ಸಿಪಿಎಂ ಹಿರಿಯ ನಾಯಕ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ

Update: 2022-04-15 06:11 GMT

ಚಿಕ್ಕಬಳ್ಳಾಪುರ: ಸಿಪಿಎಂ ಹಿರಿಯ ನಾಯಕ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ(67) ಅವರು ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ 6:45ರ ಸುಮಾರಿಗೆ ಬಾಗೇಪಲ್ಲಿಯಲ್ಲಿರುವ ಸ್ವಗೃಹದಲ್ಲಿ ಕುಸಿದುಬಿದ್ದ ಶ್ರೀರಾಮ ರೆಡ್ಡಿಯವರನ್ನು ತಕ್ಷಣ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿರುವುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.

ಸಿಪಿಎಂ ಪಕ್ಷದಿಂದ 1999 ಮತ್ತು 2004ರಲ್ಲಿ ಎರಡು ಬಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತರಾಗಿದ್ದರು. 

ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ವೇಳೆ ರಾಜ್ಯದಲ್ಲಿ ಎಡಪಂಥೀಯ ಚಳವಳಿಯನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಶ್ರೀರಾಮ ರೆಡ್ಡಿಯವರದ್ದು. ಶ್ರೀರಾಮರೆಡ್ಡಿಯವರು ರಾಜಕಾರಣದಲ್ಲಿ ಸಕ್ರೀಯರಾಗಿದ್ದಷ್ಟೂ ದಿನ ಎಡ ಯುವಜನ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು ಸಕ್ರಿಯವಾಗಿದ್ದವು.

ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಶ್ರೀರಾಮ ರೆಡ್ಡಿಯವರು ತನ್ನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಸಂಸ್ಕೃತಿಕ ರಾಜಕಾರಣವನ್ನು ರಾಜ್ಯದೆಲ್ಲೆಡೆ ಚುರುಕುಗೊಳಿಸಿದ್ದರು. ರಾಜ್ಯದಲ್ಲಿರುವ ಹಲವು ಬಂಡಾಯ ಸಾಹಿತ್ಯ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳನ್ನು ಕಟ್ಟುವಲ್ಲಿ ಶ್ರೀರಾಮರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದರು. 

ಆದರೆ 2018ರಲ್ಲಿ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಆರೋಪದಲ್ಲಿ ಜಿ.ವಿ.ಶ್ರೀರಾಮ ರೆಡ್ಡಿ ಅವರನ್ನು ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು. ಬಳಿಕ ಜಿಲ್ಲೆಯಲ್ಲಿ ಪ್ರಜಾ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದ್ದ ಶ್ರೀರಾಮರೆಡ್ಡಿ ಆ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದೂ ಘೋಷಿಸಿದ್ದರು.

ಸಂತಾಪ:  'ಸಿಪಿಎಂ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ‌ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಬಡವರು, ಕಾರ್ಮಿಕರು ಮತ್ತು ರೈತರ ಪರ ಹೋರಾಟಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ರೆಡ್ಡಿಯವರು ಇತ್ತೀಚಿನ ವರ್ಷಗಳಲ್ಲಿ‌ ಕೋಮುವಾದದ ವಿರುದ್ದದ ಗಟ್ಟಿದನಿಯಾಗಿದ್ದರು. ಇತ್ತೀಚೆಗೆ ಜಾತ್ಯತೀತ ಶಕ್ತಿಗಳ ಸಂಘಟನೆಗೆ ಪ್ರಯತ್ನ ನಡೆಸುತ್ತಿದ್ದ ಜಿ.ವಿ.ಶ್ರೀರಾಮ ರೆಡ್ಡಿ ಸಾವಿನಿಂದ ರಾಜ್ಯ ಒಬ್ಬ ಧೀಮಂತ ಹೋರಾಟಗಾರನನ್ನು ಮತ್ತು ವೈಯಕ್ತಿಕವಾಗಿ ನಾನು ಬಹುಕಾಲದ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬದ ಸದಸ್ಯರ‌ ಮತ್ತು ಅನುಯಾಯಿಗಳ‌ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News