ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಅಸ್ತು
ಬೆಂಗಳೂರು, ಎ.18: ರಾಜ್ಯದಲ್ಲಿ ಗೋಹತ್ಯೆಗಳನ್ನು ತಡೆಯುವ ಉದ್ದೇಶದಿಂದ ರೂಪಿಸಲಾದ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಸೋಮವಾರ ಹಸಿರು ನಿಶಾನೆ ತೋರಿದ್ದು, ಅದು ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.
ನಿಯಮಗಳನ್ನು ರಚಿಸುವವರೆಗೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಕಾಯಿದೆ ಜಾರಿಗೊಳಿಸುವುದಿಲ್ಲ ಎಂದು ಸರಕಾರವೇನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಅದನ್ನು ಆಧರಿಸಿ 2021ರ ಜ.20ರಂದು ಹೈಕೋರ್ಟ್ ಕಾಯಿದೆ ಜಾರಿಗೆ ಮಧ್ಯಂತರ ತಡೆ ನೀಡಿತ್ತು.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕಸಾಯಿ ಖಾನೆ ಮಾಲಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದವು.
ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, 2021ರ ಜ.20ರ ಮಧ್ಯಂತರ ಆದೇಶ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಮಾನ್ಯ ಮಾಡಬೇಕು. ಹಿಂದೆ ಸರಕಾರಕ್ಕೆ ನಿಯಮಗಳನ್ನು ರೂಪಿಸುವವರೆಗೆ ಕಾಯಿದೆ ಜಾರಿಗೊಳಿಸಬಾರದೆಂದು ನೀಡಿರುವ ಆದೇಶ ಪರಿಷ್ಕರಣೆ ಮಾಡಬೇಕು ಎಂದರು.
ಸರಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ- 2020 ಅಡಿ 2021ರ ಫೆ.15ರಂದೇ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿತ್ತು. ಆನಂತರ ಆಕ್ಷೇಪಣೆ ಸ್ವೀಕರಿಸಿ ನಿಯಮ ಅಂತಿಮಗೊಳಿಸಿ 2021ರ ಮೇ 24ರಂದು ರಾಜ್ಯಪತ್ರದಲ್ಲೂ ಸಹ ಪ್ರಕಟಿಸಲಾಗಿದೆ. ಹಾಗಾಗಿ ಕಾಯಿದೆ ಜಾರಿಗೆ ಸರ್ಕಾರಕ್ಕೆ ಅನುಮತಿ ನೀಡಬೇಕು ಎಂದು ಕೋರಿದರು.
ಅದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ಎತ್ತಿದರು, ಕಾಯಿದೆಯನ್ನು ಪ್ರಶ್ನಿಸಲಾಗಿದೆ. ಈಗ ಜಾರಿಗೆ ಅನುಮತಿ ನೀಡಿದರೆ ತೀರಾ ಕಷ್ಟವಾಗುತ್ತದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದರು. ಆದರೆ ಸರಕಾರದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, 2021ರ ಜ.20ರಂದು ನೀಡಿದ್ದ ಆದೇಶ ಮಾರ್ಪಾಡು ಮಾಡಿತಲ್ಲದೆ, ನಿಯಮಗಳನ್ನು ಜಾರಿಗೊಳಿಸಲು ಅನುಮತಿ ನೀಡಿತು. ಆದರೆ ಪ್ರಕರಣದ ಅಂತಿಮ ಆದೇಶಕ್ಕೆ ಒಳಪಡುತ್ತದೆ ಎಂದು ನ್ಯಾಯಪೀಠ ಆದೇಶಿಸಿತು.
ಈ ಹಿಂದೆ ಅಡ್ವೊಕೇಟ್ ಜನರಲ್ ಅವರೇ, ಕಾಯಿದೆ ಜಾರಿಗೆ ಬಲವಂತದ ಕ್ರಮ ಕೈಗೊಳ್ಳದಂತೆ, ಎಫ್ ಐಆರ್ ಹಾಕದಂತೆ ಪೊಲೀಸರಿಗೆ ಸರಕಾರ ಮತ್ತೆ ಅಗತ್ಯ ನಿರ್ದೇಶನವನ್ನು ನೀಡಲಿದೆ ಎಂದು ಹೈಕೋರ್ಟ್ ಗೆ ತಿಳಿಸಿದರು.
ಅಲ್ಲದೆ, ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾಯಿದೆ ಜಾರಿ ಮಾಡುವುದಿಲ್ಲವೆಂದು ಸರಕಾರ ಭರವಸೆ ನೀಡಿತ್ತು. ಆದರೂ ಸಹ 50 ಕೇಸುಗಳನ್ನು ದಾಖಲಿಸಿದೆ ಎಂದು ಆರೋಪಿಸಿತ್ತು. ಆದರೆ, ಪೊಲೀಸರು 29 ಕೇಸುಗಳನ್ನು ದಾಖಲಿಸಿದ್ದಾರೆ, ಅವುಗಳಲ್ಲಿ 16 ಕೇಸು ಸೆಕ್ಷನ್ 6 (ಗೋಹತ್ಯೆ) ಮತ್ತು 11 ಕೇಸು ಸೆಕ್ಷನ್ 5 (ಅಕ್ರಮ ಗೋ ಸಾಗಾಣೆ)ಗೆ ಸಂಬಂಧಿಸಿದಂತೆ ದಾಖಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಎಫ್ ಐಆರ್ ಹಾಕಲಾಗಿದೆ ಎಂದರು.
ಅಲ್ಲದೆ, ಮುಂದೆ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಎಫ್ ಐಆರ್ ಹಾಕಬಾರದು ಎಂದು ಸರಕಾರ ಪೆÇಲೀಸರಿಗೆ ಆದೇಶ ಹೊರಡಿಸಲಿದೆ. ಜೊತೆಗೆ ಸೆಕ್ಷನ್ 5ರ ಪ್ರಕಾರ ಗೋವುಗಳ ಸಾಗಾಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಅರ್ಜಿಗೆ ಸಂಬಂಧಿಸಿದಂತೆ ಕೆಲವರು ಸರಕಾರದ ನಿರ್ಧಾರ ಬೆಂಬಲಿಸಿ, ಕೆಲವರು ಅರ್ಜಿದಾರರ ಪರ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ, ಅವುಗಳಲ್ಲಿ ಎಲ್ಲರ ವಾದವನ್ನು ಆಲಿಸಲಾಗುವುದು ಎಂದು ನ್ಯಾಯಾಲಯ ಹೇಳಿತು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ- 2020 ಪ್ರಶ್ನಿಸಿ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.