ಮಡಿಕೇರಿ; ಎರಡು ತಲೆ ಹಾವು ಮಾರಾಟ ಯತ್ನ : ಇಬ್ಬರ ಬಂಧನ
ಮಡಿಕೇರಿ : ಅಳಿವಿನಂಚಿನಲ್ಲಿರುವ ಎರಡು ತಲೆ (ರೆಡ್ ಸ್ಯಾಂಡ್ ಬೋವ) ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಪೆರಂಬಾಡಿ ಬಳಿ ಕರ್ನಾಟಕ-ಕೇರಳ ರಾಜ್ಯ ಹೆದ್ದಾರಿಯಲ್ಲಿ ದಾಳಿ ನಡೆಸಿದ ಸಿಬ್ಬಂದಿ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಹಾಗೂ ಎರಡು ತಲೆಯ ಹಾವು ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾಸನದ ಅರಸೀಕೆರೆ ನಿವಾಸಿ ಪುನೀತ್ ಕುಮಾರ್ (24) ಹಾಗೂ ಬೇಲೂರು ಹಾಸನ ನಿವಾಸಿ ಚಂದನ್ ಕುಮಾರ್ (ದರ್ಶನ್-20) ಬಂಧಿತ ಆರೋಪಿಗಳು.
ಬಂಧಿತರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪ್ರಭಾರ ಪೊಲೀಸ್ ಅಧೀಕ್ಷಕ ಎನ್.ಟಿ.ಶ್ರೀನಿವಾಸ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಉಪನಿರೀಕ್ಷಕ ಸಿ.ಯು.ಸವಿ, ಸಿಬ್ಬಂದಿ ಟಿ.ಪಿ.ಮಂಜುನಾಥ್, ಕೆ.ಎಸ್.ದೇವಯ್ಯ, ಸಿ.ಬಿ.ಬೀನ, ಎಸ್.ಎಂ.ಯೋಗೇಶ್ ಪಿ.ಯು.ಮುನೀರ್, ಆರ್.ನಂದಕುಮಾರ್ ಹಾಗೂ ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.