×
Ad

ನಾನು ಸಿಎಂ ಆಗಿದ್ದಾಗ ಭಷ್ಟರು ಉದ್ಯೋಗಸೌಧದ ಮೆಟ್ಟಿಲು ಹತ್ತಲು ಬಿಟ್ಟಿರಲಿಲ್ಲ: ಕುಮಾರಸ್ವಾಮಿ

Update: 2022-05-08 17:31 IST

ಬೆಂಗಳೂರು, ಮೇ 8: ‘ಸರಕಾರಿ ನೇಮಕದ ಅಕ್ರಮವನ್ನು ಪತ್ರಿಕೆಯೊಂದರ ವರದಿ ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದೆ. ರಾಜ್ಯ ಸರಕಾರಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ? ‘ಸರಕಾರಿ ಕೆಲಸಗಳ ‘ಕಾಸ್'ಗೀಕರಣ' ಎಗ್ಗಿಲ್ಲದೆ ನಡೆದಿದೆ ಎನ್ನುವುದು ಇದರಿಂದ ವೇದ್ಯವಾಗುತ್ತಿದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಸ್ವಜನ ಪಕ್ಷಪಾತ, ಕಳ್ಳಮಾರ್ಗ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪೊಲೀಸ್ ನೇಮಕಾತಿ ಮಂಡಳಿಗಳು ಲಂಚಗುಳಿತನದ ಕೂಪಗಳಾಗಿವೆ' ಎಂದು ದೂರಿದ್ದಾರೆ.

‘ಪ್ರತಿಹುದ್ದೆಗೂ ರೇಟ್ ಫಿಕ್ಸ್ ಮಾಡಿರುವ ಸರಕಾರವು ‘ಉದ್ಯೋಗ ವ್ಯಾಪಾರೀಕಣ'ವನ್ನೇ ‘ಅಧಿಕೃತ ಕಸುಬು' ಮಾಡಿಕೊಂಡಿದೆ. ‘ಸರಕಾರಿ ಕೆಲಸದ ರೇಟ್ ಕಾರ್ಡ್' ಬಗ್ಗೆ ನಾನು ಪದೆಪದೇ ಹೇಳುತ್ತಲೇ ಇದ್ದೆ. ಕೆಪಿಎಸ್ಸಿ ಹುದ್ದೆಗಳ ‘ಮುಕ್ತ ಮಾರಾಟ'ದ ಬಗ್ಗೆಯೂ ಹೇಳಿದ್ದೆ. ಆದರೆ, ಸರಕಾರದ್ದು ಜಾಣನಿದ್ದೆ. ನಾನು 2ಸಲ ಸಿಎಂ ಆಗಿದ್ದಾಗ ಕೆಪಿಎಸ್ಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದೆ. ಕೆಪಿಎಸ್ಸಿಯನ್ನು ತೊಳೆಯುತ್ತೇನೆಂದ ‘ಸಿದ್ದಹಸ್ತ'ರೊಬ್ಬರು ಬಿಡಿಎಯನ್ನು ಗುಡಿಸಿಗುಂಡಾಂತರ ಮಾಡಿದ್ದ, ‘ರೀಡೂ ಋಣ'ದ ‘ತಿಮಿಂಗಿಲ'ವನ್ನೇ ತಂದು ಕೆಪಿಎಸ್ಸಿಯಲ್ಲಿ ಕೂರಿಸಿದ್ದರು. ಆದರೆ, ಭಷ್ಟರು ಉದ್ಯೋಗಸೌಧದ ಮೆಟ್ಟಿಲು ಹತ್ತಲು ನಾನು ಬಿಟ್ಟಿರಲಿಲ್ಲ' ಎಂದು ತಿಳಿಸಿದ್ದಾರೆ.

