ಸಂತೋಷ್ ಆತ್ಮಹತ್ಯೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಹೋರಾಟ: ಸಿದ್ದರಾಮಯ್ಯ
ಬೆಂಗಳೂರು, ಎ. 15: ‘ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಹೋರಾಟದ ಮೂಲಕ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಲ್ಲ ರೀತಿ ಪ್ರಯತ್ನ ಮಾಡಲಿದೆ. ಬಿಜೆಪಿ ಕಾರ್ಯಕಾರಣಿ ಸಭೆ(ಎ.16) ನಡೆಯುವ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲೂ ನಾವು ಪ್ರತಿಭಟನೆ ಮಾಡುತ್ತೇವೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ 24 ಗಂಟೆಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಕ್ತಾಯದ ಬಳಿಕ ಮಾತನಾಡಿದ ಅವರು, ‘ನಾವಿದನ್ನು ರಾಜಕಾರಣಕ್ಕಾಗಿ ಮಾಡುತ್ತಿಲ್ಲ, ಮೃತ ಸಂತೋಷ್ ಕುಟುಂಬದವರಿಗೆ ನ್ಯಾಯ ಸಿಗಬೇಕೆಂಬುದು ನಮ್ಮ ನೈಜ ಆಶಯ. ಸಂವಿಧಾನಬದ್ಧ ವಿಪಕ್ಷವಾಗಿ ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ನಮ್ಮ ಕರ್ತವ್ಯ ಆಗಿದೆ' ಎಂದು ಹೇಳಿದರು.
‘ನಿನ್ನೆ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಒಳಗೊಂಡಂತೆ ಎಲ್ಲ ನಾಯಕರು ಮುಖ್ಯಮಂತ್ರಿಗೆ ಘೇರಾವ್ ಹಾಕುವ ಪ್ರಯತ್ನ ಮಾಡಿದ್ದೆವು. ಕಾಂಗ್ರೆಸ್ ಕಚೇರಿಯಿಂದ ಸಿಎಂ ನಿವಾಸದ ವರೆಗೆ ಕಾಲ್ನಡಿಗೆ ಮೂಲಕ ತೆರಳಬೇಕಿತ್ತು, ಆದರೆ ಮಾರ್ಗಮಧ್ಯದಲ್ಲಿ ಪೊಲೀಸರು ನಮ್ಮನ್ನು ತಡೆದು, ಬಂಧಿಸಿದರು. ಈ ವೇಳೆ ನಾವು ಪೊಲೀಸ್ ಠಾಣೆಯಲ್ಲೆ ಕುಳಿತು ವಿಧಾನಸೌಧದ ಮುಂಭಾಗ 24 ಗಂಟೆಗಳ ಕಾಲ ಅಹೋರಾತ್ರಿ ಧರಣಿ ನಿರ್ಧಾರ ಮಾಡಿದೆವು. ನಮ್ಮ ಧರಣಿ ಮುಕ್ತಾಯಗೊಂಡಿದೆ' ಎಂದರು.
