯದಲ್ಲಿ ಮಾಧ್ಯಮಗಳೆ ಮುಂದೆ ಸಮಾಜಕ್ಕೆ ಉತ್ತರದಾಯಿಗಳಾಗಬೇಕಾಗುತ್ತದೆ' ಎಂದು ತಿಳಿಸಿದರು.