ಪರಮೇಶ್ವರ್ ಸರಳ ಸಜ್ಜನ ರಾಜಕಾರಣಿ: ಸಾಹಿತಿ ಚಂದ್ರಶೇಖರ ಕಂಬಾರ

Update: 2022-04-11 04:59 GMT

ತುಮಕೂರು, ಎ.10: ಆಡಿದ್ದನ್ನು ಮಾಡುವ, ಮಾಡಿದ್ದನ್ನೇ ಆಡುವ ಸರಳ ರಾಜಕಾರಣಿ ಡಾ.ಜಿ.ಪರಮೇಶ್ವರ್ ಅವರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದ್ದಾರೆ.

ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಸಿದ್ಧಾರ್ಥ ನೌಕರರ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಗೌರವ ಅಭಿನಂದನಾ ಗ್ರಂಥ ಸವ್ಯಸಾಚಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪರಮೇಶ್ವರ್ ಅವರ ಸರಳ ವ್ಯಕ್ತಿತ್ವದ ಬಗ್ಗೆ ಸಂಸ್ಥೆಯ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ. ಬರೆದಿದ್ದಾರೆ. ಪರಮೇಶ್ವರ್ ಅವರನ್ನು ಬಲ್ಲವರು ದೇಶದ ಹೊರಗೂ ಇದ್ದಾರೆ. ಅವರೆಲ್ಲರೂ ಬರೆಯುವ ಮೂಲಕ ಇನ್ನೊಂದು ಅತ್ಯುತ್ತಮ ಗ್ರಂಥ ಹೊರಬರಲಿ ಎಂದು ಆಶಿಸಿದರು.

ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ.ಸಿರಿ ಸುಮೇಧಾಸ ಥೇರಾ ಮಾತನಾಡಿ, ಭಗವಾನ್ ಬುದ್ಧ ಧರ್ಮ ಪ್ರಚಾರವನ್ನು ಉತ್ತರದಿಂದ ದಕ್ಷಿಣಕ್ಕೆ ಪ್ರಚಾರ ಮಾಡಿದರು, ಬುದ್ಧನ ಉಪದೇಶದಂತೆ ಲೋಕ ಕಲ್ಯಾಣ ಕಾರ್ಯಗಳನ್ನು ಡಾ.ಜಿ.ಪರಮೇಶ್ವರ್ ಅವರು ದಕ್ಷಿಣದಲ್ಲಿ ಮಾಡುತ್ತಿದ್ದಾರೆ ಎಂದರು.

ಬಹುಸಂಸ್ಕೃತಿಯ ದೇಶದಲ್ಲಿ ಎಲ್ಲ ಧರ್ಮಗಳು ಸಮನ್ವಯತೆಯಿಂದ ಬಾಳುವ ಮೂಲಕ ಶಾಂತಿಯುತವಾಗಿ ಬದುಕುವ ಜಗತ್ತಿಗೆ ಕರುಣಾ, ಮೈತ್ರಿ, ಅನುಕಂಪದ ಮಂತ್ರವನ್ನು ನೀಡಿವೆ. ಬಹುಜನ ಹಿತಾಯ, ಬಹುಜನ ಸುಖಾಯದಂತೆ ಉತ್ತಮ ಕೆಲಸಗಳನ್ನು ಇನ್ನಷ್ಟು ಮಾಡಲಿ ಎಂದು ಆಶಿಸಿದರು.

