×
Ad

ಹುಬ್ಬಳ್ಳಿ ಪ್ರಕರಣವನ್ನು ಸಾಮಾನ್ಯವೆಂದು ಪರಿಗಣಿಸಿಲ್ಲ, ಗಲಭೆಕೋರರ ವಿರುದ್ಧ ಕಠಿಣ ಕ್ರಮ: ಸಿಎಂ ಬೊಮ್ಮಾಯಿ

Update: 2022-04-24 18:35 IST

ಹುಬ್ಬಳ್ಳಿ, ಎ. 24: ‘ಹುಬ್ಬಳ್ಳಿ ಸಂಘರ್ಷ ಪ್ರಕರಣವನ್ನು ಸಾಮಾನ್ಯ ಗಲಭೆ ಎಂದು ಪರಿಗಣಿಸಿಲ್ಲ. ಷಡ್ಯಂತ್ರ ಮಾಡಿ ಪೊಲೀಸ್ ಠಾಣೆಯ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲವೇ ದಿನಗಳಲ್ಲಿ ಇದರ ಹಿಂದಿರುವ ಸಂಘಟನೆ, ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರಕರಣದಲ್ಲಿ ಬೇರೆ ಬೇರೆ ಶಕ್ತಿಗಳ ಹುನ್ನಾರ, ಕುಮ್ಮಕ್ಕು ಏನಿದೆ ಎಂದು ತನಿಖೆಯಾಗುತ್ತಿದೆ. ಈಗಾಗಲೇ ಬಂಧಿಸಿರುವವರಿಂದ ಹೇಳಿಕೆಗಳನ್ನು ಪೊಲೀಸರು ಪಡೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು' ಎಂದರು

ಪೂರ್ಣಪ್ರಮಾಣದ ತನಿಖೆ: ಶಾಲೆಗಳಿಗೆ ಬಂದಿರುವ ಇ-ಮೇಲ್ ಪಾಕಿಸ್ತಾನದಿಂದ ಬಂದಿರುವ ಮಾಹಿತಿ ಇದೆ. ಕಿಡಿಗೇಡಿಗಳು ಇಲ್ಲೇ ಕುಳಿತು ದುಬೈ, ಸೌದಿ ಅರೇಬಿಯಾ, ವಿಳಾಸ ಬಳಸುವ ಪ್ರಸಂಗಗಳೂ ಇವೆ. ಪೂರ್ಣ ಪ್ರಮಾಣದಲ್ಲಿ ತನಿಖೆ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಇ-ಮೇಲ್ ಎಲ್ಲಿಂದ ಬಂದಿದೆ ಎಂದು ಪತ್ತೆ ಹಚ್ಚಿ, ಕೇಂದ್ರ ಸರಕಾರದ ಸಹಾಯದಿಂದ, ಯಾವ ರಾಷ್ಟ್ರದಲ್ಲಿ, ಯಾರು ಇದನ್ನು ಮಾಡಿದ್ದಾರೆ, ಅವರನ್ನು ಬಂಧಿಸುವ ಬಗ್ಗೆ ಆ ದೇಶದ ಸಹಾಯ ಪಡೆಯಲಾಗುವುದು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದರ ಬುಡಕ್ಕೆ ಹೋಗಿ ಪತ್ತೆ ಹಚ್ಚಲಾಗುವುದು' ಎಂದು ತಿಳಿಸಿದರು.

‘ಪಿಎಸ್ಸೈ ನೇಮಕಾತಿ' ಸಮಗ್ರ ತನಿಖೆ: ‘ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ವೀಡಿಯೋ ವೈರಲ್ ಆಗಿದ್ದು, ಹತ್ತು-ಹಲವು ಪ್ರಕರಣಗಳು ಹೊರಬೀಳುತ್ತಿವೆ. ಆಡಿಯೋ, ವೀಡಿಯೋ ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ವಿಧಾನಗಳು ಹೊರಬೀಳುತ್ತಿವೆ. ಸಿಐಡಿ ಸಮಗ್ರ ತನಿಖೆ ಮಾಡುವಂತೆ ಸೂಚಿಸಿದೆ. ಯಾರೇ ಇರಲಿ, ಎಷ್ಟೇ ಪ್ರಭಾವಿಗಳು, ಚಾಣಾಕ್ಷರಿರಲಿ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಆದೇಶ ನೀಡಲಾಗಿದೆ. ಪಿಎಸ್ಸೈ ನೇಮಕಾತಿ ನ್ಯಾಯಸಮ್ಮತವಾಗಿ ಆದರೆ ನ್ಯಾಯಸಮ್ಮತ ಪೊಲೀಸ್ ಪಡೆ ನಿರ್ಮಾಣವಾಗುತ್ತದೆ' ಎಂದು ಹೇಳಿದರು.

ಕರ್ನಾಟಕ ಮಾದರಿ: ‘ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣದಲ್ಲಿ ಕೈಗೊಂಡಂತೆ ಹಲವಾರು ಕಾನೂನಿನ ಬಲವೂ ಇದೆ. ಗಲಭೆ ನಡೆಸಿದವ ಸಂಸ್ಥೆ, ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದು ಕರ್ನಾಟಕ ಮಾದರಿ. ಜೊತೆಗೆ ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News