ಕಾಂಗ್ರೆಸ್ಸಿಗರು ತಮ್ಮ ಕಪಾಟುಗಳಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳ ಲೆಕ್ಕಹಾಕಲಿ: ಸಿಎಂ ಬೊಮ್ಮಾಯಿ

Update: 2022-04-16 15:28 GMT

ಬೆಂಗಳೂರು, ಎ. 16: ‘ಭ್ರಷ್ಟಾಚಾರದ ವಿರುದ್ಧ ಯಾತ್ರೆ ಹೊರಟಿರುವ ಕಾಂಗ್ರೆಸ್ಸಿನವರು ತಮ್ಮ ಕಪಾಟು(ಬೀರು)ಗಳಲ್ಲಿರುವ ಭ್ರಷ್ಟಾಚಾರದ ಅಸ್ಥಿಪಂಜರಗಳು ಎಷ್ಟಿವೆ ಎಂದು ಮೊದಲು ಲೆಕ್ಕಹಾಕಿಕೊಳ್ಳಲಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಶನಿವಾರ ನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಮುಖಂಡರು ಶುದ್ಧಹಸ್ತರು, ಪವಿತ್ರ ಹಸ್ತದವರು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದು, ಯಾತ್ರೆ ಹೊರಟಿದ್ದಾರೆ. ಜನಕ್ಕೆ ಎಲ್ಲವೂ ಗೊತ್ತಿದೆ. ಇದ್ಯಾವುದರಿಂದಲೂ ಪ್ರಯೋಜನವಾಗುವುದಿಲ್ಲ ಎಂದು ಗೊತ್ತಿದೆ' ಎಂದು ಟೀಕಿಸಿದರು.

ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಬಹಳ ವರ್ಷಗಳಿಂದ ನೋಡಿದ್ದಾರೆ. ಯಾವ ಯಾವ ಹಗರಣಗಳಾಗಿವೆ ಎಂದು ಅವರಿಗೆ ತಿಳಿದಿದೆ. ನಾವೂ ಜನರ ಮುಂದೆ ಅವರು ಮಾಡಿರುವ ಹಗರಣಗಳನ್ನು ಇಡಬೇಕಾದ ಕಾಲ ಬರುತ್ತಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕೇಸು ಹಾಕಿಲ್ಲ. ಸಂತೋಷ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಇದ್ದು, ತನಿಖೆಯಾಗುತ್ತಿದೆ. ಶವಪರೀಕ್ಷೆಯ ನಂತರ ಬರುವ ಎಫ್‍ಎಸ್‍ಎಲ್ ವರದಿ ಆಧಾರದ ಮೇಲೆ ವೈಜ್ಞಾನಿಕವಾಗಿ ಏನು ನಡೆಯಿತು ಎಂದು ಗೊತ್ತಾಗಲಿದೆ ಎಂದು ವಿವರಣೆ ನೀಡಿದರು. 

ಹಸ್ತಕ್ಷೇಪ ಮಾಡಿಲ್ಲ: ‘ಸಿದ್ದರಾಮಯ್ಯ ಅವರು ಕೆ.ಜೆ.ಜಾರ್ಜ್ ವಿಚಾರದಲ್ಲಿ ವಿಡಿಯೋ ಹಾಗೂ ಮರಣ ಪತ್ರವೂ ಇತ್ತು. ಆದರೆ ಎಫ್‍ಐಆರ್ ನಲ್ಲಿ ಹೆಸರು ಬಂದಿತ್ತಾ? ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಲಿಲ್ಲವೇ? ಕೋರ್ಟ್‍ನಿಂದ ಆದೇಶ ಬಂದ ನಂತರ ಎಫ್‍ಐಆರ್ ಆಯಿತು. ಅವರ ಮನೆಯವರು ಕೋರ್ಟಿಗೆ ಹೋಗಬೇಕಾಯಿತು ಎಫ್‍ಐಆರ್ ಆಗಲು. ಆದರೆ ನಾವು ದೂರಿನ ಮೇಲೆ ಎಫ್‍ಐಆರ್ ದಾಖಲಿಸಿ ತನಿಖೆ ಮಾಡಿಸುತ್ತಿದ್ದೇವೆ ಎಂದು ಸ್ಪಷ್ಟಣೆ ನೀಡಿದರು.

ಈ ಪ್ರಕರಣದ ತನಿಖೆಯ ಆಧಾರದ ಮೇಲೆ ಮುಂದಿನ ಸೆಕ್ಷನ್‍ಗಳನ್ನು ಹಾಕಲಾಗುವುದು. ತನಿಖೆಯಾಗಲು ಬಿಡಿ. ಯಾವಾಗ ಯಾವ ಸೆಕ್ಷನ್ ಹಾಕಬೇಕು ಎನ್ನುವುದು ಕಾನೂನು ಬದ್ಧವಾಗಿ ಆಗುತ್ತದೆ. ನಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಕಾನೂನು ಇದೆ, ತನಿಖೆಯಾಗುತ್ತದೆ. ಚಾರ್ಚ್‍ಶೀಟ್ ಆದ ಮೇಲೆ ಕೋರ್ಟಿನಲ್ಲಿ ಸರಿ ಇದೆಯೇ ಎಂದು ಮತ್ತೊಮ್ಮೆ ವಿಶ್ಲೇಷಣೆ ಆಗುತ್ತದೆ. ನಮ್ಮಲ್ಲಿರುವ ವ್ಯವಸ್ಥೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಪ್ರಾಥಮಿಕ ತನಿಖೆಯಾದ ನಂತರ ಉನ್ನತ ಮಟ್ಟದ ತನಿಖೆ ವಹಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News