ಅಶ್ವತ್ಥ್ ನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ: ಡಿ.ಕೆ. ಶಿವಕುಮಾರ್

Update: 2022-05-05 11:48 GMT

ಬೆಂಗಳೂರು, ಮೇ 5: ‘ಪಿಎಸ್ಸೈ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರು ‘ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಇಲ್ಲಿನ ಸದಾಶಿವನಗರ ನಿವಾಸದಲ್ಲಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ‘ಅಶ್ವತ್ಥ ನಾರಾಯಣ ತಾನು ವಿಶ್ವ ಮಾನವ, ಒಕ್ಕಲಿಗ ಎಂದು ಹೇಳಿಕೊಂಡಿದ್ದಾರೆ. ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ಅವರು ರಾಮನಗರವನ್ನು ಕ್ಲೀನ್ ಮಾಡುತ್ತೇವೆಂದಿದ್ದರು, ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ಇಲಾಖೆ ಕುಲಸಚಿವರ ನೇಮಕ ವಿಚಾರವಾಗಿ ಗೊಂದಲ ಸೃಷ್ಟಿಸಿದ್ದರು. ಅವರ ನೇಮಕ ಮಾಡಿದ್ದು ಯಾರು?' ಎಂದು ಖಾರವಾಗಿ ಪ್ರಶ್ನಿಸಿದರು.

‘ಇನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಶಿಕ್ಷಣ ಇಲಾಖೆಯೇ ದೂರು ನೀಡಿದೆ. ಆ ಕುಲಸಚಿವರು ಯಾರ ಮನೆಗೆ, ಎಷ್ಟು ಬಾರಿ ಹೋಗಿದ್ದಾರೆ? ಅವರ ಸಚಿವರ ಒಡನಾಟ ಏನು? ಅವರ ನೇತೃತ್ವ ಇರುವ ಸಂಸ್ಥೆಗಳಲ್ಲಿ ಯಾವ ರೀತಿ ಅಕ್ರಮ ನಡೆಯುತ್ತಿದೆ? ಅಲ್ಲೆಲ್ಲ ವಿಶ್ವದ ನಂಟಿದೆ ಎಂದು ಅವರೇ ಹೇಳುವುದಾದರೆ ಎಲ್ಲ ಅಕ್ರಮಗಳಿಗೂ ಅವರೇ ಪಿತಾಮಹಾ ಅಲ್ಲವೇ? ಎಲ್ಲ ಭ್ರಷ್ಟಾಚಾರಗಳಿಗೆ ವಿಶ್ವಮಾನವ ಅವರೇ ಅಲ್ಲವೇ? ಎನ್‍ಇಪಿ ನಾನೇ ಮೊದಲು ಜಾರಿಗೆ ತರುತ್ತೇನೆ ಎಂದು ಹೆಗಲು ತಟ್ಟಿಕೊಂಡವರು ಈಗೇನು ಮಾಡಿದ್ದಾರೆ?’ ಎಂದು ಶಿವಕುಮಾರ್ ತಿರುಗೇಟು ನೀಡಿದರು.

‘ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಸಿಐಡಿ ಅಧಿಕಾರಿಗಳು ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಬಿಜೆಪಿ ಸರಕಾರದ ವಿರುದ್ಧ ಮಾತನಾಡುವ ವಿಪಕ್ಷ ನಾಯಕರು, ವಕ್ತಾರರಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಈ ನೋಟಿಸ್ ಕೊಡುವ ಮೂಲಕ ಪೊಲೀಸ್ ಅಧಿಕಾರಿಗಳು ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಆದರೆ ಅದೇ ನೋಟಿಸ್‍ನ್ನು ಬಿಜೆಪಿ ನಾಯಕರಿಗೂ ನೀಡಬೇಕಲ್ಲವೇ? ಅವರಿಗೆ ಏಕೆ ಕೊಟ್ಟಿಲ್ಲ?' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

