ಆಡಳಿತ ಶೈಲಿಯಲ್ಲಿ ಬದಲಾವಣೆಯ ಸಂಕಲ್ಪ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕರೆ

Update: 2022-05-08 16:05 GMT
ಜಿಲ್ಲಾಧಿಕಾರಿಗಳ ಸಭೆಯಲ್ಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 8: ಆಡಳಿತ ಶೈಲಿಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಬೇಕು. ದೀನ ದಲಿತರು, ಬಡವರು ಹಾಗೂ ರೈತರಿಗೆ ಸರಕಾರದ ಯೋಜನೆಗಳನ್ನು ತಲುಪಿಸಬೇಕು. ಕಚೇರಿ ಕೆಲಸದ ಅವಧಿಯನ್ನು ವಿಸ್ತರಿಸಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರವಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲ ಸಹಾಯಕ ಕಮಿಷನರ್, ತಹಶೀಲ್ದಾರ್, ಎಡಿಸಿಗಳು ಜೊತೆಗಿರಬೇಕು. ಬಡವರಿಗೆ ಸಹಾಯ ಮಾಡಲು ಏನೇ ನಿರ್ಧಾರ ತೆಗೆದುಕೊಂಡರೂ ಸರಕಾರ ನಿಮ್ಮ  ರಕ್ಷಣೆಗೆ ನಿಲ್ಲುತ್ತದೆ. ಕಷ್ಟದಲ್ಲಿರುವ  ಬಡವರಿಗೆ ಸಹಾಯ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಅದರಿಂದ ನಿಮಗೂ ತೃಪ್ತಿ ದೊರೆಯುವುದು ಎಂದು ಹೇಳಿದರು.

ಜನಸಾಮಾನ್ಯರಿಗೆ ಆಡಳಿತದಲ್ಲಿ ಬದಲಾವಣೆ ಆಗುತ್ತಿದೆ. ಸರಳ, ಸುಲಭ ಮತ್ತು ಸ್ವಚ್ಛವಾಗಿದೆ ಎಂಬ ಭಾವನೆ ಬರುವಂತೆ ಆಡಳಿತ ನೀಡಬೇಕು. ನಾವು ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡಬೇಕು. ನನ್ನ ಕಲ್ಪನೆಯ ನವ ಕರ್ನಾಟಕದ ಸಾಕಾರಕ್ಕೆ ನಿಮ್ಮ ಸಹಕಾರ ಅಗತ್ಯ. ಜಿಲ್ಲಾಡಳಿತ ರಾಜ್ಯದ ಬೆಳವಣಿಗೆಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಿಲ್ಲಾಧಿಕಾರಿಗಳ ಪಾತ್ರ ಹಲವು ಜವಾಬ್ದಾರಿಗಳನ್ನು ಸನ್ನಿವೇಶಕ್ಕೆ ತಕ್ಕ ಹಾಗೆ ವಹಿಸಿಕೊಳ್ಳಬೇಕಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಎಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆಯೋ ಅಷ್ಟು ಆಡಳಿತವೂ ಕ್ರಿಯಾಶೀಲವಾಗಿರುತ್ತದೆ' ಎಂದು ಅವರು ಸೂಚಿಸಿದರು.

ಜಿಲ್ಲಾಧಿಕಾರಿಯಾಗುವುದು ವಿಶೇಷ. ಜಿಲ್ಲೆಯಲ್ಲಿ ನೇರ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತೀರಿ. ಪರಿಸ್ಥಿತಿಗೆ ತಕ್ಷಣ ಸ್ಪಂದಿಸಬೇಕಾಗುತ್ತದೆ. ಔಪಚಾರಿಕವಾಗಿ ಕೆಲಸ ಮಾಡಬೇಕಿಲ್ಲ. ತಕ್ಷಣದ ಕ್ರಮವಹಿಸಬೇಕು. ಕ್ರಿಯಾಶೀಲರಾಗಿದ್ದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಈಗ ಕಾಲ ಬದಲಾಗಿದೆ. ಜನ ಜಾಗೃತರಾಗಿದ್ದಾರೆ. ನಿಮ್ಮ ಕೆಲಸವನ್ನು ಪ್ರಶ್ನೆ ಮಾಡುತ್ತಾರೆ. ಕ್ರಿಯಾಶೀಲವಾಗಿ ಕೆಲಸ ಮಾಡಿದರೆ ಪ್ರಶ್ನೆ ಮಾಡುವ ಪ್ರಮೇಯವೇ ಇರುವುದಿಲ್ಲ' ಎಂದು ಸಿಎಂ ಕಿವಿಮಾತು ಹೇಳಿದರು.

