ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
Update: 2022-04-23 18:16 GMT
ಮೈಸೂರು,ಎ.23: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಗೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.
ಮೃತಳನ್ನು ಹೆಚ್.ಡಿ.ಕೋಟೆ ಪಟ್ಟಣದ ಹನುಮಂತನಗರದ ನಿವಾಸಿ ರಾಮ ಎಂಬವರ ಮಗಳು ಅನು(18)ಎಂದು ಹೇಳಲಾಗಿದೆ.
ಈಕೆ ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕಲಿಕೆಯಲ್ಲೂ ಮುಂದಿದ್ದಳು. ಎಂದಿನಂತೆ ಅವಳ ತಂದೆ ರಾಮ ನಾಳೆ ಪರೀಕ್ಷೆ ಇದೆ ಓದಿಕೋ ಎಂದಿದ್ದು, ಓದಿಕೊಳ್ಳಲು ತನ್ನ ಕೋಣೆಗೆ ತೆರಳಿದ ಅನು ಗುರುವಾರ ನೇಣಿಗೆ ಶರಣಾಗಿದ್ಧಾಳೆ. ಆಕೆಯ ಪೋಷಕರು ಆಕೆಯನ್ನು ರಕ್ಷಿಸಲು ಯತ್ನಿಸಿದರಾದರೂ ಆಕೆ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.