‘2018ರಲ್ಲಿ ಸಿಎಂ ಆಗಿದ್ದಾಗ ‘ಸಿದ್ದಹಸ್ತರು' ತಮಗೆ ಬೇಕಾದವರ ಹೆಸರನ್ನು ಶಿಫಾರಸು ಮಾಡಿ, ಕೆಪಿಎಸ್ಸಿಯಲ್ಲಿ ಪ್ರತಿಷ್ಟಾಪಿಸಿ ಎಂದು ಒತ್ತಡ ಹೇರಿದ್ದರು. 2006ರಲ್ಲಿ ಕೆಲ ಶಾಸಕರು ತಮ್ಮ ಸಮುದಾಯದವರನ್ನು ಕರೆತಂದು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿ ಎಂದು ದುಂಬಾಲು ಬಿದ್ದಿದ್ದರು. ಅವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದೆ. ನನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ಯಾವುದೇ ಇಲಾಖೆಯಲ್ಲಿ ನೇಮಕದ ಅಕ್ರಮ ನಡೆದಿಲ್ಲ. ಸಚ್ಛಾರಿತ್ರ್ಯ, ಅರ್ಹತೆ ಇದ್ದವರನ್ನೇ ಕೆಪಿಎಸ್ಸಿಗೆ ನೇಮಕ ಮಾಡಿದ್ದೆ. ಅಂತಹ ನೇಮಕಾತಿ ಅಥವಾ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಲೋಪವೂ ಆಗಿಲ್ಲ. ಒಂದು ವೇಳೆ ಲೋಪವಾಗಿದ್ದರೆ ಯಾವುದೇ ತನಿಖೆಗೂ ನಾನು ಸಿದ್ಧ' ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

‘ನೇಮಕಾತಿ ಸಂಸ್ಥೆಗಳು ಹುಟ್ಟಿದಾಗಿನಿಂದಲೂ ರಾಜಕೀಯ ಕಾರಣಗಳಿಗೆ ಕೆಲವರು ಉದ್ಯೋಗ ಗಿಟ್ಟಿಸುತ್ತಿದ್ದರು. ‘ಸಾಧ್ಯವಾದರೆ ಸಹಾಯ ಮಾಡಿ' ಎಂದು ಶಾಸಕರೋ, ಮತ್ತ್ಯಾರೋ ಮನವಿ ಮಾಡುತ್ತಿದ್ದರು. ಅಂಥ ಅಭ್ಯರ್ಥಿಗಳು ಅರ್ಹ ಅಂಕ ಪಡೆದಿದ್ದರೆ ಮಾತ್ರ ಆಯ್ಕೆ ಆಗುತ್ತಿದ್ದರು. ಹಿಂದೆ ಶಿಫಾರಸು ಅಭ್ಯರ್ಥಿಗಳಿಗೆ ಅರ್ಹತೆ ಇಲ್ಲದಿದ್ದರೆ ಸಿಎಂ ಹೇಳಿದರೂ ಕೆಲಸ ಆಗುತ್ತಿರಲಿಲ್ಲ. ಯಾವಾಗ ಹಣ, ಜಾತಿಗಳ ಪ್ರಭಾವ ಹೆಚ್ಚಾಯಿತೋ ‘ಸರಕಾರಿ ಕೆಲಸಗಳ ‘ಕಾಸ್'ಗೀಕರಣ'ವೂ ಶುರುವಾಯಿತು' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪಿಎಸ್ಸೈ ಅಕ್ರಮದ ಬಗ್ಗೆ ಕಹಿಸತ್ಯಗಳನ್ನು ಹೇಳಿದ ನನ್ನನ್ನೆ ದಾಖಲೆ ಕೊಡಿ ಎನ್ನುವ ಸರಕಾರಕ್ಕೆ ‘ಸಾಚಾತನ'ದ ಕೊರತೆ ಇದೆ. ಹಿಟ್ ಆಂಡ್ ರನ್ ಎನ್ನುವ ಮೂಲಕ ಕೆಲವರು ಅಕ್ರಮದ ಬಲೆಯಿಂದ ಅಕ್ಕಪಕ್ಕ ಸರಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ'

-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News