ಪ್ರಧಾನಿ ಮೋದಿ ರೈತರ ಸಾಲವನ್ನು ದುಪ್ಪಟ್ಟು ಮಾಡಿ ಅದಾನಿ, ಅಂಬಾನಿ ಆದಾಯ ದ್ವಿಗುಣಗೊಳಿಸಿದ್ದಾರೆ: ಸಿದ್ದರಾಮಯ್ಯ
ಮೈಸೂರು,ಎ.20: 'ರೈತರ ಆದಾಯ ಧ್ವಿಗುಣ ಮಾಡುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ ರೈತರ ಸಾಲವನ್ನು ದುಪ್ಪಟ್ಟು ಮಾಡಿ ಅದಾನಿ, ಅಂಬಾನಿ ಅವರ ಆಧಾಯವನ್ನು ಮಾತ್ರ ದ್ವಿಗುಣ ಮಾಡಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಗುತ್ತಿಗೆದಾರ ಸಂತಗೋಷ್ ಪಾಟೀಲ್ ಆತ್ಮಹತ್ಯೆಗೆ ನೇರ ಕಾರಣರಾದ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಮತ್ತು ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ನಂತರ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದು ಹೇಳಿದರು. ಆದರೆ ಅವರು ರೈತರ ಆಧಾಯ ದ್ವಿಗುಣ ಮಾಡುವುದಿರಲಿ ಅವರ ಮೇಲೆ ದುಪ್ಪಟ್ಟು ಸಾಲವನ್ನು ಹೇರಿದರು. ಆದರೆ ಅವರ ಆಪ್ತ ರಾದ ಅದಾನಿ ಅವರ ಆಸ್ತಿ 50 ಸಾವಿರ ಕೋಟಿ ಇತ್ತು. ಈಗ ಅವರ ಆಸ್ತಿ 7 ಲಕ್ಷ ಕೋಟಿಗೆ ಹೋಗಿದೆ. ಅದೇ ರೀತಿ ಅಂಬಾನಿ ಆಸ್ತಿ ಒಂದು ಲಕ್ಷ ಕೋಟಿ ಇದ್ದದ್ದು 8 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಚ್ಛೇದಿನ್ ಆಯೇಗ ಎಂದು ಹೇಳಿ ಜನರನ್ನು ಸಂಕಷ್ಟಕ್ಕೆ ದೂಡಿದಿದ್ದಾರೆ. ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಹಿಂದೂತ್ವದ ವಿಚಾರವನ್ನು ಮುಂದಿಟ್ಟುಕೊಂಡು ಜನರ ಭಾವನೆಗಳನ್ನು ಕೆರಳಿಸಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದಲ್ಲಿ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ, ರಸಗೊಬ್ಬರದ ಬೆಲೆಯನ್ನು ಪ್ರತಿ 50 ಕೆ.ಜಿ. ಮೂಟೆಗ 15 ರೂ ರಂತೆ ಹೆಚ್ಚಳ ಮಾಡಿದ್ದಾರೆ. ಈಗಾಗಲೇ 1 ಲಕ್ಷ ಟನ್ ರಸಗೊಬ್ಬರ ಮಾರಾಟವಾಗಿದೆ. ಇದರಿಂದ ರೈತರ ಬೇಬಿನಿಂದ 3600 ಕೊಟಿ ರೂ. ಅಷ್ಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸುಲಿಗೆ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಕಾಂಗ್ರೆಸ್ 50 ಲಕ್ಷ ಕೋಟಿ ಸಾಲ ಮಾಡಿದ್ದರೆ, ಪ್ರಧಾನಿ ನರೇಂದ್ರ ಮೋದಿ 8 ವರ್ಷಗಳಲ್ಲಿ ನೂರು ಲಕ್ಷ ಕೋಟಿ ಸಾಲ ಮಾಡಿ ದೇಶದ ಜನರ ಮೇಲೆ ಹೊರೆಯನ್ನು ಹಾಕಿದ್ದಾರೆ. ಕಾರ್ಪೋರೇಟ್ ಕಂಪನಿ ಮೇಲಿದ್ದ ಶೇ.35 ರಷ್ಟು ಟ್ಯಾಕ್ಸ್ ಅನ್ನು ಕಡಿಮೆ ಮಾಡಿ ಶೆ.23 ಕ್ಕೆ ಇಳಿಸಿದ್ದಾರೆ. ಇದರಿಂದ 5 ಲಕ್ಷ ಕೋಟಿ ರೂ. ಆದಾಯ ಕಡಿಮೆಯಾಗಿದೆ. ಇದರ ಬಗ್ಗೆ ಬೇಕಿದ್ದರೆ ಒಂದೇ ವೇದಿಕೆಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಬಹಿರಂಗ ಸವಾಲು ಹಾಕಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಪ್ರತಿ ಗುತ್ತಿಗೆಯಲ್ಲೂ ಶೇ.40 ರಷ್ಟು ಕಮೀಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಕಳೆದ ವರ್ಷವೇ ಪತ್ರ ಬರೆದರೂ ಯಾವುದೇ ಕ್ರಮ ಜರುಗಿಸಲಿಲ್ಲ. ನಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ 40% ಕಮೀಷನ್ ವಿಚಾರ ಬಂದಾಗ ಮೌನವಹಿಸಿರುವುದು ಏಕೆ? ಇದನ್ನೆಲ್ಲಾ ನೋಡಿದರೆ ಭ್ರಷ್ಟಾರಕ್ಕೆ ಇವರ ಬೆಂಬಲ ಇದೆ ಎನಿಸುತ್ತಿದೆ. ಭ್ರಷ್ಟಾಚಾರಕ್ಕೆ ಶಿಫಾರಸ್ಸು ಮಾಡುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಎಂದು ಗುಡುಗಿದರು.
