ಸಿಐಡಿ ನೋಟಿಸಿಗೆ ಲಿಖಿತ ಉತ್ತರ ನೀಡಿದ ಶಾಸಕ ಪ್ರಿಯಾಂಕ್ ಖರ್ಗೆ

Update: 2022-04-28 16:23 GMT
ಪ್ರಿಯಾಂಕ್ ಖರ್ಗೆ 

ಕಲಬುರಗಿ: ಪಿಎಸ್ವೈ ನೇಮಕಾತಿಯನಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರ ಹಾಗೂ ಅಕ್ರಮದ ಕುರಿತಂತೆ ತನಿಖೆಗೆ ಆಗ್ರಹಿಸಿ ಶಾಸಕ  ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವುದಕ್ಕೆ ಸಿಐಡಿ ಪೊಲೀಸರು ನೀಡಿದ್ದ ನೋಟಿಸ್ ಗೆ ಶಾಸಕ ಲಿಖಿತ ಉತ್ತರ ನೀಡಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ ಲಿಖಿತ ಉತ್ತರ ಇಲ್ಲಿದೆ:

1) ನೀವಿಗ ತನಿಖೆ‌ ನಡೆಸುತ್ತಿರುವ ಕೇಸಿನ ಕೇಂದ್ರಬಿಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದ ಚುನಾಯಿತ ಜನಪ್ರತಿನಿಧಿಯಾಗಿದ್ದೇನೆ.

2)ನೀವು ನನಗೆ ನೋಟಿಸು ನೀಡಿ‌ ನನ್ನಿಂದ ಬಯಸಿರುವ ದಾಖಲೆಗಳು ಸಾರ್ವಜನಿಕ ವಲಯದಲ್ಲಿರುವ ದಾಖಲೆಗಳಾಗಿವೆ. ಹಾಗಾಗಿ ತನಿಖಾಧಿಕಾರಿಗಳು ಮೊದಲು ಸಾರ್ವಜನಿಕ ವಲಯದ ಯಾರಿಂದಲಾದರೂ ಮಾಹಿತಿ ಪಡೆದುಕೊಳ್ಳಬೇಕು.

3)ನೀವು ಕಲಂ 91 ಹಾಗೂ 160. ರ ಅಡಿಯಲ್ಲಿ ನೀಡಿರುವ ನೋಟಿಸು, ಸಂವಿಧಾನದ ಅಡಿಯಲ್ಲಿ ಕೊಡಮಾಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.

4) ಕಲಂ 91 ರ ಪ್ರಕಾರ‌ ಯಾವ ದಾಖಲೆಗಳನ್ನು ನೀವು ನನ್ನಿಂದ ಬಯಸಿದ್ದೀರಿ ಎನ್ನುದನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು ಹಾಗೂ ಆ ದಾಖಲೆ ತನಿಖೆಗೆ ಎಷ್ಟು ಸಹಕಾರಿಯಾಗುತ್ತದೆ ಮತ್ತು ಆ ದಾಖಲೆಗಳು  ನೀವು‌ ನೋಟಿಸು ನೀಡುವ ವ್ಯಕ್ತಿಯ ಸುಪರ್ದಿಯಲ್ಲಿವೆಯಾ ಎಂದು ನೀವು‌ ನಂಬಬಹುದಾದ ಕಾರಣಗಳಿರಬೇಕು. ಆದರೆ, ಅವು ಯಾವು ಇಲ್ಲಿ ಕಂಡುಬರುತ್ತಿಲ್ಲ.

5) ಈ‌ ಪ್ರಸ್ತುತ ಕೇಸಿಗೆ ಸಂಬಂಧಿಸಿದಂತೆ ನೀವು‌ ನೀಡಿರುವ ನೋಟೀಸು ಅಸ್ಪಷ್ಟ ಹಾಗೂ ಆಧಾರರಹಿತವಾಗಿದೆ ಜೊತೆಗೆ ಸಿಆರ್ ಪಿಸಿ ಕಲಂ‌91 ಪ್ರಕಾರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ.

