ನರಗುಂದ: ಸಮೀರ್ ಶಹಪುರ ಹತ್ಯೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ

Update: 2022-03-30 18:11 GMT
ಹತ್ಯೆಗೀಡಾದ ಯುವಕ ಸಮೀರ್ ಶಹಪುರ

ನರಗುಂದ: ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನರಗುಂದ ನಿವಾಸಿ ಸಮೀರ್ ಶಹಪುರ(19) ಎಂಬ ಯುವಕನನ್ನು ಕೊಲೆಗೈದು ಇನ್ನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ.

ಬಸವರಾಜ ಗಡೇಕಾರ ಮತ್ತು ಲಕ್ಷ್ಮಣ ಮಿಸಾಳೆ ಆರೋಪಿಗಳಾಗಿದ್ದು, ಈ ಇಬ್ಬರು ಆರೋಪಿಗಳು ಬಜರಂಗದಳದ ಸ್ಥಳೀಯ ಮುಖಂಡರು ಎಂದು ಹೇಳಲಾಗಿದೆ. 

ಘಟನೆಯ ವಿವರ: ನರಗುಂದದಲ್ಲಿ ಹೊಟೇಲ್ ನಡೆಸುತ್ತಿದ್ದ ಸಮೀರ್ ಶಹಪುರ ಸೋಮವಾರ ರಾತ್ರಿ ತನ್ನ ಹೊಟೇಲ್ ಬಂದ್‌ ಮಾಡಿ ಸಮೀಪದಲ್ಲೇ ಸ್ಟುಡಿಯೋ ನಡೆಸುತ್ತಿದ್ದ ಗೆಳೆಯ ಶಂಶೀರ್‌ ಎಂಬವರ ಜೊತೆ ಬೈಕ್‌ನಲ್ಲಿ ತನ್ನ ಮನೆಯತ್ತ ತೆರಳುತ್ತಿದ್ದ ವೇಳೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಮಲ್ಲಿಕಾರ್ಜುನ ಮತ್ತು 10-15 ಮಂದಿಯ ತಂಡ ಇವರ ಬೈಕನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆಸಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸಮೀರ್ ಮತ್ತು ಶಂಶೀರ್ ಅವರನ್ನು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಮೀರ್ ಮಂಗಳವಾರ ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಬಜರಂಗದಳದ ಮುಖಂಡನಾದ ಸುಬೇದಾರ್ ಓಣಿಯ ಗುತ್ತಿಗೆದಾರ ಸಂಜು ಮಾರುತಿ ನಲವಡಿ, ಕಾರ್ಯಕರ್ತರಾದ ನರಗುಂದ ಪಟ್ಟಣದ ಸಿದ್ದನಬಾವಿ ಓಣಿ ನಿವಾಸಿ ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯ ಮುತ್ತಪ್ಪ ಹಿರೇಮಠ, ಚನ್ನಪ್ಪ ಚಂದ್ರಶೇಖರ ಅಕ್ಕಿ, ಹಾಗೂ ಸಕ್ರಪ್ಪ ಹನುಮಂತಪ್ಪ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಮಂಗಳವಾರ ಬಸವರಾಜ ಗಡೇಕಾರ ಮತ್ತು ಲಕ್ಷ್ಮಣ ಮಸಾಳೆ  ಎಂಬವರನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದು, ಬಂಧಿತರ ಸಂಖ್ಯೆ 6ಕ್ಕೇರಿದೆ.

ಇದನ್ನೂ ಓದಿ; ನರಗುಂದ ಸಮೀರ್ ಕೊಲೆ ಪ್ರಕರಣ: ಬಜರಂಗ ದಳದ ಕಾರ್ಯಕರ್ತರಾದ ನಾಲ್ವರು ಆರೋಪಿಗಳ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News