ಕುಂ. ವೀರಭದ್ರಪ್ಪ, ಸಿದ್ದರಾಮಯ್ಯ, ಎಚ್‍ಡಿಕೆ ಸಹಿತ 61 ಮಂದಿಗೆ ಕೊಲೆ ಬೆದರಿಕೆ

Update: 2022-04-08 12:14 GMT
ಕುಂ. ವೀರಭದ್ರಪ್ಪ / ಸಿದ್ದರಾಮಯ್ಯ / ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು, ಎ. 8: ‘ಸಾಹಿತಿ ಕುಂ. ವೀರಭದ್ರಪ್ಪ(ಕುಂವೀ), ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 61 ಮಂದಿ ಸಾಹಿತಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ.

ಎರಡು ಪುಟಗಳ ಪತ್ರ ಬರೆದಿರುವ ಹೆಸರು ಮತ್ತು ವಿಳಾಸವಿಲ್ಲದ ‘ಸಹಿಷ್ಣು ಹಿಂದೂ' ಹೆಸರಿನಲ್ಲಿ ‘61ಕ್ಕೂ ಹೆಚ್ಚು ಮಂದಿ ಸಾಹಿತಿಗಳು, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಸರ್ವನಾಶದ ಹಾದಿಯಲ್ಲಿ ಇದ್ದೀರಿ, ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವ ರೂಪದಲ್ಲಾದರೂ ಬರಬಹುದು. ಅದಕ್ಕಾಗಿ ಸಿದ್ಧರಾಗಿ. ದೇಶದ್ರೋಹಿ ಬುದ್ಧಿಜೀವಿಗಳೇ ಕುಂ.ವೀರಭದ್ರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ಸಿದ್ಧರಾಗಿ, ಸಿದ್ಧರಾಗಿ. ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಅಂತಿಮ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿ' ಎಂದು ಬೆದರಿಕೆ ಹಾಕಲಾಗಿದೆ.

ಕೊಲೆ ಬೆದರಿಕೆ ಪತ್ರದ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ‘ನನಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಿಂದ ಕೊಲೆ ಬೆದರಿಕೆ ಪತ್ರ ಬಂದಿದೆ, ಹೆಸರು ವಿಳಾಸ ಇಲ್ಲದ ಹೇಡಿ ಬರೆದಿರುವ ಪತ್ರ ಇದು. ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಿಬ್ಬರ ಹೆಸರುಗಳೂ ಇವೆ, ನೀವು ಓದಿ' ಎಂದು ತಿಳಿಸಿದ್ದಾರೆ. ಪತ್ರದಲ್ಲಿ ‘ಹಿಜಾಬ್, ಮುಸ್ಲಿಮರ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ನೀವುಗಳು 61ಕ್ಕೂ ಹೆಚ್ಚು ಮಂದಿ ಸಾಹಿತಿಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದ ಕುರಿತು' ಎಂದು ಜೀವ ಬೆದರಿಕೆಗೆ ಕಾರಣ ನೀಡಲಾಗಿದೆ.

‘ಈ ಸಂಬಂಧ ಕೂಡಲೇ ಪ್ರಕರಣ ದಾಖಲಿಸಿಕೊಂಡು ಪತ್ರ ಎಲ್ಲಿಂದ ಬಂದಿದೆ ಮತ್ತು ಯಾವ ಉದ್ದೇಶಕ್ಕಾಗಿ ಪತ್ರ ಬರೆಯಲಾಗಿದೆ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಕೋಮು ಸಾಮರಸ್ಯ ಕಾಪಾಡುವ ಉದ್ದೇಶಕ್ಕಾಗಿ ಬಹಿರಂಗ ಹೇಳಿಕೆ ನೀಡುವ ಸಾಹಿತಿಗಳು ಹಾಗೂ ಮಾಜಿ ಸಿಎಂಗಳ ಕೊಲೆ ಬೆದರಿಕೆ ಹಾಕುವ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂಬ ಆಗ್ರಹ ಸಾಹಿತಿಗಳ ವಲಯದಿಂದ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News