6) ನೋಟಿಸು ನೀಡಿರುವುದನ್ನು ಗಮನಿಸಿದರೆ ನೀವು ನಿಮ್ಮ ರಾಜಕೀಯ ನಾಯಕರನ್ನು ಸಂತೃಪ್ತಿಪಡಿಸಲು ನೀಡಿರುವಂತೆ ಕಾಣುತ್ತದೆಯೇ ಹೊರತು ಯಾವುದೇ ನಿಷ್ಪಕ್ಷಪಾತ ಹಾಗೂ ನ್ಯಾಯೋಚಿತ ತನಿಖೆ ಮಾಡಲು ನೀಡಿರುವಂತೆ ಕಂಡುಬರುತ್ತಿಲ್ಲ. ಜೊತೆಗೆ ನನ್ನ ರಾಜಕೀಯ‌ ಎದುರಾಳಿಗಳಾದ ನಿಮ್ಮ ರಾಜಕೀಯ ನಾಯಕರ ಮೆಚ್ಚಿಸಲು ನೀಡಿರುವಂತೆ ಕಂಡುಬರುತ್ತಿದೆ. ನಿಮ್ಮ ಈ‌ ಪ್ರಯತ್ನ ಕಾನೂನುಬಾಹಿರ ಮಾತ್ರವಲ್ಲದೇ ನ್ಯಾಯನಿರ್ವಹಣೆ ವ್ಯಾಪ್ತಿಗೆ ಒಳಪಡುವುದಿಲ್ಲ.

7) ಇನ್ನೂ ಕಲಂ 160 ರ ಪ್ರಕಾರ ಸಾಕ್ಷಿದಾರರಿಗೆ ತಮ್ಮ ಬಳಿ‌ ಇರುವ ದಾಖಲೆಗಳನ್ನು ಒದಗಿಸುವಂತೆ ಕೇಸಿನ ಸಂಪೂರ್ಣ ಮಾಹಿತಿ‌ ಇರುವವರಿಗೆ ಕರೆಯಬಹುದು. ಆದರೆ, ಈ ಕೇಸಿನಲ್ಲಿ ನಾನು ಸಾಕ್ಷಿದಾರ ಎಂದು ನೀವು ನಂಬಲು ಬಲವಾದ ಮಾಹಿತಿಗಳಿರಬೇಕು. ಆದರೆ, ದಿನಾಂಕ 23-04-2022 ರಂದು ನಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಹೇಳಿಕೆಗಳ ಅಧರಿಸಿ‌ ನೀವು ನನಗೆ ನೋಟಿಸು ನೀಡಿರುವುದಾಗಿ ಹೇಳಿದ್ದೀರಿ. ಆದರೆ‌, ನೀವು ಈಗ ಕೈಗೊಂಡಿರುವ ಹಗರಣದ ತ‌ನಿಖೆ ಸಾರ್ವಜನಿಕ ವಲಯಕ್ಕೆ ಹೊಸದಲ್ಲ.

8) ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಮಟ್ಟದ ಅವ್ಯವಹಾರ ನಡೆದಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ ಇದರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಿಂದ ಸಮಗ್ರ ತನಿಖೆ‌ ನಡೆಸುವಂತೆ ಸಚಿವರಾದ ಪ್ರಭು ಚವ್ಹಾಣ್ ದಿನಾಂಕ 03-02-2022. ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಜೊತೆಗೆ ಬಿಜೆಪಿಯ ಎಂ ಎಲ್ ಸಿ‌ ಒಬ್ಬರು ಈ‌ ಹಗರಣದ ಕುರಿತು ತನಿಖೆ‌ ನಡೆಸುವಂತೆ ದಿನಾಂಕ 15-03-2022.  ರಂದು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ‌ ಇಬ್ಬರು ಜವಾಬ್ದಾರಿಯುತ ಸದಸ್ಯರು ಎರಡು ತಿಂಗಳ ಹಿಂದೆ ಸರ್ಕಾರಕ್ಕೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಪಿಎಸ್ ಐ ನೇಮಕಾತಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು ತನಿಖೆ ಕೈಗೊಳ್ಳುವಂತೆ ಕೋರಿದ್ದರೂ ಕೂಡಾ ತನಿಖಾಧಿಕಾರಿಗಳು ಇವರುಗಳಿಗೆ ನೋಟೀಸು ನೀಡಿಲ್ಲ‌ ಇದು ನನಗೆ ಅಚ್ಚರಿ ತಂದಿದೆ.