ಪ್ರಧಾನಿ ನರೇಂದ್ರ ಮೊದಿ ಅವರು ಅಧಿಕಾರಕ್ಕೆ ಬಂದಾಗ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದರು. ಹಾಗಾಗಿ ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಅಧಿಕಾರಕ್ಕೆ ಬಂದು ಎಂಟು ವರ್ಷಗಳಾಯಿತು 16 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ಇದೂವರೆಗೂ ಒಂದೇ ಒಂದು ಉದ್ಯೋಗವನ್ನು ಸೃಷ್ಟಿ ಮಾಡಲಿಲ್ಲ. ಯುವಕರು ಉದ್ಯೋಗ ನೀಡಿ ಎಂದರೆ ಪಕೋಡ ಮಾರಿ ಬೋಂಡಾ ಮಾರಿ ಎಂದರು. ಇವರ ಮೇಲೆ ವಿಶ್ವಾಸ ಇಟ್ಟು ಓಟನ್ನು ಹಾಕಿದ ಯುವಕರ ಮೇಲೆ ಚಪ್ಪಡಿ ಎಳೆದರು ಎಂದು ಕಿಡಿಕಾರಿದರು.
ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮುನ್ನ ಅಚ್ಚೇ ದಿನ್ ಆಯೇಗ ಅಂದಿದ್ರು. ಇವತ್ತು ಅಚ್ಚೇ ದಿನ್ ಬಂತಾ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಗಳೆಲ್ಲಾ ಏರಿಕೆ ಆಗಿದೆ. ಮಿಸ್ಟರ್ ನರೇಂದ್ರ ಮೋದಿಜಿ ಕಹಾಯೇ ಅಚ್ಚೇ ದಿನ್.ಹೇಳಿ, ಜನರಿಗೆ ಉತ್ತರ ಕೊಡಿ. ಗೊಬ್ಬರದ ಬೆಲೆ ಏರಿಕೆ ಆಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆದಾಯ ಹೆಚ್ಚಿಸುತ್ತೇವೆ ಅಂತ ಸುಳ್ಳು ಹೇಳಿದ್ದೀರಿ ಎಂದು ಸಿದ್ಧರಾಮಯ್ಯ ತರಾಟೆ ತೆಗೆದುಕೊಂಡರು.
ಕರಪ್ಷನ್ ಆಫ್ ಇಂಡಿಯಾದ ಸರ್ವೆ ಪ್ರಕಾರ ಕರ್ನಾಟಕ ದೇಶದಲ್ಲಿ ಭ್ರಷ್ಟಾಚಾರದಲ್ಲಿ ಮುಂದಿದೆ. ಇಂತಹ ಆಡಳಿತ ನಡೆಸುವ ಪಕ್ಷ ನಮಗೆ ಬೇಕೆ ಎಂದು ಜನ ತೀರ್ಮಾನಿಸಬೇಕು? ಬಿಜೆಪಿ ಪಕ್ಷದ ಆಸ್ತಿ 4 ಸಾವಿರ ಕೋಟಿ ಇದೆ ಎಂದು ಅದೇ ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷದ ಆಸಿ 75 ವರ್ಷಗಳ 558 ಕೋಟಿ. ಹಾಗಿದ್ದರೆ ಯಾರು ಭ್ರಷ್ಟರು ಎಂದು ಸಿದ್ದರಾಮಯ್ಯ ಕೇಳಿದರು.
ನಂತರ ದೇವರಾಜ ಅರಸು ರಸ್ತೆ ಮೂಲಕ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಸಿದರು.
ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಾಜಿ ಸಚಿವರುಗಳಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯದರ್ಶಿ ಚಂದ್ರಮೌಳಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಶಾಸಕರುಗಳಾದ ತನ್ವೀರ್ ಸೇಠ್, ಎಚ್.ಪಿ.ಮಂಜುನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರುಗಳಾದ ಎಂಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ವಾಸು, ಮಳವಳ್ಳಿ ಪಿ.ನರೇಂದ್ರಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಣೆ ಡಾ.ಪುಷ್ಪಾ ಅಮರ್ ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಉಪಮೇಯರ್ ಅನ್ವರ ಬೇಗ್, ಕಾಂಗ್ರೆಸ್ ಮುಖಂಡರುಗಳಾದ ಶಿವಣ್ಣ, ಮಂಜುಳ ಮಾನಸ, ಡಿ.ರವಿಶಂಕರ್, ಆಕ್ಬರ್ ಅಲೀಂ, ಕೆ.ಎಸ್ .ಶಿವರಾಮ್, ಈಶ್ವರ್ ಚಕ್ಕಡಿ, ಎನ್.ಭಾಸ್ಕರ್, ಹೆಡತಲೆ ಮಂಜುನಾಥ್, ನರೇಂದ್ರ, ಆರಿಫ್ ಹುಸೇನ್, ಕೆ.ಮರೀಗೌಡ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.