‘ಶೇ.40ರಷ್ಟು ಕಮಿಷನ್ ದೂರು ಕೇಂದ್ರ' ಎಂದು ಪ್ರಧಾನಿ ಕಚೇರಿ ಹೆಸರು ಬದಲಾಯಿಸಿ: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

Update: 2022-04-20 12:23 GMT

ಬೆಂಗಳೂರು, ಎ. 20: ‘ರಾಜ್ಯದಲ್ಲಿ ಶೇ.40ರಷ್ಟು ಕಮಿಷನ್ ಸರಕಾರದ ಆರೋಪಗಳು ದಾಖಲೆ ಸಮೇತ ಸಾಲು ಸಾಲು ಪತ್ರಗಳು ಪ್ರಧಾನಿ ಕಚೇರಿಗೆ ತಲುಪುತ್ತಿವೆ. ‘ಶೇ.40ರಷ್ಟು ಕಮಿಷನ್ ದೂರು ಪಟ್ಟಿ' ಎಂದು ಪ್ರಧಾನಿ ಕಚೇರಿಯ ಹೆಸರು ಬದಲಾಯಿಸಿ ಪ್ರಧಾನಿಯವರೇ. ನಿಮ್ಮ 18 ಗಂಟೆಗಳ ಕೆಲಸದ ಬಿಡುವಿನ ವೇಳೆಯಲ್ಲಿ ಪುರಸೊತ್ತು ಮಾಡಿಕೊಂಡು ಒಮ್ಮೆ ಕಣ್ಣಾಡಿಸಿ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಲಂಕೆಯ ಸುಟ್ಟರೂ ಖಾಲಿಯಾಗದ ಹನುಮಂತನ ಬಾಲದಂತೆ ಕಮಿಷನ್ ಸರಕಾರದ ಹಗರಣಗಳ ದಾಖಲೆಗಳು ದಿನಕ್ಕೊಂದು ಧಾರಾವಾಹಿಗಳಂತೆ ಕುತೂಹಲಕಾರಿಯಾಗಿ ಜಗಜ್ಜಾಹೀರಾಗುತ್ತಿದೆ. ಧಾರಾವಾಹಿಯ ಕ್ಲೈಮ್ಯಾಕ್ಸ್ ನಿಮ್ಮ ಬುಡಕ್ಕೆ ಬರುವ ಎಲ್ಲ ಮುನ್ಸೂಚನೆ ದಟ್ಟವಾಗಿ ಗೋಚರಿಸುತ್ತಿದೆ, ಎದುರಿಸಲು ಸಿದ್ದರಾಗಿ' ಎಂದು ಸವಾಲು ಹಾಕಿದ್ದಾರೆ.

‘ಈಗಾಗಲೇ ಪ್ರಧಾನಿ ಕಚೇರಿಯ ಬಾಗಿಲು ಬಾಡಿದು, ಬಂದ ದಾರಿಗೆ ಸುಂಕವಿಲ್ಲದೆ ಅಮಾಯಕ ಗುತ್ತಿಗೆದಾರ ಸಂತೋಷ್, ಸಚಿವರಿಗೆ ಶೇ.40ರಷ್ಟು ಕಮಿಷನ್ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಜೆಗಳ ಹಿತಾಸಕ್ತಿಯನ್ನ ಕಾಪಾಡದ ಸರಕಾರ ಆತ್ಮಹತ್ಯೆಗೆ ದೂಡಿದೆ ಎಂದರೆ ಆತ್ಮಹತ್ಯೆ ಎನ್ನಲಾಗದು. ಅದರಲ್ಲೂ ಸಚಿವರೇ ಪ್ರಕರಣದಲ್ಲಿ ನಂ.1 ಆರೋಪಿ ಎಂದರೆ ಇದೊಂದು ಸರಕಾರಿ ಪ್ರಾಯೋಜಿತ ಕೊಲೆ!' ಎಂದು ಅವರು ಆರೋಪಿಸಿದ್ದಾರೆ.

