ಶಿವಮೊಗ್ಗ: ಲಂಚ ಸ್ವೀಕರಿಸುತ್ತಿದ್ದ ಪ್ರಭಾರ ಪಿಡಿಓ ಎಸಿಬಿ ಬಲೆಗೆ
ಶಿವಮೊಗ್ಗ, ಮಾ.30: ಲಂಚ ಸ್ವೀಕರಿಸುತ್ತಿದ್ದ ಪ್ರಭಾರ ಪಿಡಿಓ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.
ಹೊಸನಗರ ತಾಲೂಕು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಓ ಮುರುಗೇಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರೊಬ್ಬರಿಗೆ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗದ ನಿವೇಶನಗಳಿಗೆ ಪ್ಲಾನಿಂಗ್ ಅಪ್ರೂವಲ್ ಮತ್ತು ಮ್ಯೂಟೇಶನ್ ಮಾಡಿಕೊಡಲು ಮುರುಗೇಶ್ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಮೊದಲ ಕಂತಿನಲ್ಲಿ 20 ಸಾವಿರ ರೂ. ಲಂಚದ ಹಣವನ್ನು ಸ್ವೀಕರಿಸಿದ್ದ ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ ಎರಡನೇ ಕಂತಿನ ಲಂಚದ ಹಣ 30 ಸಾವಿರ ರೂ. ಪಡೆಯುತ್ತಿದ್ದ ವೇಳೆ ಶಿವಮೊಗ್ಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚದ ಹಣದ ಸಹಿತ ಮುರೇಶ್ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಪೂರ್ವ ವಲಯ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳ ಡಿವೈಎಸ್’ಪಿ ಜೆ.ಲೋಕೇಶ್ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್ ಇಮ್ರಾನ್ ಬೇಗ್, ಸಿಬ್ಬಂದಿ ವಸಂತ ಕಾಯಕದ, ನಾಗರಾಜ, ರಘುನಾಯ್ಕ, ಸುರೇಂದ್ರ, ಅರುಣ್ ಪವಾರ್, ಯೋಗೇಶ್ವರಪ್ಪ, ಚರಣ್ ರಾಜ್, ಜಯಂತ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.