ಎಲ್ಲ ಕ್ಷೇತ್ರಗಳಲ್ಲಿ ಜಾನಪದ ಉತ್ಸವ: ಸಿಎಂ ಬಸವರಾಜ ಬೊಮ್ಮಾಯಿ

Update: 2022-04-10 17:14 GMT

ಬೆಂಗಳೂರು, ಎ.10: ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ಪದ್ಮನಾಭನಗರ ಜಾನಪದ ಉತ್ಸವ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ, ಕರ್ನಾಟಕದಲ್ಲಿ ಬಿಎಸ್.ಯಡಿಯೂರಪ್ಪ ಅವರ ದಿಟ್ಟ ಕ್ರಮದಿಂದ ಕೋವಿಡ್ ನ್ನು ಮೆಟ್ಟಿ ನಿಲ್ಲಲ್ಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾನಪದ ಉತ್ಸವವನ್ನು ಎರಡು ವರ್ಷಗಳ ನಂತರ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.

ಕರ್ನಾಟಕದಲ್ಲಿ ಜಾನಪದಕ್ಕೆ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಬೆಂಗಳೂರಿನ ಸುಶಿಕ್ಷಿತ ಜನರಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಜಾನಪದ ಜಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಬಂದಿರುವುದು ಕನ್ನಡ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿ. ಭಾರತದಲ್ಲಿ ಕನ್ನಡಕ್ಕೆ ಅಗ್ರಮಾನ್ಯ ಸ್ಥಾನವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಭಾರತದಲ್ಲಿ ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಹಲವಾರು ಯುಗಗಳು ಕಳೆದರೂ ಕೂಡ ಕನ್ನಡ ಗಟ್ಟಿಯಾಗಿ ನಿಂತಿದೆ ಎಂದರು.  

ಕನ್ನಡ ಭಾಷೆಯ ಶಕ್ತಿ ಜಾನಪದದಿಂದ ಬರುತ್ತದೆ. ಜನರ ಭಾವನೆಯ ಅಭಿವ್ಯಕ್ತಿ ಜಾನಪದ. ಹೃದಯದಿಂದ ಬರುವ ನುಡಿಗಳು ಜಾನಪದ. ದಕ್ಷಿಣದ ಮಾದೇಶ್ವರ, ಉತ್ತರದ ಶಿಶುನಾಳ ಶರೀಫರ ಶ್ರೀಮಂತಿಕೆ ಒಗ್ಗೂಡಿ ಇಂದು ಸಮ್ಮಿಲನವಾಗಿದೆ ಎಂದರು.

ಇಡೀ ವಿಶ್ವದಲ್ಲಿ ಜಾನಪದ ವಿಶ್ವವಿದ್ಯಾಲಯ ಇರುವುದು ಹಾವೇರಿಯ ಶಿಗ್ಗಾಂವಿಯಲ್ಲಿ ಮಾತ್ರ. ಅದನ್ನು ಬಿ.ಎಸ್.ಯಡಿಯೂರಪ್ಪನವರು ಕೊಡುಗೆಯಾಗಿ ನೀಡಿದ್ದಾರೆ. ಇಂದು ಜಾನಪದವನ್ನು ಉಳಿಸುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಹಾವೇರಿಯ ಜಾನಪದ ವಿಶ್ವವಿದ್ಯಾಲಯವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು. ಇವುಗಳನ್ನು ಉಳಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವ ತಿಳಿಯುತ್ತದೆ ಎಂದರು.

ನಾಗರೀಕತೆಯೇ ಸಂಸ್ಕೃತಿಯಲ್ಲ. ನಾವೇನಾಗಿದ್ದೇವೆಯೋ ಅದು ಸಂಸ್ಕೃತಿ. ಬೆಂಗಳೂರಿನಲ್ಲಿ ಜಾನಪದಕ್ಕೆ ಇಷ್ಟು ದೊಡ್ಡ  ಪ್ರೊತ್ಸಾಹ ಸಿಕ್ಕಿರುವುದು ಸಂತಸದ ಸಂಗತಿ. ನಮ್ಮ ಭಾಷೆ ಸಂಸ್ಕೃತಿಯ ಬಗ್ಗೆ ಸದಾ ಕಾಲ ಅಭಿಮಾನ ವಿದ್ದಾಗ ಮಾತ್ರ ಕನ್ನಡ ನಾಡಿನ ಭವಿಷ್ಯ ಉಜ್ವಲವಾಗುತ್ತದೆ. ಇದನ್ನು ಎಲ್ಲಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು. ಯಾವುದೇ ಸಂದರ್ಭದಲ್ಲಿಯೂ ಜಾನಪದ ಕ್ಷೀಣಿಸಲು ಬಿಡುವುದಿಲ್ಲ. ಜಾನಪದವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಎಲ್ಲಾ ರೀತಿಯ ¨ಬೆಂಬಲವನ್ನು ನೀಡಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News