‘ಗೋಮಾತೆ, ಗೋ ರಕ್ಷಕರು ಎಂದು ಪುಂಗಿ ಊದುವ ನಿಮ್ಮ ಸರಕಾರ ಗೋವು ತಿನ್ನುವ ಮೇವಿನಲ್ಲಿ ಕಮಿಷನ್ ಪಡೆಯುತ್ತಿದೆ ಎಂದು ಮೇವು ಸರಬರಾಜು ಮಾಡುವ ಗುತ್ತಿಗೆದಾರರು ನಿಮ್ಮ ಕಚೇರಿಗೆ ಪತ್ರ ಬರೆದಿದ್ದಾರೆ. ಎಪ್ಪತ್ತು ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಅಬ್ಬರಿಸಿ ಬೊಬ್ಬೆ ಹಾಕುತ್ತಿದ್ದ ನಿಮ್ಮ ಟೆಲಿಪ್ರಾಂಪ್ಟರ್ ಭಾಷಣದಲ್ಲಿ ಇಂತಹ ಆರೋಪಗಳನ್ನ ತಾವೇ ಮಾಡಿರುವುದಕ್ಕೆ ಸಾಧ್ಯವಿಲ್ಲ, ಬೇಕಿದ್ರೆ ಒಮ್ಮೆ ಚೆಕ್ ಮಾಡಿಕೊಳ್ಳಿ' ಎಂದು ಅವರು ಲೇವಡಿ ಮಾಡಿದ್ದಾರೆ.

‘ಸರಕಾರದ ಪ್ರತಿಯೊಂದು ಇಲಾಖೆಗಳ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್, ಗೋವುಗಳ ಮೇವಿನಲ್ಲಿ ಶೇ.40 ಕಮಿಷನ್, ಮಠಗಳ ಅನುದಾನದಲ್ಲೂ ಶೇ.30 ಕಮಿಷನ್, ಪರೀಕ್ಷೆ ನಿರ್ವಹಣೆಯಲ್ಲೂ ಶೇ.20 ಕಮಿಷನ್ ಕಡ್ಡಾಯಗೊಳಿಸಿದ್ದಾರೆ. ಮಠಾಧೀಶರೇ ಕಮಿಷನ್‍ಗೆ ಬೇಸತ್ತು ಬಹಿರಂಗ ಹೇಳಿಕೆ ನೀಡುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು. ಬಹುಶಃ ನಿಮ್ಮ ಪಕ್ಷದ ನೇತೃತ್ವದ ಸರಕಾರ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ‘ಕಾಮಗಾರಿಗಳಲ್ಲಿ ಕಮಿಷನ್ ಕಡ್ಡಾಯ ಕಾಯ್ದೆ' ತರಬಹುದೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

‘ರಾಜ್ಯದ ಪ್ರಮುಖ ಇಲಾಖೆಗಳ ಕಾಮಗಾರಿ ನಡೆದು ವರ್ಷಗಳೇ ಕಳೆಯುತ್ತಿದ್ದರು ಬಿಲ್ ಬಾಕಿ ಉಳಿಯುತ್ತಿವೆ. ನೀರಾವರಿ ಇಲಾಖೆಯೊಂದರಲ್ಲಿಯೇ ಎರಡು ವರ್ಷಗಳಲ್ಲಿ 12,845 ಕೋಟಿ ರೂ.ಬಿಲ್ ಬಾಕಿ ಇದೆ. ಬಾಕಿ ಉಳಿಸಿಕೊಂಡಿರುವ ಹಿಂದೆ ಶೇ.40 ಕಮಿಷನ್ ನೀಡದೆ ಇರುವುದೊಂದೇ ಕಾರಣವೇ? ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಹಲವಾರು ಮಾನದಂಡಗಳಿವೆ. ಆದರೆ ಬಿಜೆಪಿ ಸರಕಾರದಲ್ಲಿ ಶೇ.40ರಷ್ಟು ಕಮಿಷನ್ ಮಾತ್ರವೇ ಮಾನದಂಡವಾಗಿದೆ' ಎಂದು ಅವರು ದೂರಿದ್ದಾರೆ.