‘ಯತ್ನಾಳ್, ಕೆಪಿಎಸ್ಸಿ ಸದಸ್ಯರು ಹಾಗೂ ಅಧ್ಯಕ್ಷರು ನೇಮಕಕ್ಕೆ ಹಣ ನೀಡಿದ್ದಾರೆಂದೆಲ್ಲಾ ಹೇಳಿದ್ದಾರೆ. ವಿಶ್ವನಾಥ್, ಟೆಂಡರ್ ನೀಡುವ ಮೊದಲು ಕಮಿಷನ್ ಪರ್ಸೆಂಟೇಜ್ ನಿಗದಿಯಾಗಿದೆ ಎಂದು ಹೇಳಿದ್ದಾರೆ. ಬೇರೆ ನಾಯಕರು ಭ್ರಷ್ಟಾಚಾರ ಸಂಬಂಧ ಬೇರೆ, ಬೇರೆ ಹೇಳಿಕೆ ನೀಡಿದ್ದು, ಅವರಿಗೂ ನೋಟಿಸ್ ನೀಡಲಿ. ಯತ್ನಾಳ್ ಹಾಗೂ ವಿಶ್ವನಾಥ್ ಅವರು ಹೇಗೆ ವಿಧಾನಮಂಡಲದ ಗೌರವಾನ್ವಿತ ಸದಸ್ಯರೋ ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರೂ ಸದಸ್ಯರೇ. ಅವರಿಗೆ ನೋಟಿಸ್ ನೀಡದವರು, ಇವರಿಗೆ ಮಾತ್ರ ಏಕೆ ನೀಡುತ್ತಿದ್ದಾರೆ?' ಎಂದು ಶಿವಕುಮಾರ್ ಟೀಕಿಸಿದರು.

‘ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ವಕ್ತಾರರು. ಇಂತಿಂತಹ ವಿಚಾರಗಳನ್ನು ಮಾಧ್ಯಮದ ಮುಂದೆ ಪ್ರಸ್ತಾಪ ಮಾಡಿ ಎಂದು ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಅವರು ಪೊಲೀಸ್ ಅಧಿಕಾರಿಗಳ ನೋಟಿಸ್‍ಗೆ ಗೌರವಯುತವಾಗಿ ಉತ್ತರ ನೀಡಿದ್ದಾರೆ. ಸರಕಾರ ಮೊದಲು ತನ್ನ ಮುಖಕ್ಕೆ ಅಂಟಿರುವ ಕೊಳಕು, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸ್ವಚ್ಛ ಮಾಡಿಕೊಳ್ಳಲಿ. ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಜಾರಿ ಮಾಡಿರುವವರು ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ನೋಟಿಸ್ ನೀಡಬೇಕು. ಸದನದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಈ ನೇಮಕಾತಿ ಅಕ್ರಮ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದು ಐದು ಬಾರಿ ಉತ್ತರಿಸಿದ್ದಾರೆ. ಆದರೂ ಆರೋಪಿಗಳನ್ನು ಬಂಧಿಸಿ, ಜೈಲಿಗೆ ಹಾಕಿ, ಎಫ್‍ಐಆರ್ ದಾಖಲಿಸಲಾಗುತ್ತಿದೆ? ಹಾಗಾದರೆ ಗೃಹ ಸಚಿವರು ಹೇಳಿದ್ದು ಸುಳ್ಳಲ್ಲವೇ?' ಎಂದು ಅವರು ಕೇಳಿದರು.

