×
Ad

ಬಿಟ್ ಕಾಯಿನ್ ವಿಚಾರದಲ್ಲಿ ಪ್ರಿಯಾಂಕ್​​ ಖರ್ಗೆ ಸತ್ಯ ಅರಿತು ಮಾತನಾಡಲಿ: ಸಚಿವ ಡಾ.ಸುಧಾಕರ್

Update: 2022-05-02 14:28 IST

ಶಿವಮೊಗ್ಗ, ಮೇ 2: ಬಿಟ್ ಕಾಯಿನ್ ವಿಚಾರದಲ್ಲಿ ಪ್ರಿಯಾಂಕ್​​ ಖರ್ಗೆ ಸತ್ಯವನ್ನು ತಿಳಿದು ಮಾತನಾಡಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಶಿಕಾರಿಪುರದಲ್ಲಿಂದು ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟವಾದ ವರದಿ ನೀಡಿದೆ. ಅಮೆರಿಕದಿಂದಾಗಲಿ ಅಥವಾ ವಿದೇಶದಿಂದಾಗಲಿ ಬಿಟ್ ಕಾಯಿನ್ ಕಳವಾಗಿದೆ ಎಂದು ಯಾವುದೇ ಕಂಪನಿಗಳಿಂದ ದೂರು ಬಂದಿಲ್ಲ. ಪ್ರಕರಣದಲ್ಲಿ ಭಾರತದ ಪಾಲಿದೆ ಎಂಬುದನ್ನೂ ಹೇಳಿಲ್ಲ. ಭಾರತಕ್ಕೆ ವಿಷಯ ವಿನಿಮಯ ಮಾಡುವಂತಹ ಕೆಲಸವೂ ಆಗಿಲ್ಲ. ಅದನ್ನಿಟ್ಟುಕೊಂಡು ಮೂರನೇ ಸಿಎಂ ಎನ್ನುವುದು ಹಾಸ್ಯಾಸ್ಪದ. ಎಲ್ಲದರಲ್ಲೂ ರಾಜಕೀಯ ಲಾಭ ಗಳಿಸಲು, ಇಲ್ಲದಿರುವ ವಿಷಯವನ್ನು ಸೃಷ್ಟಿ ಮಾಡಲು ಪ್ರಯತ್ನಿಸುತ್ತಾರೆ ಎಂದು ದೂರಿದರು.

ಪಿಎಸ್ಸೈ ಪರೀಕ್ಷೆ ಹಗರಣ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಕರಣ ತನಿಖೆ ಹಂತದಲ್ಲಿ ಇದೆ. ಹೀಗಿರುವಾಗ ಎಲ್ಲರೂ ಮಾತನಾಡುವುದು ಸರಿಯಲ್ಲ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಸರಕಾರ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅದಕ್ಕೆ ತಾರ್ಕಿಕ ಅಂತ್ಯವನ್ನು ಸರ್ಕಾರ ಹಾಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News