ಸಮ್ಮೇಳನಕ್ಕೂ ಮುನ್ನ ಕುವೆಂಪು ವಿರಚಿತ ನಾಡಗೀತೆಯ ಹಾಡಿನ ಧಾಟಿ ನಿರ್ಧರಿಸಿ: ಸಿಎಂಗೆ ಕಸಾಪ ಆಗ್ರಹ
Update: 2022-04-17 11:37 GMT
ಬೆಂಗಳೂರು, ಎ. 17: ಹಾವೇರಿ ಸಮ್ಮೇಳನಕ್ಕೆ ಮುಂಚೆಯೇ ಕುವೆಂಪು ವಿರಚಿತ ನಾಡಗೀತೆಯ ಹಾಡಿನ ಧಾಟಿ ನಿರ್ಧರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕನ್ನಡ ಸಾಹಿತ್ಯ ಪರಿಷತ್ ಆಗ್ರಹಿಸಿದೆ.
1971ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಅವರ `ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ‘ನಾಡಗೀತೆ' ಎಂದು ಅಂಗೀಕರಿಸಿ ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಅದನ್ನು ಹಾಡಿಸಲಾಗುತ್ತಿತ್ತು. ಆದರೆ ಈ ಹಾಡಿಗೆ ಸೂಕ್ತ ಧಾಟಿಯನ್ನು ಇದುವರೆಗೂ ನಿರ್ಧರಿಸಿರುವುದಿಲ್ಲ ಹಾಗೂ ಕರ್ನಾಟಕ ಏಕೀಕರಣವಾಗಿ 66 ವರ್ಷಗಳಾದರೂ ಇದನ್ನು ಇನ್ನೂ ನೆನೆಗುದಿಗೆ ಬಿದ್ದಿದೆ.
ಹೀಗಾಗಿ, ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ 86ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ಮುಂಚೆಯೇ ದಿಟ್ಟ ನಿರ್ಧಾರ ಕೈಗೊಳ್ಳಿ ಎಂದು ಆಗ್ರಹಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.