ಪರಿಹಾರ ನೀಡುವ ಕಾರ್ಯಕ್ರಮಗಳಲ್ಲಿ ಅಕ್ರಮಗಳನ್ನು ತಡೆಯಬೇಕು. ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ವಿಳಂಬ ಧೋರಣೆ ಸಲ್ಲದು. ವಿಳಂಬ ಧೋರಣೆಯು ಒಟ್ಟಾರೆ ರಾಜ್ಯದ ವರ್ಚಸ್ಸಿನ ಮೇಲೆ ಪ್ರಭಾವ ಬೀರಲಿದೆ. ಸರಕಾರದ ಕಡೆಯ ವರ್ಷವಾಗಿರುವುದರಿಂದ ಈ ವರ್ಷ ಅನುಷ್ಟಾನಗೊಳ್ಳಬೇಕಿರುವ ಬಜೆಟ್ ಕಾರ್ಯಕ್ರಮಗಳನ್ನು ಸೂಕ್ತವಾಗಿ ಯೋಜಿಸಬೇಕು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿಬೇಕು. ಈ ಬಗ್ಗೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲೇ ಸೆಲ್ ರಚಿಸಿ: ಎಲ್ಲ ತಹಶೀಲ್ದಾರರ ಹಾಗೂ ಅಪರ ಜಿಲ್ಲಾಧಿಕಾರಿಗಳ ಕಚೇರಿಗೆ ವಾರಕ್ಕೊಮ್ಮೆ ಭೇಟಿ ನೀಡಬೇಕು. ಅರ್ಜಿಗಳು ಬಾಕಿ ಉಳಿಯದಂತೆ ಕ್ರಮ ವಹಿಸಬೇಕು. ರಾಜ್ಯದ ವಿವಿಧ ಭಾಗಗಳಿಂದ ಸಿಎಂ ಕಚೇರಿಯಲ್ಲಿ 16,436 ಅರ್ಜಿಗಳು ಬಂದಿವೆ. 10 ಸಾವಿರ ನಿಮಗೆ ಕಳುಹಿಸಿದೆ. 6 ಸಾವಿರ ಬಾಕಿ ಇವೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಒಂದು ಸೆಲ್ ರಚಿಸಬೇಕು ಎಂದು ಅವರು ಸೂಚಿಸಿದರು. 

ಅರ್ಜಿ ಕೊಟ್ಟರೆ ಕೆಲಸವಾಗುವುದಿಲ್ಲ ಎಂಬ ಮಾತಿದೆ. ನಿಮ್ಮ ಪಾತ್ರ ಬಹಳ ಮುಖ್ಯ. ಬಡವರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮಹತ್ವ ನೀಡಿ. ದೌರ್ಜನ್ಯ ಪ್ರಕರಣಗಳ ಬಗ್ಗೆ ಗಮನ ನೀಡಿ, ಸರ್ಕಾರ ಪ್ರಮುಖ ಕಾರ್ಯಕ್ರಮಗಳಾದ ಮನೆ ಬಾಗಿಲಿಗೆ ದಾಖಲೆಗಳು ಮುಂತಾದವುಗಳ ಬಗ್ಗೆ ಪರಿಶೀಲಿಸಿ.  ಪ್ರಾಧಿಕಾರದ ಅರ್ಜಿಗಳು, ಭೂ ಮಂಜೂರಾತಿ ಪ್ರಕರಣಗಳು, ಪಿಂಚಣಿಗಳು, ಗ್ರಾಮ ಒನ್ ಮುಂತಾದ ಯೋಜನೆಗಳ ಅನು ನದ ಬಗ್ಗೆ ಗಮನ ಹರಿಸಿ. ನಿಮ್ಮ ಆಡಳಿತದ ವೈಖರಿಯನ್ನು ಬದಲಾಯಿಸಿ, ಜನಪರ ಆಡಳಿತ ನೀಡಿ. ಉತ್ತರದಾಯಿತ್ವ, ಪಾರದರ್ಶಕತೆ ಇರಲಿ ಎಂದು ಅವರು ಸಲಹೆ ಮಾಡಿದರು.

