ನಾನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಆವಾಝ್ ಹಾಕಿರುವುದು ನಿಜ: ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ
ಮೂಡಿಗೆರೆ, ಮೇ 6: 'ನಾನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಅವಾಜ್ ಹಾಕಿರುವುದು ನಿಜ. ನನ್ನ ಅನುಮತಿ ಇಲ್ಲದೆ ನನ್ನ ಕ್ಷೇತ್ರಕ್ಕೆ ಬಂದಿದ್ದಾನೆ. ಎಂಎಲ್ಎಗಳು ಅಭಿವೃದ್ಧಿ ವಿಚಾರವಾಗಿ ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ. ಈತನಿಗೆ ನೀನು ಬೇಡ ಎಂದು ಹೇಳಿದ್ದೆ. ಆದರೆ ಐಜಿ ಹೇಳಿದರು ಎಂದು ರಾತ್ರಿ ಕದ್ದು ಬಂದು ಚಾರ್ಜ್ ತೆಗೆದುಕೊಂಡಿದ್ದಾನೆ. ಯಾರನ್ನು ಕೇಳಿ ಬಂದೇ ಎಂದು ಪ್ರಶ್ನಿಸಿದಾಗ ಮೊಬೈಲ್ ಸ್ವಿಚ್ಆಫ್ ಮಾಡಿದ್ದ' ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಮಲ್ಲಂದೂರು ಪಿಎಸ್ಸೈಗೆ ನಿಂದಿಸಿರುವ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಈ ಸಂಬಂಧ ಪ್ರಶ್ನಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಜಿ ಹೇಳಿದ್ದಾರೆ, ಅದಕ್ಕೆ ಬಂದು ಚಾರ್ಜ್ ತೆಗೆದುಕೊಂಡಿದ್ದೇನೆಂದು ಪಿಎಸ್ಸೈ ರವೀಶ್ ಹೇಳಿದ್ದಾನೆ. ಐಜಿಗೆ ಎಲ್ಲಾ ಕ್ಷೇತ್ರಗಳ ಮೇಲೂ ಹಕ್ಕಿಲ್ಲ, ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳನ್ನು ಎಂಎಲ್ಎಗಳು ಬೇಕಾದವರನ್ನು ಹಾಕಿಸಿ ಕೊಳ್ಳುವುದು ಸಂಪ್ರಾದಾಯ. ನಾನು ಕರೆ ಮಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿರುವ ರವೀಶ್ ಬಂದ ಹೊಸದರಲ್ಲೇ ಬ್ಲಾಕ್ಮೇಲ್ ತಂತ್ರ ಮಾಡಿದ್ದಾನೆ. ಈ ಬಗ್ಗೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದರು.
ಇದನ್ನೂ ಓದಿ... ಮೂಡಿಗೆರೆ : ಶಾಸಕ ಎಂ.ಪಿ ಕುಮಾರಸ್ವಾಮಿಯಿಂದ ಸಬ್ ಇನ್ಸ್ಪೆಕ್ಟರ್ ರವೀಶ್ ಗೆ ನಿಂದನೆ
ಮಲ್ಲಂದೂರು ಠಾಣೆಗೆ ರವೀಶ್ ಅವರನ್ನು ನಿಯುಕ್ತಿಗೊಳಿಸುವಂತೆ ನಾನು ಶಿಫಾರಸು ಪತ್ರವನ್ನು ನೀಡಿಲ್ಲ. ಯಾರೋ ಮಿಸ್ ಆಗಿ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿರುವ ಯಾವ ಅಧಿಕಾರಿಯನ್ನೂ ಬದಲಾಯಿಸಬಾರದು ಎಂದು ಪತ್ರ ಬರೆದಿದ್ದೇನೆ. ಮೊದಲು ನೀಡಿದ ಶಿಫಾರಸು ಪತ್ರವನ್ನು ಯಾರೋ ಕಳ್ಳತನ ಮಾಡಿ ಬೇರೆ ಪತ್ರ ನೀಡಿದ್ದಾರೆ. ಈ ಬಗ್ಗೆ ಸದನ ಸಮಿತಿಗೆ ಪ್ರಕರಣ ದಾಖಲಿಸುತ್ತೇನೆ. ತನಿಖೆ ಮಾಡಿಸುತ್ತೇನೆ. ಐಜಿಗೆ ಏಕೆ ಅಷ್ಟು ಹಠವೋ ಗೊತ್ತಿಲ್ಲ, ಈ ವಿಚಾರದಲ್ಲಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಆತ ನನ್ನ ಕ್ಷೇತ್ರಕ್ಕೆ ಬೇಡವೇ ಬೇಡ ಎಂದು ಶಾಸಕು ಕುಮಾರಸ್ವಾಮಿ ಹೇಳಿದರು.