9) ನೀವು ನೀಡಿರುವ ನೋಟಿಸು ದುರುದ್ದೇಶಪೂರಿತವಾಗಿರುವುದರ ಜೊತೆಗೆ ಉನ್ನತಮಟ್ಟದ ತನಿಖಾ ತಂಡ ಕಾನೂನಿನ‌ ಬಗ್ಗೆ ತಿಳುವಳಿಕೆ ಕೊರತೆ ಹಾಗೂ ತೀಕ್ಷಣತೆ ಕೊರತೆ ಎದುರಿಸುತ್ತಿದೆ ಎಂದು ತಿಳಿದುಬರುತ್ತದೆ. ಹಗರಣದ ಸಮಗ್ರ ತನಿಖೆ‌ಮಾಡುವ ಬದಲು ನನಗೆ ನೋಟಿಸು ನೀಡುವ ಮೂಲಕ ಸಂವಿಧಾನಬದ್ದವಾಗಿ ನನಗೆ ನೀಡಿದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನದಂತೆ ತೋರುತ್ತಿದೆ.

10) ಒಬ್ಬ ಜವಾಬ್ದಾರಿ ಯುತ ಜನಪ್ರತಿನಿಧಿಯಾಗಿ ಹಾಗೂ ವಿರೋಧಪಕ್ಷದ‌ ಶಾಸಕನಾಗಿ ಕಾರ್ಯಾಂಗ ಹಾಗೂ ಶಾಸಕಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಹಾಗೂ ಹಗರಣದ ವಿರುದ್ದ ಧ್ವನಿ ಎತ್ತಬೇಕಾಗಿರುವುದು ನನ್ನ ಕರ್ತವ್ಯವಾಗಿದೆ ಹಾಗೂ ಇದು ನನ್ನ ಮೇಲಿನ ಬಹುದೊಡ್ಡ ಜವಾಬ್ದಾರಿ ಎಂದೇ ಭಾವಿಸಿ ಸಾರ್ವಜನಿಕ ವಲಯದ ವಿವರಗಳನ್ನೇ ಹೊರಗೆಳೆದಿದ್ದೇನೆ. ಕಳೆದ‌ ಒಂದು ತಿಂಗಳಿನಿಂದ ಮುದ್ರಣ ಮಾಧ್ಯಮ ಹಾಗೂ ಟಿವಿ ಮಾಧ್ಯಮಗಳು ನಿರಂತರವಾಗಿ ಸುದ್ದಿ ಬಿತ್ತರಿಸುತ್ತಿದ್ದರು ಸರ್ಕಾರವಾಗಲೀ ಅಥವಾ ಸಿಐಡಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ನಾನು ಸೇರಿದಂತೆ ವಿರೋಧ ಪಕ್ಷದ ನಾಯಕರು ಈ ಹಗರಣದ ಕುರಿತಂತೆ ಧ್ವನಿ ಎತ್ತಿದ ನಂತರ ತನಿಖೆ ನಡೆಯುತ್ತಿದೆ.

11) ಹಗರಣದ ಸಮಗ್ರ ತನಿಖೆ‌ ನಡೆಸಿ‌ ನಿಜವಾದ ತಪ್ಪಿತಸ್ಥರನ್ನು ಕಾನೂನು ವ್ಯಾಪ್ತಿಗೆ ತಂದು ಶಿಕ್ಷಿಸಬೇಕು. ಆದರೆ, ನಿಜವಾದ ತಪ್ಪಿತಸ್ಥರು ಹೊರಗಡೆ ಇದ್ದು ಇದು ನನ್ನ ಅಸಂತೃಪ್ತಿಗೆ‌ ಕಾರಣವಾಗಿದೆ. ಈ ಹಂತದಲ್ಲಿ ನಮಗೆ ನೋಟಿಸು ನೀಡುವ ಮೂಲಕ ತನಿಖಾ‌ತಂಡ ಜನರ ಚಿತ್ತವನ್ನು ಬೇರೆಕಡೆ ವರ್ಗಾಯಿಸಿ ವಿರೋಧ ಪಕ್ಷಗಳ ಹಾಗೂ ನಾಯಕರುಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಪ್ರಯತ್ನ ನಡೆಸುತ್ತಿರುವಂತೆ ಕಂಡುಬರುತ್ತಿದೆ.