ಶ್ರೀರಾಮನ ಯಾವ ಗುಣಗಳನ್ನು ನಾವು ಪಾಲಿಸುತ್ತಿದ್ದೇವೆ: ಸವ್ಯಸಾಚಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಡಾ.ಜಿ.ಪರಮೇಶ್ವರ್ ಮಾತನಾಡಿ, ರವಿವಾರ ರಾಮನವಮಿ ಆಚರಿಸುತ್ತಿದ್ದೇವೆ. ಆದರೆ ನಾವು ನ್ಯಾಯ ಮತ್ತು ಧರ್ಮಕ್ಕೆ ಹೆಸರಾದ ಶ್ರೀರಾಮನ ಯಾವ ಗುಣಗಳನ್ನು ಪಾಲಿಸುತ್ತಿದ್ದೇವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮೀ ವಿವೇಕಾನಂದರು ಪ್ರತಿಪಾದಿಸಿದ,ಎಲ್ಲ ಧರ್ಮಗಳನ್ನು ಪ್ರೀತಿಸುವ ಹಿಂದೂ ಧರ್ಮವಾಗಿ ಉಳಿದಿದೆಯೇ ಎಂಬುದನ್ನು ನಾವು ಹಿಂದಿರುಗಿ ನೋಡಬೇಕಾಗಿದೆ.ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಪ್ರಸ್ತಾವದಲ್ಲಿ ಪ್ರತಿಪಾದಿಸಿದ ಸಮಾನತೆ, ಸಾಮರಸ್ಯ, ಭಾತೃತ್ವವನ್ನು ಒಳಗೊಂಡ ಧರ್ಮದ ಅಗತ್ಯವಿದೆ ಎಂದರು.

ಸಂಪಾದನೆ ಮತ್ತು ಸಂವೇದನೆ ಎರಡರ ಸಮತೋಲನವೇ ಡಾ.ಜಿ.ಪರಮೇಶ್ವರ್: ಸವ್ಯಸಾಚಿ ಗೌರವ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ,ಸಂಪಾದನೆ ಮತ್ತು ಸಂವೇದನೆ ಎರಡನ್ನು ಸಮತೋಲನದಲ್ಲಿ ಇಟ್ಟುಕೊಂಡಿರುವ ಬೆರಳಣಿಕೆಯ ವ್ಯಕ್ತಿಗಳಲ್ಲಿ ಡಾ.ಜಿ.ಪರಮೇಶ್ವರ್ ಅವರು ಒಬ್ಬರು,ರಾಜ್ಯದಲ್ಲಿರುವ ಎಡ-ಬಲಗಳ ನಡುವಿನ ಕಂದಕವನ್ನು ತುಂಬುವ ನಾಯಕತ್ವವನ್ನು ವಹಿಸಿಕೊಳ್ಳಬೇಕಿದೆ. ಕೆಲವರು ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನೇ ದೊಡ್ಡದು ಮಾಡುವ ಮೂಲಕ ಮತ್ತಷ್ಟು ಹದಗೆಡಿಸುವ ಕೆಲಸ ಮಾಡುತ್ತಿದ್ದು, ಇದನ್ನು ಸರಿಮಾಡುವ ಜವಾಬ್ದಾರಿ ಡಾ.ಜಿ.ಪರಮೇಶ್ವರ್ ಅವರ ಮೇಲಿದೆ ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ವಿರೇಶಾನಂದ ಸರಸ್ಪತಿ ಸ್ವಾಮೀಜಿ ಮಾತನಾಡಿ, ಸಾಮಾಜಿಕವಾಗಿ, ರಾಜಕೀಯವಾಗಿ ಎರಡುರಂಗದಲ್ಲಿಯೂ ಯಶಸ್ವಿಯಾಗಿರುವ ಪರಮೇಶ್ವರ್ ಅವರು, ಅರ್ಜುನನಂತೆಯೇ ನಿಜಾರ್ಥದಲ್ಲಿಯೂ ಸವ್ಯಸಾಚಿ ಎಂದು ಹೇಳಿದರು.

ಕುವೆಂಪು ಅವರ ಸರ್ವಧರ್ಮದ ಶಾಂತಿಯ ತೋಟದಂತೆ ಎಲ್ಲ ಧರ್ಮಗಳ ಸೇವೆಯಲ್ಲಿಯೂ ಡಾ.ಜಿ.ಪರಮೇಶ್ವರ್ ಇದ್ದಾರೆ. ಆದರೆ ಅವರನ್ನು ಧರ್ಮದಿಂದ ದೂರ ಉಳಿದಿದ್ದಾರೆ ಎಂದು ಅವಹೇಳನ ಮಾಡುತ್ತಿರುವುದು ಸರಿಯಲ್ಲ, ಪರಮೇಶ್ವರ್ ಅವರು ಮಾಸ್ ಲೀಡರ್ ಜೊತೆ ಕ್ಲಾಸ್ ಲೀಡರ್ ಅವರನ್ನು ಪ್ರೀತಿಸದ ಯಾವ ಜನಾಂಗವೂ ಇಲ್ಲ ಎಂದು ಹೇಳಿದರು.

