ಪೊಲೀಸರನ್ನೂ ಬಿಜೆಪಿ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2022-04-27 18:37 GMT

ಬೆಂಗಳೂರು, ಎ. 27: ‘ಬಿಜೆಪಿ ಸರಕಾರವು ಪೊಲೀಸರನ್ನು ತಮ್ಮ ಅಣತಿಯಂತೆ ನಡೆಯಬೇಕೆಂದು ಬಯಸುತ್ತಿದೆ. ಪೊಲೀಸರನ್ನು ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಉಡುಪಿಯಲ್ಲಿ ಪೊಲೀಸರ ಸಮವಸ್ತ್ರ ಬದಲು ‘ಕೇಸರಿ' ಬಟ್ಟೆ ತೊಡಿಸಿದ್ದರು. ಸಿಎಂ ನೈತಿಕ ಪೊಲೀಸ್‍ಗಿರಿಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರನ್ನೂ ಅವರ ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಇತ್ತೀಚೆಗೆ ದೇವಾಲಯದ ಹೊರಗೆ ಎಳನೀರು ವ್ಯಾಪಾರ ಮಾಡುವುದನ್ನು ತಡೆದಿದ್ದ ಭಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ದೂರಿದರು.

‘ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಪ್ರಧಾನಿ ಮೋದಿಯವರು ರಾಜ್ಯಗಳ ಬದಲು ದೇಶದ ವಿಚಾರವಾಗಿ ಮಾತನಾಡಬೇಕು. ಪ್ರಧಾನಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಬಕಾರಿ ಸುಂಕ ಕಡಿತಗೊಳಿಸಿ ಮಾದರಿಯಾಗಿ ನಿಂತು ನಂತರ ಬೇರೆ ರಾಜ್ಯಗಳಿಗೆ ಹೇಳಬೇಕು' ಎಂದ ಶಿವಕುಮಾರ್, ‘ಪ್ರತಿ ಬಂಕ್‍ಗಳಲ್ಲೂ ಮೋದಿ ಅವರು ಸಿಲಿಂಡರ್ ನೀಡುವ ಫೋಟೋ ಹಾಕಿರುತ್ತಾರೆ. ಈಗ ಸಿಲಿಂಡರ್‍ಗಳ ಬೆಲೆ ಏನಾಗಿದೆ? ಅವುಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಏನಾಯಿತು? ಅವರು ತಮ್ಮ ಪೋಟೋ ಹಾಕಿಕೊಳ್ಳುವುದಾದರೆ ಅದರ ಪಕ್ಕದಲ್ಲೇ ಗ್ಯಾಸ್ ಬೆಲೆಯನ್ನು ಹಾಕಬೇಕಲ್ಲವೇ?’ ಎಂದು ಪ್ರಶ್ನಿಸಿದರು.

‘ಇಂಧನದ ಮೇಲಿನ ಸುಂಕ ಇಳಿಕೆ ವಿಚಾರವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ನಂತರ ತೀರ್ಮಾನ ಮಾಡುವುದಾಗಿ ಸಿಎಂ ಹೇಳಿದ್ದು, ಈ ವಿಚಾರವನ್ನು ರಾಜ್ಯಮಟ್ಟದಲ್ಲಿ ಮಾತನಾಡುವುದಕ್ಕಿಂತ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನಾಯಕರು ತಮ್ಮ ರಾಜ್ಯಗಳಿಗೆ ಸೂಚನೆ ನೀಡಲಿ’ ಎಂದ ಅವರು, ‘ಕೋವಿಡ್ ವಿಚಾರದಲ್ಲಿ ನಾವು ಎಚ್ಚರಿಕೆ ವಹಿಸಬೇಕು. ಅದರಲ್ಲಿ ಎರಡನೆ ಮಾತಿಲ್ಲ. ಆದರೆ ಅದೇ ಸಮಯದಲ್ಲಿ ಎಲ್ಲ ಜನರ ಬಗ್ಗೆಯೂ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

‘ಇದು ಸರಕಾರದ ಜವಾಬ್ದಾರಿ. ಅದನ್ನು ಅವರು ನಿಭಾಯಿಸಲು, ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕೋವಿಡ್ ಹೆಸರಲ್ಲಿ ತಮ್ಮ ವಿರುದ್ಧ ನಡೆಯುವ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹೆಸರಲ್ಲಿ ನನ್ನ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರ ನಾಯಕರು ನಿಯಮ ಉಲ್ಲಂಘಿಸಿದ್ದರೂ ನಮ್ಮ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ’ ಎಂದ ಅವರು, ‘ಈಗ ಶಾಲೆಗಳಲ್ಲಿ ಯಾವ ರೀತಿ ವ್ಯವಸ್ಥೆಗಳು ಜಾರಿಯಲ್ಲಿವೆಯೋ ಅವುಗಳನ್ನು ಮುಂದುವರಿಯಲು ಬಿಡಬೇಕು. ದೇಶದಲ್ಲಿ ಸಂವಿಧಾನವಿದ್ದು, ಅದರಂತೆ ನಾವು ನಡೆಯಬೇಕು’ ಎಂದು ಉತ್ತರಿಸಿದರು.

ಪದಾಧಿಕಾರಿಗಳ ಆಯ್ಕೆ: ‘ಪಕ್ಷದ ನೂತನ ಪದಾಧಿಕಾರಿಗಳ ಮೊದಲ ಸಭೆ ಇಂದು ನಡೆಸಿದ್ದು, ಪಕ್ಷದ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲು ಕಾರ್ಯಕ್ರಮ ರೂಪಿಸಿದ್ದೇವೆ. ಎಲ್ಲ ಪದಾಧಿಕಾರಿಗಳು ಪಂಚಾಯ್ತಿ ಮಟ್ಟಕ್ಕೆ ಹೋಗಿ, ಪಕ್ಷದ ಸಂಘಟನೆ ಮಾಡುವುದರ ಜತೆಗೆ ಸರಕಾರದ ವೈಫಲ್ಯ, ನಮ್ಮ ಸರಕಾರದ ಸಾಧನೆಯನ್ನು ಜಿಲ್ಲಾವಾರು, ತಾಲೂಕುವಾರು ಜನರಿಗೆ ತಿಳಿಸಲು ಜವಾಬ್ದಾರಿ ಹಂಚಿಕೊಳ್ಳಲಾಗಿದೆ. ನಾವು ಸಮಯವನ್ನು ಮುಡುಪಿಡಬೇಕೆಂದು ಚರ್ಚಿಸಿದ್ದೇವೆ' ಎಂದು ಅವರು ತಿಳಿಸಿದರು.

‘ಪ್ರತಿ ಬೂತ್‍ನಿಂದ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಲು, ಯುವಕರು, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದವರು, ರೈತರು, ಕಾರ್ಮಿಕರ ಪರವಾಗಿ ಪಕ್ಷ ಹೇಗೆ ನಿಲ್ಲಬೇಕು ಎಂಬುದನ್ನು ಚರ್ಚಿಸಿದ್ದು, ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಪ್ರತಿ ಕ್ಷೇತ್ರದಲ್ಲಿ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಲು, ಜನ ಏನನ್ನು ಬಯಸುತ್ತಿದ್ದಾರೆಂಬ ಅಭಿಪ್ರಾಯ ಸಂಗ್ರಹ ಮಾಡಲು ಕಾರ್ಯಕ್ರಮ ರೂಪಿಸಿದ್ದೇವೆ’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News