12) ತನಿಖೆ ಸರಿಯಾದ ದಿಕ್ಕನಲ್ಲಿ ನಡೆಯಬೇಕಾದರೆ ಹಗರಣದ‌ ಸಾಕ್ಷ್ಯಗಳನ್ನು‌ ಜೋಪಾನವಾಗಿಡುವುದರ ಜೊತೆಗೆ ಆರೋಪಿಗಳನ್ನು ಬಂಧಿಸಬೇಕು. ಆದರೆ, ಇದುವರೆಗಿನ‌ ತನಿಖೆಯ ಬಗ್ಗೆ ಸಾರ್ವಜನಿಕರಿಗೆ ಹಾಗೂ ಜವಾಬ್ದಾರಿಯುತ ರಾಜಕಾರಣಿಗಳಿಗೆ ತನಿಖೆಯ ಪ್ರಗತಿಯ ಕುರಿತಂತೆ ಯಾವುದೇ ಮಾಹಿತಿ ನೀಡದೆ  ಕತ್ತಲಲ್ಲಿ‌ಇಡಲಾಗಿದೆ. ಜೊತೆಗೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳ ಬಂಧನವಾಗಿಲ್ಲ ಆದರೆ ಈ ತನಿಖಾ ತಂಡದ ಎಲ್ಲ ಪ್ರಯತ್ನಗಳು ರಾಜಕೀಯ ಎದುರಾಳಿಗಳ ಗುರಿಯಾಗಿಸಲು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕಂಡುಬರುತ್ತಿದೆ.

13) ಸಿಐಡಿ ಪೊಲೀಸರ ಬಗ್ಗೆ ನನಗೆ ಅತ್ಯಂತ ಹೆಚ್ಚಿನ ಗೌರವವಿದ್ದು, ಅವರು ಈ ಹಗರಣದ ಪ್ರಮುಖ ಸಾಕ್ಷ್ಯಳನ್ನ ಸಂಗ್ರಹಿಸಿ ಅವುಗಳನ್ನು ರಕ್ಷಿಸಿ ತಪ್ಪಿತಸ್ಥರನ್ನು ಕಾನೂನು ವ್ಯಾಪ್ತಿಗೆ ಒಳಪಡಿಸುವತ್ತ ಹೆಚ್ಚಿನ‌ ಗಮನಹರಿಸಬೇಕು. ಆದರೆ, ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳದೆ, ಹಾಗೂ ಆಳುವ ರಾಜಕೀಯ ನಾಯಕರ ಏಜೆಂಟರಂತೆ ವರ್ತಿಸದಂತೆ ಸಿಐಡಿ‌ ಪೊಲೀಸರಿಗೆ ಕರೆ‌ನೀಡುತ್ತೇನೆ.

14) ಹಾಗಾಗಿ, ಸಿಐಡಿ ಅಧಿಕಾರಿಗಳಿಗೆ ನಾನು ಕೇಳಿಕೊಳ್ಳುವುದೇನೆಂದರೆ, ಆಧಾರರಹಿತ, ನಿಷ್ಪ್ರಯೋಜಕ ಹಾಗೂ ಸಮರ್ಥನೀಯವಲ್ಲದ ನೋಟಿಸುಗಳನ್ನು ನೀಡುವುದರಿಂದ ದೂರವಿದ್ದು,  ಸಾರ್ವಜನಿಕರಿಗೆ ಅನ್ಯಾಯವೆಸುವ, ಅತ್ತ್ಯುಚ್ಛ ಭ್ರಷ್ಟಾಚಾರ ಹಾಗೂ ಹಗರಣದ ಸಮಗ್ರ ತನಿಖೆಯತ್ತ ಬೆಳಕು ಚೆಲ್ಲಿ, ಇಡೀ ಪ್ರಕರಣದಲ್ಲಿ‌ ಭಾಗಿಯಾಗಿದ್ದಾರೆ ಎನ್ನಲಾದ ತಪ್ಪಿತಸ್ಥರನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News