ಕವಿ, ನಾಟಕಕಾರ, ಕಾದಂಬರಿಕಾರರು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಶ್ರೀ ಡಾ.ಚಂದ್ರಶೇಖರ ಕಂಬಾರ ಸವ್ಯಸಾಚಿ ಗೌರವಗ್ರಂಥವನ್ನು ಬಿಡುಗಡೆ ಮಾಡಿದರು. ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್, ಹೈಪ್ರೀಸ್ಟ್‌ಜಂಬೂದ್ವೀಪ, ಶ್ರೀಲಂಕಾ ಬುದ್ದಿಸ್ಟ್‌ಟೆಂಪಲ್, ಸಮಥ್, ವಾರಣಾಸಿಯ ಅಧ್ಯಕ್ಷ ಡಾ.ಕೆ.ಸಿರಿ ಸುಮೇಧಾಥೇರಾಮ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯೆ ಕನ್ನಿಕಾ ಪರಮೇಶ್ವರ್,ಡಾ.ಅನಂದ್, ಸಾಹೇ ಉಪಕುಲಪತಿ ಬಾಲಕೃಷ್ಣ ಶೆಟ್ಟಿ, ನಗರದ ಅಗಳಕೋಟೆಯ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸುಶೀಲ್ ಮಹಾಪತ್ರ,ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಕುಡ್ವ ಸೇರಿದಂತೆ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನೌಕರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗ್ರಾಮೀಣರ ಅಭ್ಯುದಯಕ್ಕೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕೆಲಸ ಮಾಡಿದೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಿದ್ಯಾಸಂಸ್ಥೆ ಪ್ರಾರಂಭಿಸಿ, ಶಿಕ್ಷಣಕ್ಕೆ ಒತ್ತು ನೀಡಿದರು, ಅಂಬೇಡ್ಕರ್ ಆಶಯದಂತೆ ಸ್ವಯಂ ಪ್ರಯತ್ನದಿಂದ ಯಶಸ್ಸು ಎನ್ನುವುದನ್ನು ಮರೆ ಯದೇ ಶ್ರಮಿ ಸುತ್ತಿರುವುದು ಸಿದ್ಧಾರ್ಥ ಸಂಸ್ಥೆ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಡಾ.ಜಿ. ಪರಮೇಶ್ವರ್ ನಾಯಕರಾಗಿದ್ದಾರೆ.

-ವಿರೇಶಾನಂದ ಸರಸ್ಪತಿ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮ

ಗಾಂಧಿ ಮತ್ತು ಅಂಬೇಡ್ಕರ್, ನೆಹರೂ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ರವರ ನಡುವೆ ಭಿನ್ನಾಭಿಪ್ರಾಯವಿತ್ತೇ ಹೊರತು ಅವರು ಎಂದಿಗೂ ದ್ವೇಷ ಸಾಧಿಸಿದವರಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾಯಕನಿಗೆ ಪ್ರತಿನಾಯಕನನ್ನು ಸೃಷ್ಟಿಸುವ ಕೆಲಸ ಬಹಳ ವೇಗ ಪಡೆದುಕೊಂಡಿದೆ. ಖಳನಾಯಕ ಹುಸಿ ಬೌದ್ಧಿಕ ಕಾರ್ಖಾನೆಗಳು ಆಗುತ್ತಿವೆ. ಧರ್ಮ, ಸಂಸ್ಕೃತಿ, ವ್ಯಕ್ತಿ ಅಪವ್ಯಾಖಾನ ವಾಗುತ್ತಿದೆ. ಕುರ್ಚಿಯಲ್ಲಿ ಕೂರುವವರು ಎತ್ತರದಲ್ಲಿರಬೇಕು. ಆಗ ಮಾತ್ರ ಪ್ರಜಾಸತ್ತಾತ್ಮಕ ಮೌಲ್ಯ ಕುಂಠಿತವಾಗುವುದಿಲ್ಲ.

 ಡಾ.ಬರಗೂರು ರಾಮಚಂದ್ರಪ್ಪ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News