ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣ: ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿ ಎಂದ ಕೋರ್ಟ್

Update: 2022-03-30 16:24 GMT
ಬನ್ನಂಜೆ ರಾಜಾ 

ಬೆಳಗಾವಿ, ಮಾ.30: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಿಜೆಪಿ ನಾಯಕ ಹಾಗೂ ಉದ್ಯಮಿ ಆರ್.ಎನ್. ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೋಕಾ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದ್ದು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿ ಆರೋಪಿಗಳು ತಪ್ಪಿತಸ್ಥರು ಎಂದಿದೆ. ಎಪ್ರಿಲ್ 4ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

ಆರೋಪಿ ಬನ್ನಂಜೆ ರಾಜಾ ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ. ಆತನ ಮೇಲೆ ಒಟ್ಟು 48 ಪ್ರಕರಣಗಳಿದ್ದು, ಉಡುಪಿ, ಮಂಗಳೂರು, ಉತ್ತರ ಕನ್ನಡ, ಬೆಂಗಳೂರು, ಮೈಸೂರು, ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ಕೇರಳದಲ್ಲಿಯೂ ಹಫ್ತಾ ವಸೂಲಿ, ಸುಲಿಗೆ, ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳಿವೆ. ಆರ್.ಎನ್.ನಾಯಕ್ ಅವರನ್ನು 2013ರಲ್ಲಿ ಸುಪಾರಿ ನೀಡಿ ಕೊಲೆ ಮಾಡಿಸಿದ ಪ್ರಕರಣ ಈ ಪೈಕಿ ಅತ್ಯಂತ ಪ್ರಮುಖವಾಗಿದೆ.

ರಾಜಾನನ್ನು ಮೊರೊಕ್ಕೊದಲ್ಲಿ 2015 ಫೆಬ್ರವರಿ 12ರಂದು ನಕಲಿ ಪಾಸ್‍ಪೋರ್ಟ್ ಹೊಂದಿದ ಆರೋಪದಡಿ ಬಂಧಿಸಿದ್ದು, ಬಳಿಕ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಅದೇ ವರ್ಷ ಆಗಸ್ಟ್ 14ರಂದು ಭಾರತಕ್ಕೆ ಕರೆತರಲಾಗಿತ್ತು. ಬೆಳಗಾವಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಚಾರಣೆಗಾಗಿ ಬೆಂಗಳೂರು, ಉಡುಪಿ ಹಾಗೂ ಮಂಗಳೂರಿಗೆ ಕರೆತರಲಾಗಿತ್ತು.

ಉದ್ಯಮಿಗಳನ್ನು ಬೆದರಿಸಿ ಹಪ್ತಾ ವಸೂಲಿ ದಂಧೆಯಲ್ಲಿ ತೊಡಗಿದ್ದ ಬನ್ನಂಜೆ ರಾಜಾ ಆರ್.ಎನ್. ನಾಯಕ್ ಅವರಿಗೆ 3 ಕೋಟಿ ರೂ. ಹಫ್ತಾ ಹಣ ನೀಡುವಂತೆ ಬೇಡಿಕೆ ಸಲ್ಲಿಸಿದ್ದ. ಹಣ ನೀಡಲು ನಿರಾಕರಿಸಿದ್ದರಿಂದ 2013 ಡಿಸೆಂಬರ್ 21ರಂದು ಅವರನ್ನು ಕೊಲೆ ಮಾಡಿಸಿದ್ದ.

ಈ ಕೊಲೆ ಪ್ರಕರಣದಲ್ಲಿ ಒಟ್ಟು 16 ಮಂದಿ ಆರೋಪಿಗಳನ್ನು ಗುರುತಿಸಲಾಗಿದ್ದು, ಬನ್ನಂಜೆ ರಾಜಾ ಸೇರಿದಂತೆ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಬನ್ನಂಜೆ ರಾಜಾ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಬನ್ನಂಜೆ ರಾಜಾ 9ನೆ ಆರೋಪಿಯಾಗಿದ್ದ. ಹಣ ನೀಡಿ ಕೊಲೆ ಮಾಡಿಸಿದ ಆರೋಪ ಆತನ ಮೇಲೆ ಇತ್ತು, 500 ಪುಟಗಳ ಚಾರ್ಜ್ ಶೀಟನ್ನು ಪೊಲೀಸರು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

2000 ಇಸವಿಯಲ್ಲಿ ರಚಿಸಿದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಕೋಕಾ)ಯನ್ನು 13 ವರ್ಷಗಳ ಬಳಿಕ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಕರ್ನಾಟಕದ ಪಶ್ಚಿಮ ವಲಯದ ಪೊಲೀಸರು ಅನ್ವಯಿಸಿ ಪ್ರಕರಣ ದಾಖಲಿಸಿದ್ದರು. ಕೋಕಾ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಲಯಗಳು ಬೆಳಗಾವಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಇದ್ದು, ಬನ್ನಂಜೆ ರಾಜಾನ ಮೇಲೆ ಪೆÇಲೀಸರು ಆರ್.ಎನ್. ನಾಯಕ್ ಹತ್ಯೆ ಹಿನ್ನೆಲೆಯಲ್ಲಿ ಕೋಕಾ ಪ್ರಕರಣ ದಾಖಲು ಮಾಡಿರುವ ಜಿಲ್ಲೆ ಬೆಳಗಾವಿ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ರಾಜಾನನ್ನು ಬೆಳಗಾವಿ ನ್ಯಾಯಾಲಯಕ್ಕೆ 2015 ಆ. 14ರಂದು ಹಾಜರುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News