ಮೂರು ವರ್ಷಗಳೊಳಗಾಗಿ ಅನುಭವ ಮಂಟಪ ಕಾಮಗಾರಿ ಪೂರ್ಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-05-05 15:59 GMT

ಬೆಂಗಳೂರು, ಮೇ 05: ಬಸವಕಲ್ಯಾಣದಲ್ಲಿ 532 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ರಾಜ್ಯ ಸರಕಾರ ಇಂದು ಒಪ್ಪಿಗೆ ನೀಡಿತು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರಕಾರ 532 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿದೆ. ಮೂರು ವರ್ಷಗಳೊಗಳಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. 
ಅನುಭವ ಮಂಟಪ ಬಸವಣ್ಣನವರ ಕ್ರಾಂತಿಕಾರಿ ವೇದಿಕೆ. ಈ ಮಂಟಪದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ. ಅವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನು ಪ್ರತಿಬಿಂಬಿಸುವ ರೂಪದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಅನುಭವ ಮಂಟಪದಲ್ಲಿ 12ನೇ ಶತಮಾನದಲ್ಲಿ ಇದ್ದಂತಹ ವಚನಕಾರರು ದಾರ್ಶನಿಕ ಪುರುಷರ ಕುರಿತಾದ ಮಾಹಿತಿ ನೀಡುವಂತಹ ಕಿರು ಚಿತ್ರಗಳ ಪ್ರದರ್ಶನ, ಬಸವಣ್ಣನವರ ಜೀವನ ಸಾಧನೆ ಬಿಂಬಿಸುವ ಮಾಹಿತಿಗಳನ್ನು ಅನುಭವ ಮಂಟಪಕ್ಕೆ ಆಗಮಿಸುವ ಎಲ್ಲರಿಗೂ ವಿವರಿಸುವ ವ್ಯವಸ್ಥೆ ಈ ಅನುಭವ ಮಂಟಪದಲ್ಲಿ ಇರಲಿದೆ. 

ಕಂದಾಯ ಸಚಿವ ಆರ್.ಅಶೋಕ್, ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ರಘುನಾಥ ರಾವ್ ಮಾಲ್ಕಪುರ್, ಅಮರನಾಥ ಪಾಟೀಲ್, ಶಾಸಕರಾದ ಈಶ್ವರ ಖಂಡ್ರೆ, ಶಶೀಲ್ ನಮೋಶಿ ಮೊದಲಾದವರು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ ಹಾಗೂ ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಬಸವಕಲ್ಯಾಣವೃದ್ಧಿ ಮಂಡಳಿಯ ಆಯುಕ್ತ ಶಿವಕುಮಾರ್ ಶೀಲವಂತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News