‘ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಸರಕಾರದ ಶೇ.40ರಷ್ಟು ಕಮಿಷನ್ ಕಿರುಕುಳಕ್ಕೆ ಸಂತೋಷ್ ಎಂಬ ಗುತ್ತಿಗೆದಾರ ಬಲಿಯಾಗಿದ್ದಾನೆ. ಈ ತಿಂಗಳ ಎ.11ರ ರಾತ್ರಿ 10 ರಿಂದ 12ರ ಬೆಳಗ್ಗೆ 6 ಗಂಟೆಯೊಳಗೆ ಸಂತೋಷ್ ಉಡುಪಿಯ ಹೊಟೇಲ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪಿರ್ಯಾದಿನಲ್ಲಿ ನಮೂದಾಗಿದೆ. ಆದರೆ ಎಫ್ಐಆರ್ ಆಗಿರುವುದು 13ನೆ ತಾರೀಖು. ಅದು ನಾವೆಲ್ಲ ಒತ್ತಡ ಹಾಕಿದ ಮೇಲೆ ತಡವಾಗಿ ದಾಖಲಾದದ್ದು. ಪ್ರಶಾಂತ್ ಗೌಡ ಪಾಟೀಲ್ ನೀಡಿರುವ ದೂರಿನಲ್ಲಿ ‘ಹಿಂಡಲಗಾ ಗ್ರಾಮದಲ್ಲಿ ಜಾತ್ರೆ ಇತ್ತು, ಸಾಕಷ್ಟು ಜನ ಸೇರುತ್ತಾರೆಂಬ ಕಾರಣಕ್ಕೆ ಒಂದಷ್ಟು ಕಾಮಗಾರಿಗಳನ್ನು ಮಾಡಬೇಕು ಎಂದು ಊರಿನ ಜನ, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸಂತೋμï, ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ, ಅದಕ್ಕೆ ಈಶ್ವರಪ್ಪ ಅವರು ಕೆಲಸ ಮಾಡಿ ಮುಗಿಸಿ, ನಂತರ ಹಣ ಬಿಡುಗಡೆ ಮಾಡಿಸುತ್ತೇನೆಂಬ ಭರವಸೆ ನೀಡಿದ್ದಾರೆ, ಸಚಿವರ ಮೌಖಿಕ ಆದೇಶದ ಮೇರೆಗೆ ಸಂತೋμï ಪಾಟೀಲ್ ಮತ್ತವರ ಸ್ನೇಹಿತರು ಸುಮಾರು 4 ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಮಾಡಿ ಮುಗಿಸಿ, ಬಿಲ್ ಹಣ ಪಾವತಿಸುವಂತೆ ಕೇಳಿದ್ದಾರೆ, ಅದಕ್ಕೆ ಸಚಿವರು ಹಣ ಬಿಡುಗಡೆ ಮಾಡಲು ಶೇ.40ರಷ್ಟು ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕಾಮಗಾರಿ ಮಾಡಲು ಖಾಸಗಿ ವ್ಯಕ್ತಿಗಳಿಂದ ಅಧಿಕ ಬಡ್ಡಿಗೆ ಮತ್ತು ಪತ್ನಿಯ ಒಡವೆಗಳನ್ನು ಅಡವಿಟ್ಟು ಸಾಲ ತಂದಿದ್ದಾರೆ. ಸಚಿವರು ಬಿಲ್ ಹಣಕ್ಕಾಗಿ ಸಾಕಷ್ಟು ಬಾರಿ ಅಲೆದಾಡಿಸಿದ್ದಾರೆ, ಇನ್ನೊಂದು ಕಡೆ ಸಾಲ ಕೊಟ್ಟವರು ಹಣ ಮರುಪಾವತಿಸುವಂತೆ ಒತ್ತಡ ಹೇರಿದ್ದಾರೆ. ಇದರಿಂದ ನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣದ ದೂರಿನಲ್ಲಿ ಸಚಿವರ ವಿರುದ್ಧ ಭ್ರಷ್ಟಾಚಾರ ನಡೆಸಿರುವ ಆರೋಪ ಸ್ಪಷ್ಟವಾಗಿರುವುದರಿಂದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7(ಚಿ) ಹಾಗೂ 13 ಕ್ಲಾಸ್ 1ರಡಿ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕಿತ್ತು. ಇದನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಸೆಕ್ಷನ್ 34 ಹಾಗೂ 306 ರಡಿ ಕೇಸ್ ದಾಖಲಿಸಿದ್ದಾರೆ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ -13 ರಡಿ ಪ್ರಕರಣ ದಾಖಲು ಮಾಡಬೇಕು. ಈಗ ಕೇವಲ ಸೆಕ್ಷನ್ 34 ಹಾಗೂ 306 ರಡಿ ಕೇಸ್ ದಾಖಲಾಗಿದೆ ಎಂದು ಹೇಳಿದರು.