ಸಿಎಂ ಕಚೇರಿಯಿಂದ ಬಂದ ಕಡತಗಳಿಗೆ ಪ್ರತಿಕ್ರಿಯೆ ನೀಡಬೇಕು. ಬಡಜನರು, ನಿರ್ಗತಿಕರು ಬರುತ್ತಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಜನರ ಪರವಾಗಿ ಕೆಲಸ ಮಾಡಲು ಒಂದು ಕಾರಣವಿದ್ದರೂ ಮಾಡಬೇಕು. ಎಲ್ಲ ಪ್ರಕರಣಗಳನ್ನು ತಿರಸ್ಕರಿಸಿದರೆ ಪ್ರಾಮಾಣಿಕರು ಎಂದು ಅರ್ಥವಲ್ಲ. ಜನರಿಗೆ ಸಹಾಯ ಮಾಡಿ. ಅದಕ್ಕಾಗಿ ಸ್ವಲ್ವವಾದರೂ ತೊಂದರೆ ತೆಗೆದುಕೊಳ್ಳಬೇಕು. ಆಡಳಿತಕ್ಕೆ ಚುರುಕು ಮುಟ್ಟಿಸಲು ಹಾಗೂ ಬಜೆಟ್ ಕಾರ್ಯಕ್ರಮಗಳ ಅನುಷ್ಟಾನವನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳುವುದು ಎಂದು ಸೂಚಿಸಿದರು.

72 ಗಂಟೆಗಳಲ್ಲಿ ಅರ್ಜಿ ವಿಲೇವಾರಿಯಾಗುವ ಬಗ್ಗೆ ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡುವುದು. ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಜಿನೋಮ್ ಸೀಕ್ವೆನ್ಸಿಂಗ್ ಎಲ್ಲ ಪ್ರಕರಣಗಳಿಗೂ ಮಾಡುವ ಅಗತ್ಯವಿಲ್ಲ. 15-18 ವಯೋಮಾನದವರಿಗೆ ಶೇ.100ರಷ್ಟು ಲಸಿಕೆ ಹಾಕುವುದು. ಗ್ರಾಮ ಒನ್ ಕೇಂದ್ರಗಳ  ಸ್ಥಾಪನೆಯ ಸ್ಥಿತಿಗತಿ ವ್ಯವಸ್ಥೆ ಪರಿಪೂರ್ಣವಾಗಿರಬೇಕು. ಯೋಜನೆಯನ್ನು ಟಾಸ್ಕ್‍ನಂತೆ ಕೈಗೊಳ್ಳಬೇಕು.  ಪ್ರಾದೇಶಿಕ ಆಯುಕ್ತರು ಮೇಲ್ವಿಚಾರಣೆ ಮಾಡುವುದು.

ಆಯವ್ಯಯದ ಘೋಷಣೆಗಳಲ್ಲಿ ವಿವಧ ಯೋಜನೆಗಳಲ್ಲಿ ಜಮೀನಿನ ಅವಶ್ಯಕತೆ ಇದೆ. ಜಮೀನನ್ನು  ಆದ್ಯತೆಯ ಮೇಲೆ ಒಂದು ತಿಂಗಳೊಳಗೆ ಗುರುತಿಸಿ. ಗೋಶಾಲೆಗಳ ನಿರ್ಮಾಣಕ್ಕೆ 10 ಎಕರೆ ಜಮೀನನ್ನು ಎಲ್ಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗುರುತಿಸಲು ಸೂಚನೆ 19 ಜಿಲ್ಲೆಗಳಲ್ಲಿರುವ ಅಲೆಮಾರಿಗಳಿಗೆ ವಸತಿ ನಿರ್ಮಿಸಲು ಸ್ಥಳ ಗುರುತಿಸಬೇಕು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಾರಾಯಣಗುರುಗಳ ವಸತಿ ಶಾಲೆಗಳ ನಿರ್ಮಾಣಕ್ಕೆ ಆದ್ಯತೆ ಮೇಲೆ  ಜಮೀನು ಗುರುತಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News