ಪಂಚಮಸಾಲಿ 2ಎ ಮೀಸಲಾತಿ; ಆಯೋಗದ ವರದಿ ಬಂದ ಮೇಲೆ ಚಿಂತನೆ: ಸಿಎಂ ಬೊಮ್ಮಾಯಿ
ದಾವಣಗೆರೆ ಏ.23: ಜಾಗತೀಕರಣ, ಉದಾರೀಕರಣ, ಖಾಸಗಿಕರಣದ ಜೊತಗೆ ಮನಸ್ಸಿನಲ್ಲಿ ಅಂತಃಕರಣ ಸ್ಥಾಪಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಹರಿಹರದ ಹರಕ್ಷೇತ್ರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ದಿನಗಳಲ್ಲಿ ಸಾಮಾಜಿಕವಾಗಿ ಎಲ್ಲಾ ಚಟುವಟಿಕೆಗಳನ್ನು ವ್ಯವಹಾರದ ದೃಷ್ಠಿಯಿಂದಲೇ ಮಾರುಕಟ್ಟೆ ತೀರ್ಮಾನ ಮಾಡುತ್ತಿವೆ. ಸಮಾಜಕ್ಕೆ ಸಂಸ್ಕಾರ ಸಂಸ್ಕೃತಿ ಶಿಕ್ಷಣ ಉದ್ಯೋಗ ಸ್ವಾವಲಂಬನೆಯ ಅಗತ್ಯವಿದೆ. ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸಿದರೆ ಉತ್ತಮ ವಾತಾವರಣ ನಿರ್ಮಾಣ ಸಾಧ್ಯ. ಮಕ್ಕಳಿಗೆ ಏನು ಮಾಡಬಾರದು ಎನ್ನುವುದನ್ನು ಹೇಳುತ್ತೇವೆ, ಆದರೆ ಏನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತಿಲ್ಲ ಎಂದರು.
ಎಲ್ಲರೂ ಒಗ್ಗೂಡಿ ನಡೆದಾಗ ಸಮಾಜ ಅಭಿವೃದ್ದಿ ಸಾಧ್ಯ, ಮನುಷ್ಯ ಇತಿಹಾಸ ಭಾಗವಾಗಬೇಕು ಇಲ್ಲವೆಂದರೆ ಇತಿಹಾಸ ನಿರ್ಮಿಸುವಂತಹ ಮಹತ್ಕಾರ್ಯಗಳನ್ನು ಮಾಡಬೇಕು. ನಾಡಿನ ನೆಲ ಜಲ ಭಾಷೆ ವಿಚಾರ ಬಂದಾಗ ಪಕ್ಷಾತೀತವಾಗಿ ಒಂದಾಗಿ ನಡೆಯುತ್ತೇವೆ. ಪಂಚಮಸಾಲಿ ಸಮುದಾಯವು ಸ್ವಾತಂತ್ರ್ಯ ಹೋರಾಟಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಬೆಳವಾಡಿ ಮಲ್ಲಮ್ಮ, ಕೆಳದಿ ಚನ್ನಮ್ಮತಂತಹ ಮಹನೀಯರನ್ನು ನೀಡಿದ್ದು, ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಲು ಈಗಾಗಲೇ ಸಮಿತಿ ರಚಿಸಲಾಗಿದೆ ಸಮಿತಿಯ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉನ್ನತ ಶಿಕ್ಷಣ, ಐಟಿಬಿಟಿ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಮಾತನಾಡಿ, 21ನೇಯ ಶತಮಾನ ಜ್ಞಾನದ ಶತಮಾನ, ಜ್ಞಾನದ ಆಧಾರದ ಮೇಲೆ ದೇಶ ಅಭಿವೃದ್ಧಿ ಹೊಂದುತ್ತದೆ. ಗುಣಮಟ್ಟದ ಶಿಕ್ಷಣ ಪಡೆದರೆ ಪ್ರಗತಿಯ ದೇಶ ನಿರ್ಮಿಸಲು ಸಾಧ್ಯ. ರಾಜ್ಯದಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ಐಐಟಿ ಮಾದರಿಯಲ್ಲಿ ಏಳು ಇಂಜಿನಿಯರಿಂಗ್ ಕಾಲೇಜು ಅಭಿವೃದ್ಧಿ ಮಾಡಲಾಗುತ್ತಿದೆ. 2.5 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ನೀಡಲಾಗುತ್ತಿದೆ, ಕರ್ನಾಟಕದ ಪ್ರತಿ ಯುವಕರಿಗೂ ಉದ್ಯೋಗ ನೀಡುವ ಮೂಲ ಉದ್ದೇಶ ಸರ್ಕಾರಕ್ಕಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೂ ವಿಶ್ವವಿದ್ಯಾನಿಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ, ಹಾಗಾಗಿ ಹೊಸದಾಗಿ ಐದು ವಿಶ್ವವಿದ್ಯಾನಿಲಯ ಪ್ರಾರಂಭ ಮಾಡಲಾಗುತ್ತಿದೆ ಎಂದರು.
ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಸಂಸದ ಡಾ. ಜಿ.ಎಂ ಸಿದ್ದೇಶ್ವರ, ಬಳ್ಳಾರಿಯ ಸಂಸದ ವೈ.ದೇವೇಂದ್ರಪ್ಪ, ಸಕ್ಕರೆ ಮತ್ತು ಜವಳಿ ಖಾತೆ ಸಚಿವರಾದ ಶಂಕರ್ ಪಾಟೀಲ್ ಮುನಿಕೊಪ್ಪ, ವಾರಣಾಸಿ ಪದ್ಮಶ್ರೀ ಪುರಸ್ಕøತ 126 ವರ್ಷದ ಮಹಾಯೋಗಿ ಶ್ರೀ ಸ್ವಾಮಿ ಶಿವಾನಂದರು, ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್, ಜಗಳೂರು ಶಾಸಕ ಎಸ್.ವಿ ರಾಮಚಂದ್ರ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹರಿಹರದ ಅಧ್ಯಕ್ಷ ಡಾ. ಬಸವರಾಜ ದಿಂಡೂರ, ಹರಿಹರ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.