‘ಇದೊಂದು ಅಮಾನವೀಯ ಅಪರಾಧ, ಇಂತಹ ಅಪರಾಧ ಪ್ರಕರಣಗಳಲ್ಲಿ ಎಫ್ಐಆರ್ ಆದ ಕೂಡಲೇ ಅಪರಾಧಿಯನ್ನು ಬಂಧಿಸಬೇಕು ಎಂದು ಈ ನೆಲದ ಕಾನೂನು ಹೇಳುತ್ತದೆ, ಹಾಗಾಗಿ ಈ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಬೇಕು. ಸಂತೋಷ್ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದೇವೆ. ಸಂತೋಷ್ ಕುಟುಂಬಸ್ಥರಿಗೆ 1 ಕೋಟಿ ರೂ. ಪರಿಹಾರ ನೀಡಬೇಕು, ಮೃತನ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ಉದ್ಯೋಗ ನೀಡಬೇಕು. ಒಂದು ವೇಳೆ ಇದು ವಿಳಂಬವಾದರೆ ಪಕ್ಷದ ಮುಖಂಡರು ಆಕೆಗೆ ತಾತ್ಕಾಲಿಕ ಉದ್ಯೋಗ ನೀಡುತ್ತಾರೆ. ಜೊತೆಗೆ ನಾಳೆ ಡಿ.ಕೆ.ಶಿವಕುಮಾರ್ ಪಕ್ಷದ ವತಿಯಿಂದ ಮೃತರ ಕುಟುಂಬಕ್ಕೆ 11ಲಕ್ಷ ರೂ.ಚೆಕ್ ಅನ್ನು ನೀಡಲಿದ್ದಾರೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ: ‘ಸಂತೋಷ್ ಪಾಟೀಲ್ ಪೂರ್ಣಗೊಳಿಸಿರುವ ಕಾಮಗಾರಿಯ ಒಟ್ಟು 4 ಕೋಟಿ ರೂ.ಬಿಲ್ ಅನ್ನು ರಾಜ್ಯ ಸರಕಾರ ಕೂಡಲೇ ಪಾವತಿ ಮಾಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ನಾವು 4 ಗಂಟೆಗಳ ಕಾಲ ಅಹೋರಾತ್ರಿ ಧರಣಿ ಮಾಡಿದ್ದೇವೆ, ನಾಳೆಯಿಂದ 9 ತಂಡಗಳಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಿ ನಂತರ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡುತ್ತೇವೆ' ಎಂದು ಅವರು ತಿಳಿಸಿದರು.
‘ಸಂತೋಷ್ ಆತ್ಮಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಬೇಕು. ಸ್ವತಃ ಸಿಎಂ ಅವರೇ, ಈಶ್ವರಪ್ಪ ಅಮಾಯಕ ಎಂಬಂತ ಹೇಳಿಕೆ ನೀಡಿದ್ದಾರೆ, ಹಾಗಾಗಿ ರಾಜ್ಯ ಸರಕಾರ ನಡೆಸುವ ತನಿಖೆಯಿಂದ ನ್ಯಾಯ ಸಿಗುವ ಯಾವುದೇ ನಂಬಿಕೆ ಇಲ್ಲ. ಹೈಕೋರ್ಟ್ನ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆಯಾಗಬೇಕು. ಏಕೆಂದರೆ ಈಶ್ವರಪ್ಪ ಸಾಮಾನ್ಯ ಮನುಷ್ಯ ಅಲ್ಲ, ಅವರು ಸಾಕ್ಷ್ಯನಾಶ ಮಾಡುವ, ಪ್ರತ್ಯಕ್ಷ ಸಾಕ್ಷಿಗಳಿಗೆ ಬೆದರಿಸುವ ಸಾಧ್ಯತೆಗಳು ಇವೆ. ಗ್ರಾಮ ಪಂಚಾಯತಿ ಅಧ್ಯಕ್ಷ ನಾನೆ ಈಶ್ವರಪ್ಪ ಬಳಿಗೆ ಸಂತೋಷ್-+ ಪಾಟೀಲರನ್ನು ಕರೆದುಕೊಂಡು ಹೋಗಿದ್ದೆ ಎಂದಿದ್ದಾರೆ, ನಾಳೆ ಇವರಿಗೆ ಈಶ್ವರಪ್ಪ ಬೆದರಿಕೆ ಹಾಕಿದರೆ ಏನು ಮಾಡುವುದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.