‘ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪತ್ರಿಕೆಗಳ ಮುಖಪುಟದಲ್ಲಿ ಭ್ರಷ್ಟಾಚಾರದ ಮುಖವಾಡಗಳು ಬಯಲಾಗುತ್ತಿವೆ. ಪಿಎಸ್ಸೈ ನೇಮಕಾತಿಯಲ್ಲಿ ನೂರಾರು ಕೋಟಿ ರೂ.ಭ್ರಷ್ಟಾಚಾರ ಎಸಗಿದ್ದಾರೆ. ಸ್ವಪಕ್ಷದ ಸಚಿವರು, ಶಾಸಕರುಗಳೇ ಸಿಎಂಗೆ ಪತ್ರ ಬರೆಯುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಪರಿಷತ್‍ನಲ್ಲಿ ನನ್ನ ಪ್ರಶ್ನೆಗೆ ಉತ್ತರ ಕೊಟ್ಟ ಗೃಹ ಸಚಿವರು ಈಗ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಬಿಜೆಪಿಯ ಮುಖಂಡರುಗಳೇ ಬಂಧನವಾಗುತ್ತಿದ್ದಾರೆ. ಇದು ಯಾವ ನಾಲಿಗೆ ಎಂದು ಒಮ್ಮೆ ಸ್ಪಷ್ಟಪಡಿಸಲು ಗೃಹ ಸಚಿವರಿಗೆ ನಿರ್ದೇಶನ ನೀಡಿ. ಎರಡೆರಡು ನಾಲಿಗೆ ಇರುವುದು ಹಾವಿಗೆ, ಈ ಎರಡು ನಾಲಿಗೆ ಇರುವ ‘ಹಾವಿನ ಪುರ' ಯಾವುದು?' ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ರಾಮಯ್ಯನವರದ್ದು ಶೇ.10 ಕಮಿಷನ್ ಸರಕಾರ ಎಂದು ತಲೆಯೂ ಇಲ್ಲದ ಬುಡವೂ ಇಲ್ಲದ ಆರೋಪವೊಂದನ್ನು ಗಾಳಿಯಲ್ಲಿ ತೇಲಿ ಬಿಟ್ಟಿರಿ. ಬಿಜೆಪಿ ಸರಕಾರ ಬಂದರೆ ಭ್ರಷ್ಟ ಸರಕಾರದ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆಂದು ತೌಡು ಕುಟ್ಟಿದ್ದೀರಿ. ರಾಜ್ಯದಲ್ಲಿ ನಿಮ್ಮದೇ ಸರಕಾರ ಬಂದು ಎರಡು ವರ್ಷಗಳೇ ಕಳೆದಿದೆ. ಹಗರಣಗಳು ಬರುತ್ತಿರುವುದು ನಿಮ್ಮ ಮಂತ್ರಿ ಮಹಾಶಯರುಗಳದ್ದೇ ಹೊರತು ಕಾಂಗ್ರೆಸ್ ಸರಕಾರದ್ದಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ನಿಮ್ಮ ಪಾಲೆಷ್ಟಿದೆ ಖಚಿತಪಡಿಸಿ

‘ನೀವೇ ಚುನಾವಣೆಯಲ್ಲಿ ಅಬ್ಬರಿಸಿದ್ದ ‘ನಾ ಖಾನೇ ದೂಂಗಾ, ನಾ ಖಾವೂಂಗಾ' ಹೇಳಿಕೆಯಲ್ಲಿ ಕರ್ನಾಟಕ ಬಿಟ್ಟು ಹೇಳಿದ್ದಾ? ಇನ್ನೊಮ್ಮೆ ಸ್ಪಷ್ಟಪಡಿಸಿಬಿಡಿ. ಇಲ್ಲದಿದ್ದರೆ ಕಮಿಷನ್ ದಂಧೆಯಲ್ಲಿ ನಿಮ್ಮ ಪಾಲೆಷ್ಟಿದೆ ಖಚಿತಪಡಿಸಿ'

-ಬಿ.ಕೆ.ಹರಿಪ್ರಸಾದ್ ಮೇಲ್ಮನೆ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News