‘ಇಲ್ಲಿಯವರೆಗೂ ತನಿಖಾಧಿಕಾರಿಗಳು, ಯಾರಿಗೆಲ್ಲ ನೋಟಿಸ್ ನೀಡಿದ್ದಾರೆ. ಯಾರು ಏನು ಉತ್ತರ ಕೊಟ್ಟಿದ್ದಾರೆ. ಯಾರನ್ನು ಬಿಟ್ಟು ಕಳುಹಿಸಿದ್ದಾರೆ, ಯಾವ ಪರೀಕ್ಷಾ ಕೇಂದ್ರದವರನ್ನು ಹಿಡಿದಿದ್ದೀರಿ. ಮಲ್ಲೇಶ್ವರಂನಲ್ಲಿ ಎಫ್‍ಐಆರ್ ಆಗಿದೆ. ಉನ್ನತ ಶಿಕ್ಷಣ ಇಲಾಖೆ, ಪಿಡ್ಲ್ಯೂಡಿ, ಎಫ್‍ಡಿಎ ನೇಮಕಾತಿ ಅಕ್ರಮ ಎಲ್ಲವೂ ಬಯಲಾಗಿದೆ. ಈ ಪ್ರಕರಣಗಳಲ್ಲಿ ಯಾರ ವಿಚಾರಣೆ ಮಾಡಿದ್ದೀರಿ ಎಂದು ಇದುವರೆಗೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲ ಮಾಹಿತಿಗಳನ್ನು ಬಹಳ ಗೌಪ್ಯವಾಗಿ ಇಡಲಾಗುತ್ತಿದೆ' ಎಂದು ಟೀಕಿಸಿದರು.

‘ಪ್ರಿಯಾಂಕ್ ಖರ್ಗೆ ಅವರು ಹೇಳಿರುವ ಎಲ್ಲ ದಾಖಲೆಗಳು ಸಾರ್ವಜನಿಕ ವಲಯದಲ್ಲಿದ್ದು, ಅಧಿಕಾರಿಗಳು ಕೇಳಿದ ಎಲ್ಲ ಸಾಕ್ಷ್ಯಗಳನ್ನು ನೀಡಲಾಗಿದೆ. ಈ ಎಲ್ಲ ದಾಖಲೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಈ ವಿಚಾರವಾಗಿ ಯಾಕೆ ನೋಟಿಸ್ ಜಾರಿ ಮಾಡಿಲ್ಲ. ಪ್ರಜಾಪ್ರಭುತ್ವದ ವಕ್ತಾರರಾದ ಮಾಧ್ಯಮಗಳು ಸಾಕಷ್ಟು ವಿಚಾರ ಬಯಲಿಗೆಳೆದಿವೆ. ದಲಿತ ನಾಯಕನ ಮೇಲೆ ದೌರ್ಜನ್ಯ ಮಾಡಿ, ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದೀರಾ? ಪ್ರಿಯಾಂಕ್ ಖರ್ಗೆ ಪಕ್ಷದ ಪ್ರತಿನಿಧಿಯಾಗಿದ್ದು, ಅವರನ್ನು ಯಾವಾಗ ವಿಚಾರಣೆಗೆ ಕಳುಹಿಸಬೇಕು ಎಂದು ನಮಗೆ ಗೊತ್ತಿದೆ. ಆ ಬಗ್ಗೆ ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ’ ಎಂದು ಸ್ಪಷ್ಟಣೆ ನೀಡಿದರು.

ಬಿಜೆಪಿಯವರದೇ ಷಡ್ಯಂತ್ರ

‘ನನ್ನ ವಿರುದ್ಧ ಏಕವಚನದಲ್ಲಾದರೂ ಮಾತನಾಡಲಿ, ಬಹುವಚನದಲ್ಲಾದರೂ ಮಾತನಾಡಲಿ. ಆದರೆ ರಾಜ್ಯದ ಯುವಕರು, ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಕೆಲಸ ಪಡೆಯಲು ಮುಂದಾದವರಿಗೆ ಭ್ರಷ್ಟಾಚಾರದ ವಿಶ್ವಮಾನವನಿಂದ ಅನ್ಯಾಯ ಆಗುತ್ತಿರುವುದಕ್ಕೆ ಬೇಸರವಾಗುತ್ತಿದೆ. ಬಿಜೆಪಿ ನಾಯಕರೆ ಷಡ್ಯಂತ್ರ ಮಾಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರೆ, ನೀವು ಕುಮಾರಸ್ವಾಮಿ ಅವರ ಬಳಿ ಪ್ರಶ್ನೆ ಕೇಳಬೇಕು. ನಾನು ಕುಮಾರಸ್ವಾಮಿ ಅವರಿಗೆ ವಕ್ತಾರನಾಗಲು ಸಾಧ್ಯವಿಲ್ಲ’ 

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News