ಆನೆದಂತದಿಂದ ಕೇರಂ ಆಟದ ಪಾನ್ ತಯಾರಿಸಿ ಮಾರಾಟಕ್ಕೆ ಯತ್ನ: ಆರೋಪಿಗಳ ಬಂಧನ
ಚಿಕ್ಕಮಗಳೂರು, ಎ.26: ಆನೆದಂತದಲ್ಲಿ ಕೆತ್ತನೆ ಮಾಡಿದ್ದ ಕೇರಂ ಆಟವಾಡುವ ಪಾನ್ಗಳು ಮತ್ತು ಜಿಂಕೆಯ ಕೊಂಬುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ.
ಸಕಲೇಶಪುರ ರೋಟರಿ ಶಾಲೆಯ ಹತ್ತಿರ ವೆಲ್ಡಿಂಗ್ಶಾಪ್ ಇಟ್ಟುಕೊಂಡಿದ್ದ ಮೆಲ್ವಿನ್ ಎಂಬಾತ ಚಿಕ್ಕಮಗಳೂರು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಆನೆದಂತದಿಂದ ಕೆತ್ತನೆ ಮಾಡಿದ್ದ ಪಾನ್ಗಳು ಮತ್ತು ಜಿಂಕೆಕೊಂಬುಗಳನ್ನು ಹೊಂದಿದ್ದ ಟ್ರೋಫಿಯನ್ನು ಮಾರಾಟಮಾಡಲು ಯತ್ನಿಸುತ್ತಿದ್ದಾಗ ಪೊಲೀಸ್ ಅರಣ್ಯ ಸಂಚಾರಿ ದಳಕ್ಕೆ ಸಿಕ್ಕಿಬಿದ್ದಿದ್ದಾನೆ.
ಪೊಲೀಸ್ ಉಪನಿರೀಕ್ಷಕರ ಎಂ.ಎಲ್.ಶರತ್ ನೇತೃತ್ವದಲ್ಲಿ ಸಿಬ್ಬಂದಿಯಾದ ಎಸ್.ಕೆ.ದಿವಾಕರ, ಕೆ.ಎಸ್.ದಿಲೀಪ್, ಎ.ಜಿ.ಹಾಲೇಶ್, ಹೇಮಾವತಿ,ಚಾಲಕ ತಿಮ್ಮಶೆಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಐಡಿ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶರತ್ಚಂದ್ರ, ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎಂ.ವಿ.ಚಂದ್ರಕಾಂತ್, ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಶ್ರೀನಿವಾಸರೆಡ್ಡಿ ಮಾರ್ಗದರ್ಶನ ನೀಡಿದ್ದರು.