ಸಚಿವ ಈಶ್ವರಪ್ಪರಿಂದ ಪ್ರಚೋದನಕಾರಿ ಹೇಳಿಕೆ ವಿಚಾರ: ತನಿಖೆ ನಡೆಸಿ ವರದಿ ಸಲ್ಲಿಸಲು ಪೊಲೀಸರಿಗೆ ಕೋರ್ಟ್ ಸೂಚನೆ

Update: 2022-03-30 14:48 GMT

ಬೆಂಗಳೂರು, ಮಾ.30: ಶಿವಮೊಗ್ಗ ನಗರದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ನಡೆದ ನಂತರ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರು, ಮುಸಲ್ಮಾನ ಗೂಂಡಾಗಳನ್ನು ಬಿಡುವುದಿಲ್ಲ, ಅವರನ್ನು ದಮನ ಮಾಡುತ್ತೇವೆ ಎಂಬ ಪ್ರಚೋದನಕಾರಿ ಹೇಳಿಕೆಯೇ ಗಲಭೆಗೆ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಬೆಂಗಳೂರಿನ 42ನೆ ಎಸಿಎಂಎಂ ಕೋರ್ಟ್, ಶಿವಮೊಗ್ಗ ಪೊಲೀಸರಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದೆ. 

ಹರ್ಷ ಹತ್ಯೆಯ ನಂತರ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರನ್ನು ನೀಡಲು ಹೋದರೂ ದೂರನ್ನು ಸ್ವೀಕರಿಸಿರುವುದಿಲ್ಲ. ಹಾಗೂ ಸಂಬಂಧಪಟ್ಟ ಅಧಿಕಾರಿಗಳೂ ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಎಂದು ಅರ್ಜಿದಾರರಾದ ಶಿವಮೊಗ್ಗ ನಗರದ ರಿಯಾಝ್ ಅಹ್ಮದ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಬುಧವಾರ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಪೊಲೀಸರಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದೆ.  

ಅರ್ಜಿದಾರರು ಆರೋಪಿಗಳಾದ ಕೆ.ಎಸ್.ಈಶ್ವರಪ್ಪ, ಚನ್ನಬಸಪ್ಪ ಅವರ ವಿರುದ್ಧ 124(ಎ), 153(ಎ), 153(ಬಿ), 295(ಎ), 295(ಬಿ), 505(2), ಮತ್ತು 504ಆರ್/ಡಬ್ಲ್ಯೂ ಸೆಕ್ಷನ್ 34 ಆಫ್ ಐಪಿಸಿ ಕಲಂಗಳಡಿ ಪ್ರಕರಣವನ್ನು ದಾಖಲಿಸುವಂತೆ ಹಾಗೂ ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ರಿಯಾಝ್ ಅವರು ಉಲ್ಲೇಖಿಸಿದ್ದರು. ಅರ್ಜಿದಾರರ ಪರವಾಗಿ ವಕೀಲರಾದ ಹರಿರಾಮ್ ಎ., ಆರ್.ಜಗನ್ನಾಥ್, ರಮೇಶಪ್ಪ ಎನ್.ಜಿ., ಅವರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News